ಭೋಪಾಲ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನ ಕುರಿತಾದ ಡೈಲಾಗ್ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುಯಾಗಿದ್ದು, ನಟಿ ನಯನತಾರಾ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ಗೆ ಪ್ರೇರೆಪಿಸಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕ, ನಿರ್ದೇಶಕ, ನಯನತಾರಾ ಸೇರಿದಂತೆ ಏಳು ಮಂದಿ ವಿರುದ್ಧ ಮಧ್ಯಪ್ರದೇಶದ ಜಬಲ್ಪುರದ ಒಮ್ಟಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್ ಜಿಹಾದ್ಗೆ ಪ್ರೇರಣೆ ನೀಡಿದ ಆರೋಪದ ಮೇಲೆ ನಟಿ ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣನ್, ನೆಟ್ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್, ಸಿನಿಮಾದ ನಿರ್ಮಾಪಕ ಹೀಗೆ ಒಟ್ಟು ಏಳು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಲಂಚ; ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ ED ಆರೋಪ
ಸಿನಿಮಾದ ಬಗ್ಗೆ ವಿವಾದ ಏಳುತ್ತಿದ್ದಂತೆ ನೆಟ್ಫ್ಲಿಕ್ಸ್ ‘ಅನ್ನಪೂರ್ಣಿ’ ಸಿನಿಮಾವನ್ನು ತನ್ನ ಒಟಿಟಿ ವೇದಿಕೆಯಿಂದ ತೆಗೆದು ಹಾಕಿದೆ. ಜೀ ಸ್ಟುಡಿಯೋ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಈ ಸಿನಿಮಾವನ್ನು ಹಿಂದೂ ಹಾಗೂ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶದಿಂದ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
2023 ಡಿಸೆಂಬರ್ 01ರಂದು ಅನ್ನಪೂರ್ಣಿ ಚಿತ್ರ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಚಿತ್ರವು ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇತ್ತೀಚಿಗೆ ಸಿನಿಮಾದಲ್ಲಿನ ದೃಶ್ಯ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವನವಾಸದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿಗಳನ್ನು ಬೇಟೆ ಆಡಿ ತಿಂದಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಬರೆಯಲಾಗಿದೆ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.