ಮುಂಬೈ : ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮಹಾರಾಷ್ಟ್ರದ ಅಂದಿನ ಗೃಹ ಮಂತ್ರಿ ಅನಿಲ್ ದೇಶ್ಮುಖ್ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವುದಲ್ಲದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೀಗ ಮುಂಬೈನ ಇಬ್ಬರು ಬಿಸಿನೆಸ್ಮೆನ್ ಪರಮ್ ಬೀರ್ ಸಿಂಗ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಕ್ರಿಕೆಟ್ ಬುಕಿ ಆಗಿರುವ ಆರೋಪ ಎದುರಿಸುತ್ತಿರುವ ವ್ಯಾಪಾರಿ ಸೋನು ಜಾಲನ್, ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಮ್ಮಿಂದ 3.45 ಕೋಟಿ ರೂ. ಸುಲಿಗೆ ಮಾಡಿದ್ದರು ಎಂದು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ. ಮತ್ತೊಬ್ಬ ವ್ಯಾಪಾರಿ ಮಯೂರೇಶ್ ರೌತ್ ಕೂಡ ಈ ವಾರದ ಆರಂಭದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಥಾಣೆ ಪೊಲೀಸ್ ಇನ್ಸ್ಪೆಕ್ಟರ್ ರಾಜ್ಕುಮಾರ್ ಕೊತಮಿರೆ ಮತ್ತು ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ 2017 ರಲ್ಲಿ ಪರಮ್ ಬೀರ್ ಸಿಂಗ್ ಅವರ ಸೂಚನೆ ಮೇರೆಗೆ ತಮಗೆ ಕಿರುಕುಳ ನೀಡಿದ್ದರು ಮತ್ತು ತಮ್ಮ ಎರಡು ಐಷಾರಾಮಿ ಕಾರುಗಳನ್ನು ಕಸಿದಿದ್ದರು ಎಂದು ರೌತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ
ಜಾಲನ್ ಮತ್ತು ರೌತ್ ಇಬ್ಬರೂ ದಕ್ಷಿಣ ಮುಂಬೈನಲ್ಲಿರುವ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ) ಕಛೇರಿಗೆ ನಿನ್ನೆ ಭೇಟಿ ನೀಡಿದ್ದಾರೆ. ಎನ್ಐಎ ಅಧಿಕಾರಿಗಳು ಈ ಇಬ್ಬರು ವ್ಯಾಪಾರಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿಯ ಬಾಂಬ್ ಸ್ಕೇರ್ ಮತ್ತು ತದನಂತರ ಸಂಭವಿಸಿದ ವ್ಯಾಪಾರಿ ಮನ್ಸುಖ್ ಹಿರೇನ್ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು, ಅದಾಗಲೇ ಎನ್ಐಎ ನಡೆಸುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜ್ ಅವರನ್ನು ಅಮಾನತುಗೊಳಿಸಲಾಗಿದೆ. (ಏಜೆನ್ಸೀಸ್)
ಗಿವ್ ಇಂಡಿಯಾದಿಂದ ಆಮ್ಲಜನಕ ಸಾಂದ್ರಕಗಳ ಕೊಡುಗೆ ; ಯಲಹಂಕದಲ್ಲಿ ಬೋಯಿಂಗ್ನ ಚಿಕಿತ್ಸಾ ಘಟಕ