ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿಡಿ ರಾಜಕಾರಣದ ಬಗ್ಗೆ ಹೇಳಿಕೆ ನೀಡಿದ್ದು ಅದು ರಾಜ್ಯಕ್ಕೆ ಕಳಂಕ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸಿಡಿ ರಾಜಕಾರಣ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೆಟ್ಟ ಪದ್ಧತಿ. ರಮೇಶ್ ಜಾರಕಿಹೊಳಿ ನನ್ನ ಬಳಿ ಹಲವು ಸಿಡಿಗಳಿವೆ ಎಂದು ಹೇಳಿದ್ದಾರೆ. ಇಂತಹ ದುಷ್ಕೃತ್ಯ ರಾಜ್ಯದಲ್ಲಿ ನಡೆಯಬಾರದು. ಇಂತಹ ಕೆಲಸ ಮಾಡುವವರ ವಿರುದ್ಧ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳಬೇಕು. ಸಿಬಿಐ ತನಿಖೆಯಾದರೆ ತಪ್ಪಿತಸ್ಥರು ಯಾರು ಎಂಬುದು ತಿಳಿಯುತ್ತದೆ. ಹೀಗಾಗಿ ಸಿಬಿಐ ತನಿಖೆ ಮಾಡಿಸಬೇಕು’ ಎಂದಿದ್ದಾರೆ.
ಇನ್ನು ಕೇಂದ್ರ ಬಜೆಟ್ ಬಗ್ಗೆಯೂ ಮಾತನಾಡಿದ ಮಾಜಿ ಸಚಿವರು, ‘ದೇಶದ ಇತಿಹಾಸದಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಮ್ಮ ವಿರೋಧಿಗಳು ಸಂತೋಷಪಡುವಂತಿದೆ. ಯುವಕರಿಗೆ, ಹೆಣ್ಣುಮಕ್ಕಳಿಗೆ, ರೈತರಿಗೆ ಅನುಕೂಲಕರ ಬಜೆಟ್ ಮಂಡಿಸಿದ್ದಾರೆ. ಶ್ರೀಮಂತರ ಬಳಿ ಟ್ಯಾಕ್ಸ್ ಕಲೆಕ್ಟ್ ಮಾಡಿ ಬಡವರಿಗೆ ನೀಡುವ ಬಜೆಟ್ ಇದಾಗಿದೆ.
ವಿಶೇಷವಾಗಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡಿರುವುದು ಸಂತೋಷಕರ ಸಂಗತಿ. ಇದರಿಂದ ಮಧ್ಯಕರ್ನಾಟಕ ಭಾಗದ ಒಂದು ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ. ಇದಕ್ಕಾಗಿ ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಕರ್ನಾಟಕದ ಮೇಲಿನ ಅಭಿಮಾನದಿಂದಾಗಿಯೇ ಈ ಯೋಜನೆ ರೂಪಿಸಿದ್ದಾರೆ’ ಎಂದಿದ್ದಾರೆ.