ಮಂಗಳೂರು: ನಿನ್ನೆ ತಾನೆ ಮುಖ್ಯಮಂತ್ರಿ ಬೊಮ್ಮಾಯಿ ಮಂಗಳೂರು ಸ್ಫೋಟದ ಆರೋಪಿಗೆ ಉಗ್ರ ಸಂಘಟನೆಗಳ ಸಂಬಂಧ ಇದೆ ಎಂದು ಹೇಳಿದ್ದರು. ಈಗ ಆರೋಪಿ ಶಾರಿಕ್ ಇಸ್ಲಾಮಿಕ್ ಸ್ಟೇಟ್ಸ್ ಮಾದರಿಯಲ್ಲೇ ಕುಕ್ಕರ್ ಬಾಂಬ್ ಹಿಡಿದು ನಿಂತ ಫೋಟೊ ಒಂದು ವೈರಲ್ ಆಗುತ್ತಿದೆ.
ಈ ಫೋಟೊದಲ್ಲಿ ಶಾರಿಕ್ ಹಿಡಿದಿರುವ ವೈರ್ಗಳು ಇರುವ ಕುಕ್ಕರ್ ಬಾಂಬ್ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆ ತಯಾರಿಸುವ ರೀತಿಯಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಪ್ರಕಾರ ಶಾರಿಕ್ ಬಳಿ‘ ಬೇರೆ ಬೇರೆ ಹೆಸರಿನ ಆಧಾರ್ ಕಾರ್ಡ್ಗಳಿದ್ದು ಅವುಗಳನ್ನು ಬೇರೆ ಬೇರೆ ವಿಧಾನಗಳ ಮೂಲಕ ನಿರ್ವಹಿಸುತ್ತಿದ್ದ.
ಬಲ್ಲ ಮೂಲಗಳ ಪ್ರಕಾರ ಮಂಗಳೂರಿನಲ್ಲಿ ಬಾಂಬ್ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್ ಮಾಡಲು ರಿಕ್ಷಾದಲ್ಲಿ ಶಾರಿಕ್ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿದೆ. ಈ ಸಂದರ್ಭ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು.
ಕರ್ನಾಟಕ ಪೊಲೀಸರು ಹೇಳಿವ ಪ್ರಕಾರ ಈ ಹಿಂದೆ ಶಾರಿಕ್ ಕೊಯಮತ್ತೂರಿಗೆ ಹೋಗಿದ್ದ. ಅಲ್ಲಿಯೂ ದೇವಸ್ಥಾನದ ಬಳಿ ಇದೇ ರೀತಿಯ ಬಾಂಬ್ ಬ್ಲಾಸ್ಟ್ ನಡೆದಿತ್ತು. ಅದರ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಬಿಜೆಪಿಯ ಅಣ್ಣಾಮಲೈ ಪಟ್ಟು ಹಿಡಿದದ್ದನ್ನು ನೆನಪಿಸಿಕೊಳ್ಳಬಹುದು. ಆತ ಕೊಯಮತ್ತೂರಿಗೆ ಬೇರೆ ಹೆಸರಿನ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸಿದ್ದ.
ಅದಲ್ಲದೇ ಶಾರಿಕ್ ಇನ್ನಷ್ಟು ಬಾಂಬ್ ಬಲ್ಆಸ್ಟ್ ಮಾಡಲು ಸಜ್ಜಾಗಿದ್ದ. ಅದಕ್ಕೆ ಸಂಬಂಧಪಟ್ಟ ಸ್ಫೋಟಕ ವಸ್ತುಗಳು ಆತ ವಾಸವಿದ್ದ ಜಾಗದಲ್ಲಿ ಗುಪ್ತಚರ ಇಲಾಖೆಗೆ ಸಿಕ್ಕಿದ್ದವು. ಇಷ್ಟೇ ಅಲ್ಲದೇ ಅಲ್ಲಿ ಎರಡು ನಕಲಿ ಆಧಾರ್ ಕಾರ್ಡ್, ಒಂದು ಮೊಬೈಲ್ ಫೋನ್, ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಮ್ ಕಾರ್ಡ್ ಇತ್ಯಾದಿ ವಸ್ತುಗಳು ಆತ ಮೈಸೂರಿನಲ್ಲಿ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಸಿಕ್ಕಿದೆ.
ಪೊಲೀಸರ ಪ್ರಕಾರ, ಸ್ಫೋಟ ಮಾಡಲು ಡಿಟೋನೇಟರ್, ತಂತಿಗಳು ಮತ್ತು ಬ್ಯಾಟರಿಗಳನ್ನು ಅಳವಡಿಸಲಾದ ಕುಕ್ಕರ್ ಅನ್ನು ಬಳಸಲಾಗಿದೆ. ಸ್ಫೋಟದ ನಂತರ, ಆಟೋರಿಕ್ಷಾದ ಒಳಭಾಗ ಸಂಪೂರ್ಣವಾಗಿ ಹಾನಿಯಾಗಿದೆ.
‘ಮೇಲ್ನೋಟಕ್ಕೆ ಇದು ಭಯೋತ್ಪಾದಕ ಕೃತ್ಯವಾಗಿದೆ. ಶಾರಿಕ್ ಕೊಯಮತ್ತೂರು ಸೇರಿದಂತೆ ಪ್ರಯಾಣಿಸಿರುವ ಸ್ಥಳಗಳು ಆತನ ಭಯೋತ್ಪಾದಕ ಸಂಬಂಧವನ್ನು ಸ್ಪಷ್ಟವಾಗಿ ತೋರಿಸುತ್ತವೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ. (ಏಜೆನ್ಸೀಸ್)