ನವದೆಹಲಿ: ಅತ್ತ ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಿದ್ದರೆ, ಅದಕ್ಕೆ ಕಾರಣವಾಗಿದ್ದ ಸೇತುವೆಯ ಕಾಮಗಾರಿಯೊಂದನ್ನು ಪೂರ್ಣಗೊಳಿಸಿಯೇ ಭಾರತೀಯ ಸೇನಾ ಯೋಧರು ವಿರಮಿಸಿದ್ದಾರೆ.
ಜೂನ್ 15ರಂದು ಮಧ್ಯರಾತ್ರಿ ಚೀನಾದೊಂದಿಗಿನ ಸಂಘರ್ಷದಲ್ಲಿ 23 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಮಂಗಳವಾರ ಬೆಳಗ್ಗೆ ಯೋಧರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಹುಡುಕಾಟ ಗಾಲ್ವಾನ್ ನದಿ ತೀರದ ಪ್ರದೇಶದಲ್ಲಿ ನಡೆದಿತ್ತು. ಅದುವರೆಗೆ ಹೊರ ಜಗತ್ತಿಗೆ ಘಟನೆಯ ಭೀಕರತೆಯ ಅರಿವಾಗಿರಲಿಲ್ಲ.
ಇದನ್ನೂ ಓದಿ; ಲಡಾಖ್ಗೆ ಹರಿಯುವ ಗಾಲ್ವಾನ್ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು
ಆದರೆ, ಗಾಲ್ವಾನ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿದ್ದ ಸೇನಾ ಇಂಜಿನಿಯರ್ಗಳಿಗೆ ಸಂಘರ್ಷಕ್ಕೆ ಕಾರಣವಾಗಿರೋದು ಭಾರತ ನಡೆಸುತ್ತಿರುವ ಮೂಲಸೌಕರ್ಯಗಳ ಅಭಿವೃದ್ಧಿಯೇ ಕಾರಣ ಎಂಬುದು ತಿಳಿದಿತ್ತು. ಯೋಧರು ಸಂಘರ್ಷ ನಡೆಸಿದ್ದ ಪ್ರದೇಶದ ಸೇತುವೆ ಒಂದೆರಡು ಕಿಲೋಮೀಟರ್ಗಳಷ್ಟು ದೂರದಲ್ಲಿತ್ತು.
ಇದ್ಯಾವುದಕ್ಕೂ ಎದೆಗುಂದದ ಭಾರತೀಯ ಸೇನಾ ಇಂಜಿನಿಯರ್ಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸಿಯೇ ಸಿದ್ಧ ಎಂದು ಹಠ ತೊಟ್ಟಿದ್ದರು. ಇದಕ್ಕಾಗಿ ಸತತ ಮೂರು ದಿನಗಳವರೆಗೆ ಇನ್ನಿಲ್ಲದ ವೇಗದೊಂದಿಗೆ ಕೆಲಸ ನಡೆಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.
ಇದನ್ನೂ ಓದಿ; ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ
ಭಾರತೀಯ ಯೋಧರಿಗೆ ತ್ವರಿತ ಗತಿಯಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುವ 60 ಮೀಟರ್ ಉದ್ದದ ಸೇತುವೆ ಸಂಪರ್ಕ ರಸ್ತೆಯ ಕಾಮಗಾರಿ ಬಾಕಿಯಾಗಿತ್ತು. ಸೋಮವಾರ ಮಧ್ಯರಾತ್ರಿಯ ಸಂಘರ್ಷದ ಬಳಿಕವೂ ಮಂಗಳವಾರ, ಬುಧವಾರ ಹಾಗೂ ಗುರುವಾರ ಕೆಲಸ ನಡೆಸಿದಿ ಇಂಜಿನಿಯರ್ಗಳು ಗುರುವಾರ ಮಧ್ಯಾಹ್ನದ ವೇಳೆಗೆ ಸೇತುವೆಯನ್ನು ವಾಹನ ಸಂಚಾರಕ್ಕೆ ಸಜ್ಜುಗೊಳಿಸಿದ್ದರು.
ಬೈಲಿ ಬ್ರಿಜ್ ಎಂದು ಹೇಳಲಾಗುವ ಈ ಲೋಹದ ಸೇತುವೆ ಮಿಲಿಟರಿ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಯಾವುದಕ್ಕೂ ಕಾರಣಕ್ಕೂ ಕಾಮಗಾರಿ ನಿಲ್ಲಕೂಡದು, ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಹಿರಿಯ ಅಧಿಕಾರಿಗಳು ನೀಡಿದ್ದ ಆದೇಶವನ್ನು ಸೇನಾಪಡೆ ಇಂಜಿನಿಯರ್ಗಳು ಅಕ್ಷರಶಃ ಪಾಲಿಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.