ಮುಂಬೈ: ಮುಂಬೈನ ಚಿಣ್ಣರ ಬಿಂಬವು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಕರುನಾಡಿನ ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಮುಂಬೈನಲ್ಲಿ ಶ್ರೀಮಂತಗೊಳಿಸಿರುವ ‘ಚಿಣ್ಣರ ಬಿಂಬ’ಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಸಿಗುವಂತಾಗಲಿ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾರೈಸಿದರು.
ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಭಾನುವಾರ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಿದ ‘ಚಿಣ್ಣರ ಬಿಂಬ’ 20ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಿಣ್ಣರ ಬಿಂಬ ಅಂದರೆ ದೇವರ ಬಿಂಬ. ಪ್ರತಿ ಮನೆಯಲ್ಲಿ ಇದನ್ನು ಪೂಜಿಸಲಾಗುತ್ತಿದೆ. ತಂದೆ ತಾಯಂದಿರಿಗೆ ಮಕ್ಕಳಿಗಿಂತ ದೊಡ್ಡ ಸಂಪತ್ತಿಲ್ಲ. ಇದೀಗ ಐದು ಸಾವಿರಕ್ಕಿಂತಲೂ ಅಧಿಕ ಮಕ್ಕಳು ಈ ಸಂಸ್ಥೆಯಲ್ಲಿ ಕಲಿತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಜೀವನದ ಬಗ್ಗೆ ಸೂಕ್ತ ವೇದಿಕೆ ಕಲ್ಪಿಸಿರುವ ಏಕೈಕ ಸಂಸ್ಥೆ ಚಿಣ್ಣರ ಬಿಂಬ. ಮಕ್ಕಳನ್ನು ನಮ್ಮ ದೇಶದ ಸತ್ಪ್ರಜೆಯನ್ನಾಗಿಸುವಲ್ಲಿ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸರ್ಕಾರವು ಮಾಡಬೇಕಾದ ಕೆಲಸವನ್ನು ಮರಾಠಿ ಮಣ್ಣಲ್ಲಿ ಚಿಣ್ಣರ ಬಿಂಬವು ಮಾಡುತ್ತಿದೆ. ನಾವೆಲ್ಲರೂ ಒಂದಾಗಿ ಈ ಸಂಸ್ಥೆಗೆ ಒಂದು ಜಾಗವನ್ನು ದೊರಕಿಸುವಲ್ಲಿ ಸಹಕರಿಸೋಣ ಎಂದರು.
ಚಿಣ್ಣರ ಬಿಂಬ ರೂವಾರಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಮಾತನಾಡಿ, ಕರ್ನಾಟಕ ಸರ್ಕಾರವು ನಮಗೆ ಯಾವುದೇ ರೀತಿಯ ಬೆಂಬಲ ನೀಡುತ್ತಿಲ್ಲ, ಮುಂದಿನ ಬಜೆಟ್ನಲ್ಲಾದರೂ ಕನ್ನಡ ಕಟ್ಟುವ ಕೆಲಸಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ದಾನಿಗಳು ಸಹಕಾರ ನೀಡುವರೆಂಬ ಭರವಸೆಯಿಂದ ಚಿಣ್ಣರ ಬಿಂಬ ಭವನ ನಿರ್ಮಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದು ಪೂರ್ಣಗೊಳ್ಳುವುದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಚಿನ್ನರ ಬಿಂಬದ ಸ್ಥಾಪಕ ಕಾರ್ಯಾಧ್ಯಕ್ಷೆ ಪೂಜಾ ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಭಂಡಾರಿ, ಟ್ರಸ್ಟಿ ರೇಣುಕಾ ಭಂಡಾರಿ, ಗೌರವ ಅತಿಥಿಗಳಾಗಿ ಆಗಮಿಸಿದ್ದ ಒಕ್ಕೂಟದ ಚಂದ್ರಿಕಾ ಹರೀಶ್ ಶೆಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.
ನಿರರ್ಗಳ ಕನ್ನಡ, ಜಾನಪದದಲ್ಲಿ ಮೇಳೈಸಿದ ಚಿಣ್ಣರು
ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳು, ಪಾಲಕರ ಸಮೂಹಗಾಯನ ಹಾಗೂ ವೈವಿಧ್ಯಮಯ ಮನೋರಂಜನ ಕಾರ್ಯಕ್ರಮಗಳು ನಡೆದವು. ಚಿಣ್ಣರು ಸೊಗಸಾಗಿ ಭಜನೆ, ಅಚ್ಚಕನ್ನಡದಲ್ಲಿ ಸ್ಪಷ್ಟ ಮಾತುಗಳ ಮೂಲಕ ಚರ್ಚೆ, ಭಾಷಣವನ್ನು ಮಾಡಿ ನೆರೆದ ಜನರು ಹುಬ್ಬೇರಿಸುವಂತೆ ಸಾಮರ್ಥ್ಯ ಪ್ರದರ್ಶಿಸಿದರು. ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದರು, ಭಾವಗೀತೆ, ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ನಾಡಿನ ಕವಿ, ಸಾಹಿತಿಗಳನ್ನು ಚಿಣ್ಣರಿಗೆ ಪರಿಚಯಿಸಿ, ಅವರನ್ನು ಸ್ಮರಿಸುವ ಕಾರ್ಯವನ್ನು ಚಿಣ್ಣರು ಮಾಡಿದರು.
ಮುಂಬೈ ಕನ್ನಡಿಗರ ಮಕ್ಕಳಿಗೆ 2 ದಶಕಗಳಿಂದ ಕನ್ನಡ ಸಂಸ್ಕೃತಿ
ಕಳೆದ ಎರಡು ದಶಕಗಳಿಂದ ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ವಿವಿದ ಕಲೆ, ಚಿಣ್ಣರ ಸ್ಪರ್ಧೆಗಳು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಬಿಂಬಿಸುತ್ತಿದೆ. 6ರಿಂದ 14ವರ್ಷದೊಳಗಿನ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸವನ್ನು ಚಿಣ್ಣರ ಬಿಂಬ ಮಾಡುತ್ತಿದೆ.
ಸಿನಿಮಾ ಹಾಡು, ನೃತ್ಯದ ಅಬ್ಬರವಿರುವ ಪ್ರಸ್ತುತ ಕಾಲಮಾನದಲ್ಲಿ ಕೇವಲ ಜಾನಪದ ನೃತ್ಯಕ್ಕಷ್ಟೇ ಅವಕಾಶವಿದ್ದು ಚಿಣ್ಣರಲ್ಲಿ ನಮ್ಮ ನಾಡಿನ ಜಾನಪದ ವೈಭವವನ್ನು ತಿಳಿಸುವ ಪ್ರಯತ್ನದಲ್ಲಿ ಸಫಲತೆಯನ್ನು ಕಂಡಿತು. ಮಕ್ಕಳಲ್ಲಿ ಸುಪ್ತವಾಗಿ ಅಡಗಿದ್ದ ಅಭಿನಯ ಕೌಶಲವನ್ನು ಹೊರತರುವಲ್ಲಿ ಕಿರು ನಾಟಕ, ಯಕ್ಷಗಾನಗಳು ಸಹಕರಿಸುತ್ತಿವೆ. ಈ ಎಲ್ಲ ಸ್ಪರ್ಧೆಗಳು ಉತ್ತಮ ರೀತಿಯಲ್ಲಿ ನಡೆಯುವಲ್ಲಿ ಪಾಲಕರು, ತರಬೇತುದಾರರು ನಿರಂತರವಾಗಿ ಶ್ರಮಿಸುತ್ತಿದೆ.
296 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದ ದಂಪತಿ-ಮಗ; ಭೂಕಂಪದ 12 ದಿನಗಳ ಬಳಿಕ ಜೀವಂತ ರಕ್ಷಣೆ
6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ