ಬೆಂಗಳೂರು: ದೇಶದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಬಹಳಷ್ಟು ಬೆಳವಣಿಗೆಗಳು ನಡೆದಿವೆ.
ಸಭೆ ಬಳಿಕ ಅವರು ಸುದ್ದಿಗಾರರಿಗೆ ಸಭೆಯ ಸಾರಾಂಶವನ್ನು ತಿಳಿಸಿದ್ದು, ಇನ್ನೇನು ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಹೂಡಿರುವ ದಾವೆ ವಿಚಾರಣೆಗೆ ಬರಲಿರುವ ಕಾರಣ ಅದಕ್ಕೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಇಂದು ಈ ಸಭೆ ನಡೆಸಿದ್ದಾಗಿ ಹೇಳಿದ್ದಾರೆ.
ಜಸ್ಟಿಸ್ ಶಿವರಾಜ್ ಪಾಟೀಲ್ ಅವರೊಂದಿಗೆ ಇಂದು ಮೊದಲ ಸಭೆ ಮಾಡಲಾಗಿದೆ. ನಮ್ಮ ಕಡೆಯಿಂದ ಮಾಡಿಕೊಳ್ಳಬೇಕಾದ ಕಾನೂನು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿವರಾಜ್ ಪಾಟೀಲ್ ಅವರೂ ಬಹಳ ಭರವಸೆಯಿಂದ ಇದ್ದಾರೆ, ಈ ಸಭೆಯಲ್ಲಿ ನಮ್ಮ ಕಾನೂನು ತಂಡ ಸಹ ಇತ್ತು ಎಂಬುದಾಗಿ ಅವರು ವಿವರಿಸಿದ್ದಾರೆ.
ಗಡಿವಿವಾದ ಸಂಬಂಧ ನಾಳೆ ವಿರೋಧ ಪಕ್ಷದ ನಾಯಕರ ಜೊತೆ ಮಾತನಾಡಿ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ತೀರ್ಮಾನ ಮಾಡುತ್ತೇನೆ. ನಾಡಿದ್ದು ನಾನು ದೆಹಲಿಗೆ ಹೋದಾಗ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರನ್ನೂ ಭೇಟಿ ಮಾಡುತ್ತೇನೆ ಎಂದೂ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಮಗನಿಗಾಗಿ ಎರಡೇ ತಿಂಗಳಲ್ಲಿ ಹತ್ತು ಕೆ.ಜಿ. ತೂಕ ಕಳೆದುಕೊಂಡ ತಂದೆ; ಕಾರಣವಿದು…