ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಿಂದ ಮತ್ತೆ 10 ಸಾವಿರ ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 40 ಕಂಪನಿಗಳು, ಬಿಎಸ್ಎಫ್ ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ತಲಾ 20 ತುಕಡಿಗಳು ಇದರ ಜತೆಗೆ ಸಶಸ್ತ್ರ ಸೀಮಾ ಬಲದ ಸಿಬ್ಬಂದಿಯನ್ನು ಬುಧವಾರ ಕೇಂದ್ರ ಗೃಹ ಸಚಿವಾಲಯ ಹಿಂದಕ್ಕೆ ಪಡೆದಿದೆ.
ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿಗೂ ವಿಶ್ರಾಂತಿ ಅಗತ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಡಿಸೆಂಬರ್ನಲ್ಲಿ 82 ತುಕಡಿಗಳನ್ನು ವಾಪಸ್ ಕರೆಯಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ; ಮತ್ತೆ ಮೂರು ವಿಮಾನ ನಿಲ್ದಾಣಗಳು ಅದಾನಿ ಕಂಪನಿ ತೆಕ್ಕೆಗೆ; ಕೇಂದ್ರ ಸಂಪುಟದಿಂದ ಸಹಮತಿ
ಇನ್ನೊಂದೆಡೆ, ಯೋಧರೊಂದಿಗಿನ ಹಿಂಸಾತ್ಮಕ ಘರ್ಷಣೆಗಳು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿವೆ. ಜತೆಗೆ, ಉಗ್ರರ ನಿಗ್ರಹ ಚಟುವಟಿಕೆಗಳಿಗೆ ಸ್ಥಳೀಯರು ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಉಗ್ರರ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ. ಯೋಧರ ಮೇಲೆ ಕಲ್ಲು ತೂರಾಟದ ಘಟನೆಗಳು ಕಡಿಮೆಯಾಗಿವೆ. 2018ರಲ್ಲಿ 532 ಘಟನೆಗಳು ವರದಿಯಾಗಿದ್ದರೆ, 2019ರಲ್ಲಿ 389ಕ್ಕೆ ಇಳಿದಿತ್ತು. ಈ ವರ್ಷ ಇಲ್ಲಿಯವರೆಗೆ 102 ಪ್ರಕರಣಗಳಷ್ಟೇ ವರದಿಯಾಗಿವೆ.
ಇದನ್ನೂ ಓದಿ; ವಿಡಿಯೋ: ಗಾಯಾಳು ಹಸುವಿಗೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್ನಲ್ಲಿ ಕರೆದೊಯ್ದ ರೈತ…!
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದಾಗ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಂತಹಂತವಾಗಿ ಸಿಬ್ಬಂದಿಯನ್ನು ಕಡಿಮೆ ಮಾಡಲಾಗುತ್ತಿದ್ದರೂ ಇನ್ನೂ 40 ಸಾವಿರ ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ