ಬಾಳೆಹೊನ್ನೂರು: ಬಿ.ಕಣಬೂರಿನ ಮಾಗೋಡಿನಲ್ಲಿ ಬಿರೇಕಲ್ಲು ಅಮ್ಮನವರು, ಚೋಳರುದೇವರ ಹಾಗೂ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿ ಹಬ್ಬ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಒಂದು ವಾರದಿಂದ ಚೌತ (ವ್ರತ) ಪ್ರಾರಂಭಿಸಿದ ಗ್ರಾಮಸ್ಥರು ಸಂಭ್ರಮದಿಂದ ಸುಗ್ಗಿ ಕುಣಿದು ಪೂಜೆ ಸಲ್ಲಿಸಿದರು. ನಂತರ ಭದ್ರಾ ನದಿಯಲ್ಲಿ ಗಂಗಾಪೂಜೆ ಮಾಡಿ ಗಂಗೆಯನ್ನು ದೇವಸ್ಥಾನಕ್ಕೆ ತಂದು ಸುಗ್ಗಿಗದ್ದೆಯಲ್ಲಿ ಬಿದಿರಿನಿಂದ ತಯಾರಿಸಿದ ಹೊಂತೆ ಹೊತ್ತಿಸಿ ಮತ್ತು ಆರತಿ ಬೆಳಗಿ ಪೂಜೆ ನೆರವೇರಿಸಲಾಯಿತು.
ಸುಗ್ಗಿ ಅಂಗವಾಗಿ ಹರಕೆ, ದರ್ಶನ ಪಾತ್ರಿಯಿಂದ ಹೇಳಿಕೆ ಕೇಳಿಕೆ ನಡೆಯಿತು. ಸುಗ್ಗಿ ಹಬ್ಬದಲ್ಲಿ ಹಲಸೂರು, ಕಡ್ಲೇಮಕ್ಕಿ, ಪೇಟೆಕೆರೆ, ಕಣಬೂರು, ಶಾಂತಿನಗರ, ಇಟ್ಟಿಗೆ ಸೀಗೋಡು, ಮೆಣಸುಕುಡಿಗೆ, ಬಾಳೆಹೊನ್ನೂರು, ಮಾಗೋಡು ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.