ಹುಬ್ಬಳ್ಳಿ: ಏಪ್ರಿಲ್ 18ರಂದು ಮುಸ್ಲಿಂ ಯುವಕನಿಂದ ಭೀಕರವಾಗಿ ಹತ್ಯೆಗೀಡಾಗಿದ್ದ ಬಿವಿಬಿ ಕಾಲೇಜು ವಿದ್ಯಾರ್ಥಿನಿ, ಪಾಲಿಕೆಯ ಕಾಂಗ್ರೆಸ್ ಸದಸ್ಯನ ಪುತ್ರಿ ನೇಹಾ ಹಿರೇಮಠ್ ಮನೆಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿ ಘಟಕದ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ನೇಹಾ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಇದೊಂದು ಭೀಕರ ಘಟನೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. 15 ಸಾವಿರದಷ್ಟು ವಿದ್ಯಾರ್ಥಿಗಳು ಇರುವ ಕಾಲೇಜಿನ ಆವರಣದಲ್ಲಿ ಕೊಲೆ ನಡೆದಿದ್ದರೂ, ಸರ್ಕಾರ ಈವರೆಗೆ ಕಾಲೇಜ್ ಆವರಣದ ಸುರಕ್ಷತೆ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಬಗ್ಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ.
ಇದನ್ನೂ ಓದಿ: ಹಾರ್ದಿಕ್ರಿಂದ ನಾಯಕತ್ವ ಕಸಿದುಕೊಂಡ್ರಾ ರೋಹಿತ್ ಶರ್ಮಾ?; ಇಲ್ಲಿದೆ ಪುರಾವೆ
ನಮಗೆ ಸಿಐಡಿ ತನಿಖೆ ಬಗ್ಗೆ ಯಾವುದೇ ನಂಬಿಕೆಯಿಲ್ಲ. ಇದು ಲವ್ ಜಿಹಾದ್ಗಾಗಿ ನಡೆದಿರುವ ಕೊಲೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಆರೋಪಿಯನ್ನ ಪೊಲೀಸರು ಕಸ್ಟಡಿಗೆ ಪಡೆಯದೆ ನ್ಯಾಯಾಂಗ ಬಂಧನದಲ್ಲಿ ಇರಿಸಿರುವುದು ಯಾಕೆ ಎಂಬುದು ಮೊದಲು ತಿಳಿಸಬೇಕು. ಇಲ್ಲಿಯವರೆಗೂ ಆತನನ್ನು ಯಾರ್ಯಾರು ಭೇಟಿ ಮಾಡಿದ್ದಾರೆ ಎನ್ನುವುದು ಸಹ ತನಿಖೆಯಾಗಬೇಕು. ಪೊಲೀಸರೇ ಅವನನ್ನು ರಕ್ಷಣೆ ಮಾಡಿ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ಧಾರೆ ಎಂದು ಆರೋಪಿಸಿದ್ದಾರೆ.
ಬುಲೆಟ್ ಟ್ರೇನ್ ಓಡೋ ಸ್ಪೀಡ್ ಅಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಬೇಕು. ಫಯಾಜ್ ಹಿಂದೆ ಇರುವವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸದಿರುವುದನ್ನು ಗಮನಿಸಿದರೆ, ಕಾಣದ ಕೈವಾಡ ಇದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಅವನಿಗೆ ಪೊಲೀಸ್ ಭಾಷೆಯಲ್ಲಿ ಟ್ರೀಟ್ಮೆಂಟ್ ಕೊಟ್ಟು ಸತ್ಯ ಬಾಯಿಬಿಡಿಸಬೇಕಿತ್ತು. ಅದ್ಯಾವುದೂ ಮಾಡದೆ ಪೊಲೀಸರು ಸುಮ್ಮನಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.