ನವದೆಹಲಿ: ಪ್ರಸಕ್ತ ಐಪಿಎಲ್ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ಭಗ್ನವಾಗಿದೆ. ಮೇ 22ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ 4 ವಿಕೆಟ್ಗಳಿಂದ ಜಯಗಳಿಸಿತು. ಈ ಸೋಲಿನೊಂದಿಗೆ ಈ ಸೀಸನ್ನಲ್ಲಿ ಆರ್ಸಿಬಿ ಆಳ್ವಿಕೆ ಅಂತ್ಯಗೊಂಡಿದೆ.
ಆರ್ಸಿಬಿ ಸೋಲಿನ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಸೇರಿದಂತೆ ಕೆಲವರು ಎಂದಿನಂತೆ ಆರ್ಸಿಬಿ ವಿರುದ್ಧ ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದಾರೆ. ಇದೀಗ ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಕ್ರಿಶ್ ಶ್ರೀಕಾಂತ್ ಆಡಿರುವ ಮಾತುಗಳು ಆರ್ಸಿಬಿ ಅಭಿಮಾನಿಗಳ ಅತೀವ ಕೋಪಕ್ಕೆ ಕಾರಣವಾಗಿದೆ.
ಲೀಗ್ ಹಂತದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಆರ್ಸಿಬಿ ಪ್ಲೇಆಫ್ ಪ್ರವೇಶ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯದಲ್ಲಿ ಗೆಲುವಿನ ಬೆನ್ನಲ್ಲೇ ಆರ್ಸಿಬಿ ಸಂಭ್ರಮಾಚರಣೆ ಮಾಡಿತ್ತು. ಇದನ್ನೇ ಮುಂದಿಟ್ಟುಕೊಂಡು ತಮಿಳುನಾಡು ಮೂಲದ ಹಿರಿಯ ಕ್ರಿಕೆಟಿಗ ಶ್ರೀಕಾಂತ್ ಆರ್ಸಿಬಿ ಹಾಗೂ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಸ್ಕೆಯನ್ನು ಸೋಲಿಸಿದ ನಂತರ ಆರ್ಸಿಬಿ ತುಂಬಾ ಸಂಭ್ರಮಿಸಿತು ಎಂದಿರುವ ಶ್ರೀಕಾಂತ್, ಯಶಸ್ಸನ್ನು ಆನಂದಿಸುತ್ತಿರುವಾಗ ಮೌನವಾಗಿರಲು ಸಲಹೆ ನೀಡಿದ್ದಾರೆ.
ನೀವು ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಂಡು, ಸುಮ್ಮನೇ ಮುಂದುವರಿಯಬೇಕು. ನೀವು ಮಾಡುವ ಯಾವುದೇ ಕೆಲಸದಲ್ಲಿ ಅತಿಯಾಗಿ ವರ್ತಿಸಿದರೆ ಅಥವಾ ಶಬ್ಧ ಮಾಡಿದರೆ ಆ ಕೆಲಸವನ್ನು ನಿಮ್ಮಿಂದ ಮಾಡಲು ಸಾಧ್ಯವಿಲ್ಲ. ಸಿಎಸ್ಕೆ ವಿರುದ್ಧದ ಗೆಲುವಿನ ಬಳಿಕ ಆರ್ಸಿಬಿ ಅಭಿಮಾನಿಗಳು ಅನಗತ್ಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು ಮತ್ತು ಹೆಚ್ಚೆಚ್ಚು ಗರ್ವ ಪ್ರದರ್ಶಿಸುತ್ತಿದ್ದರು. ಹೀಗಾಗಿಯೇ ಪ್ಲೇಆಫ್ನಲ್ಲಿ ಆರ್ಸಿಬಿ ಹೊರಬಿದ್ದಿದೆ. ನೀವು ಕ್ರಿಕೆಟ್ ಆಡುವಾಗ ನಿಮ್ಮ ಬಾಯಿಯನ್ನು ಮುಚ್ಚಿಕೊಂಡು ಆಡಬೇಕು ಎಂದಿದ್ದಾರೆ.
ನೀವು ಚೆನ್ನಾಗಿ ಆಡಿದ್ದರೆ, ಅಭಿನಂದನೆಗಳು ಮತ್ತು ನೀವು ಕಳಪೆಯಾಗಿ ಆಡಿದರೆ ಟೀಕೆಗಳನ್ನು ಸ್ವೀಕರಿಸಿ. ಆದರೆ, ನೀವು ಎಂದಿಗೂ ಬಾಯಿ ತೆರೆದು ಆಕ್ರಮಣವನ್ನು ತೋರಿಸಬಾರದು. ಪ್ಲೇಆಫ್ಗೆ ಅರ್ಹತೆ ಪಡೆದಿದ್ದಕ್ಕಾಗಿ ಮತ್ತು ಸೋಲಿನಿಂದ ಪುಟಿದೆದ್ದರಿಂದ ತಮ್ಮನ್ನು ತಾವೇ ಅಭಿನಂದಿಸಿಕೊಂಡರು. ಸಿಎಸ್ಕೆ ಮತ್ತು ಮುಂಬೈ ಎಂದಿಗೂ ಈ ರೀತಿ ಮಾಡಲಿಲ್ಲ. ಎರಡೂ ತಂಡಗಳು ಎಲ್ಲಿಂದಲೋ ಬಂದು ಪ್ರಶಸ್ತಿಗಳನ್ನು ಗೆದ್ದಿವೆ. ಈ ಹುಡುಗರು ಆರು ಪಂದ್ಯಗಳನ್ನು ಗೆದ್ದರು ಮತ್ತು ಅವರು ಅರ್ಹತೆ ಪಡೆದ ತಕ್ಷಣವೇ ನಾಕ್ಔಟ್ ಆದರು ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶ್ರೀಕಾಂತ್ ಹೇಳಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್ನೊಂದಿಗೆ 8 ವಿಕೆಟ್ಗೆ 172 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 6 ವಿಕೆಟ್ಗೆ 174 ರನ್ಗಳಿಸಿ ರೋಚಕ ಗೆಲುವು ಕಂಡಿತು. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. (ಏಜೆನ್ಸೀಸ್)
ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎನ್ನುತ್ತಿರುವ ನಟಿ ಹೇಮಾಗೆ ಬಿಗ್ ಶಾಕ್! ಮತ್ತೊಂದು ಸಾಕ್ಷಿ ಬಹಿರಂಗ