ತಿರುವನಂತಪುರಂ: ಅಪಘಾತದಲ್ಲಿ ಮೆದುಳು ಹಾನಿಯಾಗಿ ಮೃತಪಟ್ಟ ಕೇರಳ ಮೂಲದ ಅನುಜಿತ್ (27) ಎಂಬಾತ ಸಾವಿನ ಬಳಿಕವೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಪಡಿಸಿಕೊಂಡಿದ್ದಾರೆ. ಅನುಜಿತ್ ಪತ್ನಿ ಹಾಗೂ ಸಹೋದರಿಯ ಪ್ರಯತ್ನದಿಂದಾಗಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಪ್ರಾಣ ಉಳಿಸಿದ್ದಾರೆ.
ಜುಲೈ 14ರಂದು ಕೊಟ್ಟರಕ್ಕರ ಎಂಬಲ್ಲಿ ಅನುಜಿತ್ ಬೈಕ್ ಅಪಘಾತಕ್ಕೀಡಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕೊಟ್ಟರಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರ ಮೆಡಿಕಲ್ ಕಾಲೇಜು ಮತ್ತು ಕಿಮ್ಸ್ಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ಕಠಿಣ ಶ್ರಮದ ನಡುವೆಯೂ ಅನುಜಿತ್ ಬದುಕುಳಿಯಲಿಲ್ಲ. ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ಜುಲೈ 17ರಂದು ವೈದ್ಯರು ತಿಳಿಸಿದ್ದರು.
ಅನುಜಿತ್ ಅಂತೂ ಬದುಕುಳಿಯಲಿಲ್ಲ. ಆದರೆ, ಆತನ ಅಂಗಾಂಗಳಾದರೂ ಇನ್ನೊಬ್ಬರಿಗೆ ನೆರವಾಗಲಿ ಎಂಬ ನಿರ್ಧಾರಕ್ಕೆ ಬಂದ ಅನುಜಿತ್ ಪತ್ನಿ ಪ್ರಿನ್ಸಿ ಮತ್ತು ಸಹೋದರಿ ಅಜಲ್ಯಾ, ಆತನ ಹೃದಯ, ಕಿಡ್ನಿ, ಕಣ್ಣು, ಸಣ್ಣ ಕರುಳು ಮತ್ತು ಕೈಗಳನ್ನು ದಾನ ಮಾಡಲು ಮುಂದಾದರು. ಇವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ದುಃಖದಲ್ಲೂ ಕುಟುಂಬದ ಈ ರೀತಿಯ ಮಾನವೀಯತೆ ಹೆಜ್ಜೆ ಇಟ್ಟಿದ್ದು ಪ್ರಶಂಸನೀಯ ಎಂದಿದ್ದಾರೆ. ಅಲ್ಲದೆ, ಅನುಜಿತ್ ಸಾವಿಗೂ ಸಂತಾಪ ಸೂಚಿಸಿದ್ದಾರೆ.
ಟ್ರೈನ್ ಅಪಘಾತ ತಪ್ಪಿಸಿ ಹಿಂದೊಮ್ಮೆ ಸುದ್ದಿಯಾಗಿದ್ದ ಅನುಜಿತ್
ಹಿಂದೆ 2010ರಲ್ಲಿ ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಅನುಜಿತ್, ಮತ್ತವರ ಸ್ನೇಹಿತರು ಕೆಂಪು ಬಣ್ಣದ ಬಾಸ್ಕೆಟ್ ಹಿಡಿದು ರೈಲಿನ ಕಡೆಗೆ ಸೂಚನೆ ನೀಡುವ ಮೂಲಕ ಅನೇಕ ಜನರ ಪ್ರಾಣವನ್ನು ಉಳಿಸಿದ್ದರು. ಆ ವೇಳೆ ಭಾರಿ ಸುದ್ದಿ ಸಹ ಆಗಿದ್ದರು. ಇದೀಗ ಮೃತಪಟ್ಟ ಮೇಲೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಕವಾಗಿಸಿದ್ದಾರೆ.
ಇದನ್ನೂ ಓದಿ: ದೇಶದ 18 ಕೋಟಿ ಜನರಿಗೆ ಈಗಾಗ್ಲೇ ಕರೊನಾ ಬಂದು ಹೋಗಿದೆ: ಕರ್ನಾಟಕಕ್ಕೂ ಸಿಕ್ತು ಗುಡ್ ನ್ಯೂಸ್!
ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಜಿತ್, ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಟ್ಟರಕ್ಕರದಲ್ಲಿನ ಸೂಪರ್ ಮಾರ್ಕೆಟ್ನಲ್ಲಿ ಸೇಲ್ಸ್ಮನ್ ಆಗಿ ನಿರ್ವಹಿಸುತ್ತಿದ್ದರು. ಇವರ ಪತ್ನಿ ಪ್ರಿನ್ಸಿ ಸಹ ಜ್ಯುವೆಲ್ಲರಿ ಶಾಪ್ ಒಂದರಲ್ಲಿ ಸೇಲ್ಸ್ವುಮನ್ ಆಗಿದ್ದರು. ದಂಪತಿಗೆ 3 ವರ್ಷದ ಮಗನಿದ್ದನು. ಇದೀಗ ಕುಟುಂಬವನ್ನು ಅನುಜಿತ್ ಅಗಲಿದ್ದಾರೆ. ಶವಪರೀಕ್ಷೆಯ ನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿದೆ. (ಏಜೆನ್ಸೀಸ್)