ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಕರೊನಾ ವೈರಸ್, ಆಂಫನ್ ಚಂಡಮಾರುತದಂತಹ ನೈಸರ್ಗಿಕ ವಿಪತ್ತಿನ ನಿರ್ವಹಣೆಯಲ್ಲಿ ಸಂಪೂಣ್ ವಿಫಲವಾಗಿದೆ ಎಂದು ಅಲ್ಲಿನ ರಾಜ್ಯಪಾಲ ಜಗದೀಪ್ ಧಂಕರ್ ಹೇಳಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ನಡುವೆ ಕಳೆದ ಜುಲೈ ತಿಂಗಳಿನಿಂದಲೂ ಮುಸುಕಿನ ಗುದ್ದಾಟ ಇದ್ದೇ ಇದೆ. ಜಗದೀಪ್ ಅವರು ಅದೆಷ್ಟೋ ಬಾರಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದೀಗ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಕರೊನಾ ವೈರಸ್ ಪ್ರಸರಣ ಹೆಚ್ಚಾಗಿ ಆಗುತ್ತಿದ್ದರೂ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಲಿಲ್ಲ. ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಎಷ್ಟಿದೆ ಎಂಬುದಕ್ಕೆ ಈ ಸಂದರ್ಭವೇ ಸಾಕ್ಷಿ. ಹಾಗೇ, ಆಂಫನ್ ಚಂಡಮಾರುತ ಅಪ್ಪಳಿಸಿದಾಗಲೂ ಅದರ ನಿರ್ವಹಣೆಯಲ್ಲಿ ಸರ್ಕಾರ ಸೋತಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಪ್ರಜ್ಞಾ ಸಿಂಗ್ ಎಲ್ಲಿ?’- ಮಿಸ್ಸಿಂಗ್ ಪೋಸ್ಟರ್ಗೆ ಬಿಜೆಪಿಯಿಂದ ಉತ್ತರ; ಆಸ್ಪತ್ರೆಗೆ ದಾಖಲಾಗಿದ್ದಾರೆ ಸಂಸದೆ
ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರನ್ನು ಬೆದರಿಸುವುದು, ಹೆದರಿಸುವುದು ಒಂದು ಪರಿಪಾಠ ಆಗಿಬಿಟ್ಟಿದೆ. ನನಗೂ ಕೂಡ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ನ ಹಲವು ನಾಯಕರು ಬೆದರಿಕೆ ಹಾಕುತ್ತಾರೆ. ಈ ಗೂಂಡಾಗಿರಿಗಾಗಿಯೇ ಜನರನ್ನು ಆಡಳಿತ ಪಕ್ಷ ನೇಮಕ ಮಾಡಿಕೊಳ್ಳುತ್ತದೆ. ಅವರೇ ರಿಮೋಟ್ ಕಂಟ್ರೋಲರ್ಗಳಾಗಿರುತ್ತಾರೆ. ಇದಕ್ಕಾಗಿ ಸರ್ಕಾರ ಖಾಸಗಿಯವರಿಗೆ ಹೊರಗುತ್ತಿಗೆ ನೀಡಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಏನಾದರೂ ಇಂತಹ ಚಟುವಟಿಕೆಗಳು ತೀರ ಅಪಾಯಕಾರಿ ಪ್ರವೃತ್ತಿಗಳು ಎಂದು ಜಗದೀಪ್ ಧಂಕರ್ ಮುಕ್ತವಾಗಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲ, ತೃಣಮೂಲ ಕಾಂಗ್ರೆಸ್ನ ಕೆಲವು ಹಿರಿಯ ರಾಜಕಾರಣಿಗಳು ನನ್ನೊಂದಿಗೆ ಒಳ್ಳೆಯ ಸ್ನೇಹದಿಂದ ಇದ್ದಾರೆ. ಅವರೂ ನನ್ನಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳೇ ತೆಗೆದುಕೊಳ್ಳುತ್ತವೆ ಎಂದು ಅಳಲು ತೋಡಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ನಲ್ಲಿ ಹಿರಿಯ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಸೋಷಿಯಲ್ ಮೀಡಿಯಾಗಳಲ್ಲೂ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವಂತಿಲ್ಲ ಎಂದು ರಾಜ್ಯಪಾಲರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಹಲ್ಲುನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯ ಕಣ್ಣಿಗೆ ಬಲವಾಗಿ ಹೊಡೆದ ದಂತವೈದ್ಯ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಳ್ಳೆಯವರೇ. ಆದರೇನು ಮಾಡುವುದು ಆಕೆ ಯೋಧನಂತೆ ಇರುವುದಿಲ್ಲ..ಬದಲಿಗೆ ಜನರಲ್ ನಂತೆ ವರ್ತಿಸುತ್ತಾಳೆ ಎಂದು ಹೇಳಿದ್ದಾರೆ. ಹಾಗೇ, ಓರ್ವ ರಾಜ್ಯಪಾಲನಾಗಿ ಸರ್ಕಾರದೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಆದರೆ ಸರ್ಕಾರ ರಾಜ್ಯಕ್ಕೆ ಬರುವ ಆಪತ್ತು, ವಿಪತ್ತುಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವುದೇ ಬೇಸರ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’