ಬೆಂಗಳೂರು: ಆರ್ಸಿಬಿ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿರುವ ಇಂದಿನ ಪಂದ್ಯಕ್ಕೆ ವರುಣ ದೇವ ಅಡ್ಡಿ ಪಡಿಸಿದ್ದಾನೆ! ಬೆಂಗಳೂರಿನ ವಿವಿಧೆಡೆ ಸಂಜೆ ಮೂರು ಗಂಟೆಯ ಬಳಿಕ ಭಾರೀ ಗಾಳಿ-ಮಳೆಯಾಗುತ್ತಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡದ ನಡುವಿನ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪಂದ್ಯ ನಡೆಯಬಹುದು!
ಶನಿವಾರ ಸಂಜೆಯೂ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಎರಡೂ ತಂಡಗಳ ಆಟಗಾರರಿಗೆ ಅಭ್ಯಾಸಕ್ಕೆ ಅಡಚಣೆ ಉಂಟಾಗಿತ್ತು. ಇಂದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದ್ದರೂ, ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣ ನೀರು ಇಂಗಿಸುವ ಸಬ್ಏರ್ ವ್ಯವಸ್ಥೆ.
ಇದನ್ನೂ ಓದಿ: VIDEO| LSG ಆಟಗಾರನಿಗೆ ಕೊಹ್ಲಿ ಕೊಹ್ಲಿ ಎಂದು ಛೇಡಿಸಿದ ಜನಸಮೂಹ!
ಹೌದು, ಮಳೆ ಬಂದರೂ ಯಾವುದೇ ಸಮಸ್ಯೆ ಉಂಟಾಗದಂತೆ ಪಂದ್ಯ ಆಯೋಜಿಸಲು ಬೇಕಾಗಿರುವಂತಹ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಮೈದಾನಕ್ಕೆ ಸಬ್ಏರ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದು ಕ್ರೀಡಾಂಗಣದಲ್ಲಿರುವ ನೀರನ್ನು ಬೇಗನೆ ಹೀರಿಕೊಳ್ಳುತ್ತದೆ. ಈ ವ್ಯವಸ್ಥೆಯ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಒದ್ದೆಯಾಗಿರುವ ಮೈದಾನವನ್ನು ಪಂದ್ಯಕ್ಕೆ ಯೋಗ್ಯವಾಗುವಂತೆ ಸಜ್ಜುಗೊಳಿಸಲು ಸಾಧ್ಯವಾಗುತ್ತದೆ.
ಆರ್ಸಿಬಿ ಪ್ಲೇಆಫ್ ಲೆಕ್ಕಾಚಾರ ಏನು?
ಆರ್ಸಿಬಿ ತಂಡ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲಿನೊಂದಿಗೆ 14 ಅಂಕ ಕಲೆಹಾಕಿ (+0.180) ಸದ್ಯ 4ನೇ ಸ್ಥಾನದಲ್ಲಿದೆ. ಮುಂಬೈ ಇಷ್ಟೇ ಅಂಕ ಹೊಂದಿದ್ದರೂ, ರನ್ರೇಟ್ (-0.128) ಲೆಕ್ಕಾಚಾರದ ಹಿನ್ನಡೆಯಿಂದ ರಾಜಸ್ಥಾನ (+0.148) ನಂತರ ಆರನೇ ಸ್ಥಾನದಲ್ಲಿದೆ. ಸಿಎಸ್ಕೆ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆದ್ದು 17 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಕಾರಣ ಆರ್ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ ತಪ್ಪಿದೆ. ಇನ್ನೀಗ ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆಯುವ ಅವಕಾಶ ಆರ್ಸಿಬಿ ಮುಂದಿದ್ದು, ಇದಕ್ಕಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಯಾವ ಲೆಕ್ಕಾಚಾರಕ್ಕೂ ಕಾಯದೆ ಸರಾಗವಾಗಿ ಪ್ಲೇಆಫ್ಗೆ ಏರಬಹುದಾಗಿದೆ.
ಇದನ್ನೂ ಓದಿ: IPL 2023 | ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ ಸ್ಪೋರ್ಟ್; 41.1 ಕೋಟಿ ಜನ ವೀಕ್ಷಕರು, 31600 ಕೋಟಿ ನಿಮಿಷ ವೀಕ್ಷಣೆ
ಆರ್ಸಿಬಿ ಉತ್ತಮ ರನ್ರೇಟ್ ಹೊಂದಿರುವುದು ಲಾಭದಾಯಕವೆನಿಸಿದೆ. ಅಲ್ಲದೆ ದಿನದ 2ನೇ ಪಂದ್ಯ ಆಡಲಿರುವ ಕಾರಣ, ಮುಂಬೈ-ಸನ್ರೈಸರ್ ನಡುವಿನ ಮೊದಲ ಪಂದ್ಯದ ಫಲಿತಾಂಶ ನೋಡಿಕೊಂಡು ಆಡುವ ಅನುಕೂಲವೂ ಆರ್ಸಿಬಿ ತಂಡಕ್ಕಿದೆ. ಮೊದಲ ಪಂದ್ಯದಲ್ಲಿ ಮುಂಬೈ ಗೆದ್ದರೆ ಆಗ ಆರ್ಸಿಬಿಗೆ ಗುಜರಾತ್ ಎದುರು ಗೆಲುವು ಅನಿವಾರ್ಯವಾಗಲಿದೆ. ಆದರೆ ಆರ್ಸಿಬಿ ತಂಡ ಗುಜರಾತ್ ವಿರುದ್ಧ ಸೋತಿದ್ದೇ ಆದರೆ ಆಗಲೂ ಪ್ಲೇಆಫ್ಗೇರಬೇಕಾದರೆ, ದಿನದ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಸನ್ರೈಸರ್ ವಿರುದ್ಧ ಸೋತಿರಬೇಕಾಗುತ್ತದೆ. ಮುಂಬೈ ಮೊದಲ ಪಂದ್ಯದಲ್ಲಿ ಸೋತರೆ ಆಗ ಆರ್ಸಿಬಿ ತಂಡ ಗುಜರಾತ್ ವಿರುದ್ಧ 5 ರನ್ಗೂ ಕಡಿಮೆ ಅಂತರದಲ್ಲಿ ಸೋತರೂ ಪ್ಲೇಆಫ್ಗೇರಬಹುದಾಗಿದೆ. ಒಂದು ವೇಳೆ ಮಳೆಯಿಂದಾಗಿ ಆರ್ಸಿಬಿ ತಂಡದ ಪಂದ್ಯ ರದ್ದುಗೊಂಡರೆ, ಆಗ ಮುಂಬೈ ತಂಡ ಮೊದಲ ಪಂದ್ಯದಲ್ಲಿ ಸೋತಿದ್ದರೆ ಮಾತ್ರ ಪ್ಲೇಆಫ್ಗೇರಬಹುದಾಗಿದೆ. ಆರ್ಸಿಬಿ (ಕನಿಷ್ಠ 6 ರನ್ಗಳಿಂದ) ಹಾಗೂ ಮುಂಬೈ ತಂಡಗಳೆರಡೂ ಸೋಲು ಕಂಡರೆ ಮಾತ್ರ ರಾಜಸ್ಥಾನಕ್ಕೆ ಪ್ಲೇಆಫ್ಗೇರುವ ಅವಕಾಶವಿದೆ.