ಬೆಂಗಳೂರು: ಬರೀ ಭಾನುವಾರದ ಲಾಕ್ಡೌನ್ನಿಂದ ಯಾವುದೇ ಪ್ರಯೋಜನ ಇಲ್ಲ. ಕನಿಷ್ಠ ಒಂದು ವಾರ ಲಾಕ್ಡೌನ್ ಘೋಷಿಸುವ ಅವಶ್ಯಕತೆ ಇದೆ ಎಂದು ಕೆಲವು ತಜ್ಞರು, ಸಚಿವರು ಅಭಿಮತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಶನಿವಾರ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ರಾಜ್ಯ ರಾಜಧಾನಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಒಂದೊಂದೇ ದಿನ ಲಾಕ್ಡೌನ್ ಏನೇನೂ ಸಾಕಾಗುವುದಿಲ್ಲ. ಕನಿಷ್ಠ ಒಂದು ವಾರವಾದರೂ ಲಾಕ್ಡೌನ್ ಮಾಡಬೇಕು ಅಂತ ಕೆಲವು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆ ಬಗ್ಗೆ ನನ್ನದೂ ಸಹಮತ ಇದೆ. ಆದರೆ ಸರ್ಕಾರದ ಮಟ್ಟದಲ್ಲಿ ಈ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿಯೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ; ಕದ್ದ ಹಣದಿಂದಲೇ ಖರೀದಿಸಿದ್ದ ಖಾಸಗಿ ವಿಮಾನ; ಸೈಬರ್ ಫ್ರಾಡ್ನಲ್ಲಿ ಈತನನ್ನು ಮೀರಿಸೋರೆ ಇಲ್ಲ…!
ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ‘‘ಲಾಕ್ಡೌನ್ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದರೂ, ಅದರಿಂದ ಸೋಂಕನ್ನು ತಾತ್ಕಾಲಿಕವಾಗಿ ಮುಂದೂಡಬಹುದೇ ವಿನಾ ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ ಎಂಬುದೂ ಸತ್ಯ. ಆದ್ದರಿಂದ ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರವನ್ನು ಸದ್ಯದಲ್ಲೇ ಕೈಗೊಳ್ಳಲಿದ್ದಾರೆ’’ ಎಂದು ತಿಳಿಸಿದರು.
ಕಂದಾಯ ಸಚಿವ ಅಶೋಕ್ ಕೂಡ ‘‘ವಾರಕ್ಕೆ ಎರಡು ದಿನ ಲಾಕ್ಡೌನ್ ಮಾಡುವಂತೆಯೂ ಕೆಲವು ಕಡೆಗಳಿಂದ ಒತ್ತಡ ಬರುತ್ತಿದೆ. ಆದರೆ ಸದ್ಯಕ್ಕೆ ಭಾನುವಾರ ಮಾತ್ರ ಲಾಕ್ಡೌನ್ ಇದೆ. ಶನಿವಾರದ ಲಾಕ್ಡೌನ್ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಾರ್ವಜನಿಕರು ಈ ಬಗ್ಗೆ ಅನುಮಾನ ಪಡುವುದು ಬೇಡ’’ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ; ಭಾರತದ ಬಗ್ಗೆ ಹೆಮ್ಮೆಯಿದೆ…; ಚೀನಾ ವಿರುದ್ಧ ಸೆಟೆದು ನಿಂತಿದ್ದಕ್ಕೆ ಮೋದಿಗೆ ಅಮೆರಿಕ ಶ್ಲಾಘನೆ
‘‘ಶನಿವಾರದ ಲಾಕ್ಡೌನ್ನ ಅವಶ್ಯಕತೆ ಏನಿದೆ? ಎರಡೆರಡು ದಿನ ಲಾಕ್ಡೌನ್ ಮಾಡುವುದು ಸೂಕ್ತವಲ್ಲ. ಈಗಾಗಲೇ ಜನರಲ್ಲಿ ಅರಿವು ಬಂದಿದೆ. ಜನರೇ ಸ್ವಯಂಪ್ರೇರಣೆಯಿಂದ ತಮ್ಮ ತಮ್ಮ ಏರಿಯಾ, ಗ್ರಾಮಗಳನ್ನು ಲಾಕ್ ಮಾಡಿಕೊಳ್ಳುತ್ತಿದ್ದಾರೆ. ಹೊರಗೆ ತಿರುಗಾಡುವುದನ್ನೂ ಕಡಿಮೆ ಮಾಡುತ್ತಿದ್ದಾರೆ’’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ, ‘‘ಮುಖ್ಯಮಂತ್ರಿ ನೇತೃತ್ವದ ಸಭೆ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಿದೆ. ಸೋಮವಾರ ಈ ಮಹತ್ವದ ಸಭೆ ನಡೆಯುವ ನಿರೀಕ್ಷೆ ಇದೆ. ಆ ಸಭೆಯಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ’’ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಈ ಎರಡು ಕರೊನಾ ಔಷಧಿ ಕೊಳ್ಳಲು ನಿಮ್ಮ ಆಧಾರ್ ಕಾರ್ಡ್ ರೆಡಿ ಇಟ್ಟುಕೊಳ್ಳಿ…!