ಮುಂಬೈ: ನಾಪತ್ತೆಯಾಗಿದ್ದ ಯುವತಿಯೊಬ್ಬಳು ಒಂದು ತಿಂಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬಾಯ್ಫ್ರೆಂಡ್ನ ಡೆತ್ನೋಟ್ ನೆರವಿನಿಂದ ದೊರೆತ ಮಾಹಿತಿಯ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ.
ಮೃತ ಯುವತಿಯನ್ನು ವೈಷ್ಣವಿ (19) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ವೈಭವ್ ಆಕೆಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಂಧವನ್ನು ಕಡಿದುಕೊಂಡಿದ್ದಕ್ಕೆ ಆಕ್ರೋಶಗೊಂಡಿದ್ದ ವೈಭವ್, ವೈಷ್ಣವಿಯನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ಅಂದಹಾಗೆ ವೈಷ್ಣವಿ, ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. 2023ರ ಡಿಸೆಂಬರ್ 12ರಂದು ನಾಪತ್ತೆಯಾಗಿದ್ದಳು. ಬೆಳಗ್ಗೆ ಕಾಲೇಜಿಗೆ ಹೋದಾಕೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಒಂದು ತಿಂಗಳ ನಂತರ ಪೊಲೀಸರಿಗೆ ವೈಷ್ಣವಿಯ 24 ವರ್ಷದ ಬಾಯ್ಫ್ರೆಂಡ್ ವೈಭವ್ನ ಸೂಸೈಡ್ ನೋಟ್ ಸಿಕ್ಕಿದ ಬಳಿಕ ವೈಷ್ಣವಿ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.
ಡಿಸೆಂಬರ್ 12 ರಂದು ಸಂಜೆ ಪೊಲೀಸರು ವೈಭವ್ ಮೃತದೇಹವನ್ನು ರೈಲ್ವೇ ಹಳಿಯಿಂದ ಹೊರತೆಗೆದರು. ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ವೈಭವ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಆ ಸಂದರ್ಭದಲ್ಲೂ ವೈಷ್ಣವಿ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡ ವೈಭವ್ ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿತು.
ವಿಶೇಷ ತನಿಖಾ ತಂಡವು ವೈಭವ್ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ, ವೈಷ್ಣವಿ ಸಂಬಂಧವನ್ನು ಕೊನೆಗೊಳಿಸಿದ್ದಕ್ಕೆ ಆಕೆಯನ್ನು ಕೊಲ್ಲಲು ವೈಭವ್ ಹೊರಟಿದ್ದಾನೆ ಎಂದು ಬರೆದಿದ್ದ ಚೀಟಿಯೊಂದು ಪತ್ತೆಯಾಯಿತು. ಪೊಲೀಸರಿಗೆ ಫೋನ್ನಲ್ಲಿ L01-501 ಕೋಡ್ ಕೂಡ ಸಿಕ್ಕಿತು. ಈ ಕೋಡ್ ಅರಣ್ಯ ಇಲಾಖೆಯು ಖಾರ್ಘರ್ ಬೆಟ್ಟಗಳಲ್ಲಿನ ಮರಗಳಿಗೆ ನಿಗದಿಪಡಿಸಿದ ಕ್ರಮ ಸಂಖ್ಯೆ ಎಂಬುದು ತಕ್ಷಣ ಗೊತ್ತಾಯಿತು.
ಖಾರ್ಗರ್ ಬೆಟ್ಟದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪೊಲೀಸರು ವೈಭವ್ ಮತ್ತು ವೈಷ್ಣವಿ ಒಟ್ಟಿಗೆ ಇರುವ ದೃಶ್ಯಗಳು ಲಭ್ಯವಾಯಿತು. ವೈಷ್ಣವಿಯನ್ನು ಕತ್ತು ಹಿಸುಕಿ ಕೊಂದ ನಂತರ ವೈಭವ್ ಆಕೆಯ ಶವವನ್ನು ಮರದ ಬಳಿ L01-501 ಕೋಡ್ ಸಂಖ್ಯೆಯೊಂದಿಗೆ ಹೂತು ಹಾಕಿದ್ದಾನೆ ಎಂದು ಪೊಲೀಸರು ಕಂಡುಕೊಂಡರು. ಅದನ್ನು ಹೊರ ತೆಗೆದಾಗ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಶವದ ಬಳಿ ದೊರೆತ ವಾಚ್ ಮತ್ತು ಕಾಲೇಜು ಗುರುತಿನ ಚೀಟಿಯು ಆ ಶವ ವೈಷ್ಣವಿ ಅವರದೇ ಎಂದು ಖಚಿತಪಡಿಸಲು ಪೊಲೀಸರಿಗೆ ನೆರವಾಯಿತು. (ಏಜೆನ್ಸೀಸ್)
ರಾಮ ಮಂದಿರ ಪ್ರಸಾದವೆಂದು ಸ್ವೀಟ್ ಮಾರಾಟ: ಅಮೇಜಾನ್ಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ
ಅಯೋಧ್ಯೆಯಲ್ಲಿ ರಾಮೋತ್ಸವ: ಜ.22ರ ವಿಶೇಷ ದಿನಕ್ಕೆ ಸರ್ಕಾರಿ ರಜೆ ಘೋಷಿಸಿದ ರಾಜ್ಯಗಳಿವು…