ಬೆಂಗಳೂರು: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ತೇರ್ಗಡೆಯಾಗಲಿ ಎಂಬ ಉದ್ದೇಶದಿಂದ ಪ್ರತ್ಯೇಕ ತಂತ್ರಾಂಶ (ಆ್ಯಪ್) ಅಭಿವೃದ್ಧಿಪಡಿಸುತ್ತಿದ್ದು, ಫೆಬ್ರವರಿಯಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ನಮ್ಮ ಹೆಮ್ಮೆ ನಮ್ಮ ಕಾಮನ್ ಮ್ಯಾನ್ ಸಿಎಂ’ ಪರಿಕಲ್ಪನೆಯಡಿ ಯುವ ಸಂಭಾಷಣೆಯಲ್ಲಿ ಪಾಲ್ಗೊಂಡ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಅನೇಕ ಖಾಸಗಿ ಸಂಸ್ಥೆಗಳು ಹಣ ಪಡೆದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುತ್ತಿವೆ. ಎಲ್ಲರಿಗೂ ಅನುಕೂಲವಾಗುವಂತೆ ಸರ್ಕಾರವೇ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಪ್ರಶ್ನೆಗಳ ಬ್ಯಾಂಕ್ ಒಳಗೊಂಡು ಹತ್ತಾರು ಮಾಹಿತಿಗಳು ಈ ಆ್ಯಪ್ ನಲ್ಲಿರಲಿವೆ ಎಂದರು.
ವಿಶೇಷ ಬಸ್
ಒಳಾಂತರದ ಹಳ್ಳಿಗಳು, ಜನವಸತಿ ಪ್ರದೇಶಗಳ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ಸಾರಿಗೆ ಸಮಸ್ಯೆಯಿರುವುದು ಗಮನಕ್ಕಿದೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಈ ಕುರಿತು ಯೋಜನೆ ರೂಪಿಸಲು ಸೂಚಿಸಿರುವೆ. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಬೆಳಗ್ಗೆ ಮೂರರಿಂದ 11 ಹಾಗೂ ಮಧ್ಯಾಹ್ನ ಮೂರರಿಂದ ಸಂಜೆ 6ರವರೆಗೆ ವಿಶೇಷ ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವ ಚಿಂತನೆಯಿದೆ ಎಂದರು.
ಜಾಗೃತಿ
ಬಾಯಿ ಕ್ಯಾನ್ಸರ್ ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ತಂಬಾಕು ಜಗಿಯುವವರು ಹೆಚ್ಚಿರುವ ಕಾರಣ ಹೆಚ್ಚಿದೆ. ಸಮಸ್ಯೆ ಉಲ್ಬಣಿಸಿದ ನಂತರವೇ ಚಿಕಿತ್ಸೆಗೆ ಬರುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ. ವೈದ್ಯರ ಸಲಹೆಯನ್ನು ಜನರು ಸ್ವೀಕರಿಸಿ ಪಾಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ದಂತ ವೈದ್ಯಕೀಯ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಜಾಗೃತಿ ಅಭಿಯಾನ ಆಯೋಜಿಸುವ ಯೋಚನೆಯಿದೆ ಎಂದರು.
ಮಜಾ ಮಾಡ್ಲಾಕ್ಹತ್ತೀಯೇನೋ
ಆರಾಮ ಇದ್ದೀರಾ ಸರ್ ಎಂದು ವಿಜಯಪುರದ ವಿದ್ಯಾರ್ಥಿ ಆನ್ ಲೈನ್ ನಲ್ಲಿ ಪ್ರಶ್ನಿಸಿದಾಗ ನಾ ಆರಾಮ ಇದ್ದೀನಿ, ನೀನ್ ಹೆಂಗ್ಹಿದೆಯೋ ಎಂದು ಬೊಮ್ಮಾಯಿ ಮರು ಪ್ರಶ್ನೆಗೆ ನಾ ಆರಾಮ ಇದ್ದೀನ್ರಿ ಸರ ಎಂದು ವಿದ್ಯಾರ್ಥಿ ಉತ್ತರಿಸಿದ.
ಮನ್ಯಾಗ ಅಪ್ಪ, ಅಮ್ಮ ಹೆಂಗಿದಾರೆ ? ಎಂದು ಕೇಳಿದ ಬೊಮ್ಮಾಯಿಗೆ ಅವರೂ ಆರಾಮ ಇದ್ದಾರ ಸರ ಎಂದುತ್ತರಿಸಿದ. ನೀ ಇಲ್ಲಿ ಮಜಾ ಮಾಡ್ಲಕ್ಹತ್ತಿಯೇನೋ ಎಂದು ಬೊಮ್ಮಾಯಿ ನಗೆ ಚಟಾಕಿ ಹಾರಿಸಿದಾಗ ಸಭಾಂಗಣದಲ್ಲಿ ಗೊಳ್ಳನೆ, ಪ್ರಶ್ನೆ ಕೇಳಲು ಎದ್ದು ನಿಂತಿದ್ದಯೂ ಮುಸಿಮುಸಿ ನಗೆಬೀರಿದ.
ಬೆಂಗಳೂರು ಸೇರಿದ ರಾಜ್ಯದ ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೂ ಸಾಮಾಜಿಕ ಜಾಲ ತಾಣ ವೇದಿಕೆ ಸಂಸ್ಥಾಪಕ ಅಪ್ರಮೇಯ ಕಾರ್ಯಕ್ರಮ ನಿರ್ವಹಿಸಿದರು. ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿ, ಚಿತ್ರನಟಿ ಪ್ರಣೀತಾ ಸುಭಾಷ್, ರಘುಗೌಡ ಇದ್ದರು. ಅನಿಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯ್ ಜತೆ ಮಾಡಲು ಬಯಸುತ್ತೇನೆ! ಬೋಲ್ಡ್ ಹೇಳಿಕೆ ನೀಡಿದ ತಮಿಳು ನಟಿ ರೇಷ್ಮಾ ಪಸುಪುಲೇತಿ
ರೈಲಿನಲ್ಲಿ ಪ್ರಯಾಣಿಸುವಾಗ ಇಲಿ ಕಡಿತ: ಸಂತ್ರಸ್ತೆಗೆ 20 ಸಾವಿರ ರೂ. ಪರಿಹಾರ ನೀಡಲು ಆದೇಶ
ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್ನಲ್ಲಿ ಖಡಕ್ ಪ್ರತಿಕ್ರಿಯೆ ಕೊಟ್ಟ ಅಮಲಾ