ಬೆಂಗಳೂರು: ಪ್ರಯಾಣಿಕರು ರೈಲುಗಳಿಗೆ ಹತ್ತುವ ಸಂದರ್ಭದಲ್ಲಿ ಉಂಟಾಗುವ ಗೊಂದಲ ಹಾಗೂ ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಸುಗಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಿಶೇಷ ಕ್ರಮವೊಂದನ್ನು ಕೆಲ ಸಮಯದಿಂದ ಅನುಸರಿಸುತ್ತಿದೆ.
ಇದರ ಭಾಗವಾಗಿ ರೈಲ್ವೆ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಗಳಲ್ಲಿ ಜನರಲ್ ಬೋಗಿ ಪ್ರಯಾಣಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಒಬ್ಬೊಬ್ಬರಾಗಿ ರೈಲಿಗೆ ಹತ್ತಲು ಅನುವು ಮಾಡಿಕೊಡುತ್ತಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಪ್ಲಾಟ್ಫಾರಂನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸುವ ಮಾದರಿಯನ್ನು ಕೆಎಸ್ಆರ್ ಹಾಗೂ ಎಸ್ಎಂವಿಟಿ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತಿದೆ. ಎಸಿ ಹಾಗೂ ಇತರೆ ಬೋಗಿಗಳಲ್ಲಿ ಪ್ರಯಾಣಿಸುವ ಜನರು ಮೊದಲೇ ತಮ್ಮ ಆಸನ ಕಾಯ್ದಿರಿಸಿಕೊಂಡಿರುವುದರಿಂದ, ಈ ಬೋಗಿಗಳಿಗೆ ಹತ್ತಲು ಒತ್ತಡ ಉಂಟಾಗುವುದಿಲ್ಲ.
ಹಿರಿಯರಿಗೆ, ಮಹಿಳೆಯರಿಗೆ ಸಹಕಾರಿ
ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿರುವ ರೈಲು ಪ್ಲಾಟ್ಫಾರಂಗೆ ರೈಲ್ವೆ ಪೊಲೀಸರು ಜನರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸುತ್ತಾರೆ. ರೈಲಿನಲ್ಲಿರುವ ಪ್ರಯಾಣಿಕರು ಇಳಿದ ನಂತರವಷ್ಟೇ, ಹತ್ತಲು ತಿಳಿಸಲಾಗುತ್ತಿದೆ. ಈ ಕ್ರಮದಿಂದ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ರೈಲಿನಿಂದ ಇಳಿಯಲು ಹೆಚ್ಚಿನ ಸಹಾಯವಾಗುತ್ತಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.