ಕೋಲಾರ: ಇತ್ತೀಚೆಗೆ ಸಣ್ಣಪುಟ್ಟ ವಿಷಯಕ್ಕೆ ಗಲಾಟೆ, ಹಲ್ಲೆಗಳು ನಡೆಯುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದೆ. ಪಾರಿವಾಳಗಳ ವಿಚಾರಕ್ಕೂ ಈ ಪರಿಯ ಕಾಳಗ ನಡೆಯುವುದನ್ನು ಕೇಳಿದಾಗ ಮನಸ್ಸು ಕದಡದೆ ಇರುವುದಿಲ್ಲ.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಗಾಂಧಿ ಸರ್ಕಲ್ ಬಳಿ ಇರುವ ರಾಮುಗೆ ಪಾರಿವಾಳ ಸಾಕುವ ಹವ್ಯಾಸವಿತ್ತು. ಪಾರಿವಾಳಗಳ ಟೂರ್ನಮೆಂಟ್ಗಳನ್ನು ಆಯೋಜನೆ ಮಾಡುತ್ತಿದ್ದ. ಅದೇ ಗಾಂಧಿ ಸರ್ಕಲ್ ಬಳಿ ವಾಸವಿದ್ದ ಇಮ್ರಾನ್ ಖಾನ್ ಎಂಬಾತ ರಾಮು ಜತೆ ಪೇಂಟಿಂಗ್ ಕೆಲಸಕ್ಕೆ ಹೋಗಿಬರುತ್ತಿದ್ದ.
ರಾಮು, ಪತ್ನಿ-ಮಕ್ಕಳು, ರಾಮು ಅಣ್ಣ ನಾಗರಾಜ್ ಮತ್ತು ಮಕ್ಕಳು, ಒಟ್ಟಾರೆ ಇಡೀ ಕುಟುಂಬ ಇಮ್ರಾನ್ಗೆ ಆಪ್ತವಾಗಿತ್ತು. ರಾಮು ಮನೆಯಲ್ಲಿ ತಿಂದುಂಡು, ಅವರ ಕುಟುಂಬದ ಒಬ್ಬ ಸದಸ್ಯನಂತೆಯೇ ಇದ್ದ ಇಮ್ರಾನ್ ಕೆಲವು ದಿನಗಳ ಹಿಂದೆ ಎರಡು ಪಾರಿವಾಳಗಳನ್ನು ಸಾಕಿಕೊಡುವಂತೆ ರಾಮುಗೆ ಕೊಟ್ಟಿದ್ದಾನೆ. ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಕುಡಿದು ಬಂದು ಪಾರಿವಾಳಗಳನ್ನು ವಾಪಸ್ ಕೊಡಲು ಪೀಡಿಸಿದ್ದಾನೆ. ‘ಸಂಜೆಯಾದ ಮೇಲೆ ಪಾರಿವಾಳ ಕೊಡುವುದಿಲ್ಲ, ಬೇಕೇಬೇಕು ಎಂದರೆ ಬೆಳಿಗ್ಗೆ ಕೊಡುತ್ತೇನೆ..’ ಎಂದಿದ್ದಾನೆ ರಾಮು. ಈ ವಿಚಾರಕ್ಕೆ ಇಮ್ರಾನ್ ಖಾನ್ ರಾಮುಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಗಲಾಟೆ ಹೆಚ್ಚಾದಾಗ, ಮನೆಯಲ್ಲಿದ್ದ ರಾಮು ಅಣ್ಣ ನಾಗರಾಜ್ ಹೊರಬಂದು ಇಮ್ರಾನ್ಖಾನ್ಗೆ ಬೈದಿದ್ದಾರೆ. ಕುಡಿತ ಮತ್ತು ಗಾಂಜಾ ನಶೆಯಲ್ಲಿದ್ದ ಇಮ್ರಾನ್ ಖಾನ್ ಏಕಾಏಕಿ ನಾಗರಾಜ್ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತೀವ್ರ ಹಲ್ಲೆಯಿಂದ ಕುಸಿದು ಬಿದ್ದ ನಾಗರಾಜ್ರನ್ನು ಕಂಡು ರಾಮು ಕುಟುಂಬದವರು ಓಡಿಬಂದಿದ್ದಾರೆ. ಮಹಿಳೆ-ಮಕ್ಕಳು ಎಂದೂ ಕೂಡ ನೋಡದೆ, ಅವರ ಮೇಲೂ ಚಾಕುವಿನಿಂದ ಇಮ್ರಾನ್ ಹಲ್ಲೆ ಮಾಡಿದ್ದಾನೆ.
ಕರೆಂಟ್ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಕ್ಕಪಕ್ಕದವರು ಗಾಯಾಳುಗಳನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಮಾಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಮಾಲೂರು ಪೊಲೀಸರು ಆರೋಪಿ ಇಮ್ರಾನ್ ಖಾನ್ನ್ನು ಬಂಧಿಸಿದ್ದಾರೆ.
ವಿಷಯ ತಿಳಿದ ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ರಾಮು ಕುಟುಂಬದವರ ಆರೋಗ್ಯ ವಿಚಾರಿಸಿದರು. ಕ್ಷುಲ್ಲಕ ಕಾರಣಕ್ಕೆ ನಡೆದ ಘಟನೆಯಿಂದ ಇಡೀ ಕುಟುಂಬ ಇಂದು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ನಾಗರಾಜ್ ಮುಖ ಹಾಗೂ ಎದೆಯ ಭಾಗಕ್ಕೆ ಚಾಕು ಇರಿತಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜತೆಯಲ್ಲೇ ಕೆಲಸ ಮಾಡಿಕೊಂಡು, ಊಟ ಹಾಕಿ ನೋಡಿಕೊಂಡಿದ್ದ ರಾಮು ಹಾಗೂ ಅವರ ಕುಟುಂಬದವರಿಗೆ, ಇಮ್ರಾನ್ ಖಾನ್ನನ್ನು ಸಾಕಿದ್ದು ಹಾವಿಗೆ ಹಾಲು ಎರೆದಂತಾಗಿದೆ.