ಬೆಂಗಳೂರು: ಬಿಗ್ಬಾಸ್ ಕನ್ನಡ 8ನೇ ಆವೃತ್ತಿ ವಿನ್ನರ್ ಮಂಜು ಪಾವಗಡ ತಮ್ಮ ನೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಆಶೀರ್ವಾದ ಪಡೆದಿದ್ದಾರೆ.
ಲ್ಯಾಗ್ ಮಂಜು ಶಿವಣ್ಣನ ಅಭಿಮಾನಿಯಾಗಿದ್ದು, ಭೇಟಿಗಾಗಿ ಇಂದು ಅವರ ನಿವಾಸಕ್ಕೆ ತೆರಳಿದ್ದರು. ಬಿಗ್ಬಾಸ್ ಫೈನಲ್ಗೂ ಮುಂಚೆ ಶಿವಣ್ಣ ವಿಡಿಯೋ ಮೂಲಕ ಮಂಜುಗೆ ಶುಭ ಕೋರಿದ್ದರು. ಈ ಒಂದು ಪ್ರೀತಿ, ಅಭಿಮಾನಕ್ಕಾಗಿ ಬಿಗ್ಬಾಸ್ ಗೆದ್ದ ನಂತರ ಶಿವಣ್ಣನಿಗೆ ಹೂಗುಚ್ಛ ನೀಡಿ ಆಶೀರ್ವಾದ ಪಡೆದಿದ್ದಾರೆ.
ಫಿನಾಲೆಗೆ ಕೆಲವು ದಿನಗಳು ಬಾಕಿ ಇರುವಾಗ ಬಿಗ್ಬಾಸ್ ಈ ಮನೆಯಲ್ಲಿ ನೆರವೇರದ ಆಸೆ ಇದ್ದರೆ ಹೇಳಿ ಎಂದು ಸ್ಪರ್ಧಿಗಳಿಗೆ ಸೂಚಿಸಿದ್ದರು. ಈ ವೇಳೆ ಮಂಜು ನಾನು ಶಿವಣ್ಣನ ಅಭಿಮಾನಿ ಫಿನಾಲೆಗೆ ಅವರ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದರು. ನಂತರ ಶಿವರಾಜ್ಕುಮಾರ್ ಅವರು ಗೆದ್ದು ಬನ್ನಿ ಮಂಜು ಲವ್ ಯೂ ಎಂದು ಹೇಳಿ ಸಂದೇಶವನ್ನು ಕಳುಹಿಸಿದ್ದರು. ಶಿವಣ್ಣ ಅವರ ಹಾರೈಕೆಯೊಂದಿಗೆ ಬಿಗ್ಬಾಸ್ ಗೆದ್ದಿರುವ ಮಂಜು ಇದೀಗ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.