ಬೆಂಗಳೂರು: ದೇಶೀಯ ತಂತ್ರಜ್ಞಾನದ ಮೂಲಕ ಬೆಂಗಳೂರು ಜಲಮಂಡಳಿ ಉತ್ಪಾದಿಸುತ್ತಿರುವ ಶೂನ್ಯ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರನ್ನು ವಿಪ್ರೊ ಸಂಸ್ಥೆಗೆ ಸರಬರಾಜು ಕಾರ್ಯಕ್ಕೆ ಗುರುವಾರ ಚಾಲನೆ ದೊರೆತಿದೆ.
ವಿಪ್ರೊ ಸಂಸ್ಥೆ ಕೆಲ ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಟ್ಯಾಂಕರ್ ಮೂಲಕ ನಿತ್ಯ 3 ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತದೆ. ಎಚ್ಎಎಲ್, ಬ್ರೂಕ್ಫಿಲ್ಡ್ ಮತ್ತು ಅಡೋಬ್ ಸಿಸ್ಟಮ್ಸ್ ಸೇರಿ 40 ಐಟಿ ಸಂಸ್ಥೆಗಳು ಸಂಸ್ಕರಿಸಿದ ನೀರಿಗಾಗಿ ಬೇಡಿಕೆಯಿಟ್ಟಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಜಲಮಂಡಳಿ ವತಿಯಿಂದ ಪ್ರಾರಂಭಿಸಲಾಗಿರುವ 34ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ನಿತ್ಯ 1,200 ಎಂಎಲ್ಡಿ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆ ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್ಗಳಿಂದ 6 ಎಂಎಲ್ಡಿಗೆ ತಲುಪಿದೆ ಎಂದರು.
ಐಟಿ ಸಂಸ್ಥೆಗಳಿಂದ ಹೆಚ್ಚಿನ ಬೇಡಿಕೆ:
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳ ಸಹಯೋಗದಲ್ಲಿ ಜಲಮಂಡಳಿ ಇಂಜಿನಿಯರ್ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನ ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯಿಂದ ನಿತ್ಯ 1 ಕೋಟಿ ಲೀಟರ್ನಷ್ಟು ಶೂನ್ಯ ಬ್ಯಾಕ್ಟೀರಿಯಾ ಸಂಸ್ಕರಿಸಿದ ನೀರು ಉತ್ಪಾದಿಸಬಹುದಾಗಿದೆ. ನಗರದ ಅಗರ, ಕೆ.ಸಿ. ವ್ಯಾಲಿ ಮತ್ತು ಬೆಳ್ಳಂದೂರು ಶುದ್ಧೀಕರಣ ಟಕಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬರುತ್ತಿದೆ ಎಂದರು.