ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಇದೀಗ ಎರಡೆರಡು ಸಂಭ್ರಮ. ಅವರ ಮಹತ್ವಾಕಾಂಕ್ಷೆಯ ‘ಗಂಧದಗುಡಿ’ ಟ್ರೇಲರ್ ಇಂದು ಬಿಡುಗಡೆ ಆಗಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಮತ್ತೊಂದೆಡೆ ‘ಅಪ್ಪು ಕಪ್’ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ನ ಲೋಗೋ ನಿನ್ನೆ ಬಿಡುಗಡೆಯಾಗಿದ್ದು, ಅದು ಕೂಡ ಇಂದು ಸದ್ದು ಮಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಎರಡೆರಡು ಖುಷಿಯ ಸಂಭ್ರಮದಲ್ಲಿದ್ದಾರೆ.
ಪುನೀತ್ ರಾಜಕುಮಾರ್ ನೆನಪಿನಲ್ಲಿ ಆಯೋಜಿಸಿರುವ ‘ಅಪ್ಪು ಕಪ್’ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ನ ಲೋಗೋ, ಜರ್ಸಿ, ಥೀಮ್ ಸಾಂಗ್ ಲಾಂಚ್ ಉದ್ಘಾಟನಾ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿದೆ. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಟಗಾರರಿಗೆ ಶುಭಾಶಯ ಕೋರಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಆರ್. ಅಶೋಕ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು.
ಅಪ್ಪು ಕಪ್ ಬ್ಯಾಡ್ಮಿಂಟನ್ ಬಗ್ಗೆ ಮಾತಾನಾಡಿದ ಸಚಿವ ಆರ್. ಅಶೋಕ್, ಅಪ್ಪು ಕಪ್ ಬ್ಯಾಡ್ಮಿಂಟನ್ ಲೀಗ್ ಉದ್ಘಾಟನೆಯಾಗಿದೆ. ಎಲ್ಲರೂ ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದೀರಿ. ಎಲ್ಲರೂ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದೀರಿ. ಇದು ಪ್ರತಿ ಆಟಗಾರನ ಆತ್ಮವಿಶ್ವಾಸ ಎನ್ನುತ್ತ ಅಪ್ಪು ಹೆಸರಲ್ಲಿ ಮಾಡುತ್ತಿರುವ ಈ ಪಂದ್ಯಾವಳಿ ಯಶಸ್ವಿಯಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ರಾಜಕುಮಾರ್ ಅವರಲ್ಲಿದ್ದ ಗುಣಗಳು ಅಪ್ಪುವಿನಲ್ಲಿದ್ದವು. ನವೆಂಬರ್ ತಿಂಗಳಲ್ಲಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತೇವೆ ಎನ್ನುತ್ತ ಅಪ್ಪು ಜತೆಗಿನ ಒಡನಾಟವನ್ನು ಅವರು ಸ್ಮರಿಸಿಕೊಂಡರು.
ಕನ್ನಡ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಳ್ಳುತ್ತಿರುವ ಈ ಪಂದ್ಯಾವಳಿಯಲ್ಲಿ ಜಾಕಿ ರೈಡರ್ಸ್, ರಾಜಕುಮಾರ್ ಕಿಂಗ್ಸ್, ಅರಸು ಹಂಟರ್ಸ್, ಬಿಂದಾಸ್ ಸೂಪರ್ ಸ್ಟಾರ್ಸ್, ಮಯೂರ್ ಸ್ಟ್ರೈಕರ್ಸ್, ಜೇಮ್ಸ್ ವಾರಿಯರ್, ಪವರ್ ಪೈಥಾನ್, ದೊಡ್ಮನೆ ಡ್ರ್ಯಾಗನ್ ಸೇರಿ 8 ತಂಡಗಳು ಭಾಗಿಯಾಗಲಿವೆ. ದಿಗಂತ್, ಸೃಜನ್ ಲೋಕೇಶ್, ವಸಿಷ್ಠ ಸಿಂಹ, ಪ್ರಿಯಾಂಕಾ ಉಪೇಂದ್ರ, ರಾಗಿಣಿ, ಕವಿತಾ ಲಂಕೇಶ್, ಶ್ವೇತಾ ಶ್ರೀವಾಸ್ತವ್, ಮಾಸ್ಟರ್ ಆನಂದ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ.
ನಟ ಚೇತನ್ ಸೂರ್ಯ ತಮ್ಮದೇ ಸ್ಟೆಲ್ಲರ್ ಸ್ಟುಡಿಯೋ ಆ್ಯಂಡ್ ಇವೆಂಟ್ನಡಿ ಈ ಪಂದ್ಯಾವಳಿ ಆಯೋಜಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಚೇತನ್ಗೆ ಸಾಥ್ ಕೊಟ್ಟಿದ್ದಾರೆ. ಇದೇ ತಿಂಗಳ 21ರಿಂದ ಮೂರು ದಿನಗಳ ಕಾಲ ಅಪ್ಪು ನೆನಪಿನಲ್ಲಿ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ನಡೆಯಲಿದೆ. ಮತ್ತೊಂದೆಡೆ ಇದೇ ತಿಂಗಳ 28ರಂದು ಗಂಧದಗುಡಿ ಬಿಡುಗಡೆ ಆಗಲಿದೆ.
ಜಾಕಿ ರೈಡರ್ಸ್ ತಂಡಕ್ಕೆ ಅಪ್ಲೆಕ್ಸ್ ಸಾಫ್ಟ್ವೇರ್ ಗಿರೀಶ್ ಕುಮಾರ್, ರಾಜಕುಮಾರ್ ಕಿಂಗ್ಸ್ ತಂಡಕ್ಕೆ ನಿರ್ಮಾಪಕ ಬಿ. ರವಿಕುಮಾರ್, ಅರಸು ಹಂಟರ್ಸ್ ಟೀಮ್ಗೆ ನಮೋ ವೆಲ್ನೆಸ್ನ ಮಹೀಂದ್ರ, ಬಿಂದಾಸ್ ಸೂಪರ್ ಸ್ಟಾರ್ಸ್ ತಂಡಕ್ಕೆ ನಿರ್ಮಾಪಕಿ ರಾಮದೇವಿ, ಜೇಮ್ಸ್ ವಾರಿಯರ್ ತಂಡಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿ ಮಾಲೀಕ ಚಂದ್ರಶೇಖರ್, ಪವರ್ ಪೈಥಾನ್ ತಂಡಕ್ಕೆ ಬಿಗ್ ಮೇಕರ್ಸ್ನ ಸಂತೋಷ್, ದೊಡ್ಮನೆ ಡ್ರ್ಯಾಗನ್ ತಂಡಕ್ಕೆ ನಿರ್ಮಾಪಕ ಮಂಜುನಾಥ್ ಪುತ್ರ ಹರ್ಷ, ಮಯೂರ್ ಸ್ಟ್ರೈಕರ್ ತಂಡಕ್ಕೆ ಗುಬ್ಬಿ ವೀರಣ್ಣನ ಮೊಮ್ಮಗ ಹಾಗೂ ಕಾರ್ನರ್ ಹೌಸ್ ಮಾಲೀಕ ಶಿವಪ್ರದೀಪ್ ಒಡೆತನ ಹೊಂದಿದ್ದಾರೆ.
ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!