ಮುಂಬೈ: ಕರೊನಾ ಮತ್ತು ಲಾಕ್ಡೌನ್ ಶುರುವಾದಾಗಿನಿಂದ ಸಂಕಷ್ಟದಲ್ಲಿರುವವರಿಗೆ ಬಾಲಿವುಡ್ನ ಬಿಗ್ಬಿ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ. ಕಳೆದ ವರ್ಷ 1500 ರೈತರ ಸಾಲವನ್ನು ಅವರು ತಮ್ಮ ಪರ್ಸನಲ್ ಅಕೌಂಟ್ನಿಂದ ತೀರಿಸಿದ್ದರಂತೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಐದು ಸಾವಿರ ಕಾಮಿರ್ಕರಿಗೆ ಆಹಾರ ಹಂಚಿಕೆ, ಕರೊನಾ ವಾರಿಯರ್ಸ್ಗೆ ಮಾಸ್ಕ್ ಮತ್ತು ಪಿಪಿಇ ಕಿಟ್ಗಳ ವಿತರಣೆ, ನವದೆಹಲಿಯ ಶ್ರೀಗುರು ತೇಜ್ ಬಹದ್ದೂರ್ ಕೋವಿಡ್ ಸೆಂಟರ್ಗೆ ಎರಡು ಕೋಟಿ ರೂ.ಗಳ ಧನಸಹಾಯ … ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಲೇ ಇದ್ದಾರೆ.
ಇದನ್ನೂ ಓದಿ: ದಿನಸಿ, ಊಟ, ಆಮ್ಲಜನಕ ಪೂರೈಸುತ್ತಿರೋ ನಟ ಭುವನ್, ನಟಿ ಹರ್ಷಿಕಾ: ಸೇವೆಗಾಗಿ ಸಂಪರ್ಕಿಸಿ ಎಂದ ನಟರು
ಈಗ ಅವರು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟುದ್ದಾರೆ. ಗುರುವಾರವಷ್ಟೇ 10 ವೆಂಟಿಲೇಟರ್ಗಳನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಆಸ್ಪತ್ರೆಗಳಿಗೆ ಕೊಟ್ಟಿರುವ ಅವರು, ಇದೀಗ ಪೋಲೆಂಡ್ನಿಂದ 50 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ತರಿಸುತ್ತಿದ್ದಾರೆ. ಮೇ 14ಕ್ಕೆ ಈ ಕಾನ್ಸಂಟ್ರೇಟರ್ಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿವೆ. ಮುಂದಿನ ದಿನಗಳಲ್ಲಿ ಇನ್ನೂ 10 ಲೀಟರ್ಗಳ 50 ಕಾನ್ಸಂಟ್ರೇಟರ್ಗಳನ್ನು ತರಿಸುವ ಯೋಚನೆ ಅವರಿಗಿದೆಯಂತೆ.
ಬಿಗ್ ಬಿ ಇಷ್ಟೆಲ್ಲ ಮಾಡುತ್ತಿದ್ದರೂ, ಕರೊನಾದಲ್ಲಿ ಸಂಕಷ್ಟದಲ್ಲಿರುವವರಿಗೆ ಅವರೇನೂ ಸಹಾಯ ಮಾಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾ ಮೂಲಕ ಹಲವರು ಪ್ರಶ್ನಿಸುತ್ತಿರುತ್ತಾರೆ. ಈ ವಿಷಯವಾಗಿ, ಅಮಿತಾಭ್ ಬಚ್ಚನ್ ಇತ್ತೀಚೆಗೆ ಮೌನ ಮುರಿದಿದ್ದು, ತಾವು ಮಾಡಿರುವ ಕೆಲಸಗಳನ್ನು ಪಟ್ಟಿ ಮಾಡಿದ್ದಾರೆ.
ಇದನ್ನೂ ಓದಿ: ನನ್ನ ಟ್ವೀಟ್ಗಳೇನಿದ್ದರೂ ಮಾನವೀಯತೆ ಬಗ್ಗೆ … ಕಂಗನಾ ಕಾಲೆಳೆದ ಇರ್ಫಾನ್
“ದಾನ ಕೊಟ್ಟ ವಿಷಯವನ್ನು ಹೇಳಿಕೊಳ್ಳಬಾರದು. ದಾನ ಕೊಡುವುದು ನನ್ನ ತೃಪ್ತಿಗೆ ಮತ್ತು ನಾನು ಯಾರಿಗೂ ಗೊತ್ತಾಗದಂತೆ ನನ್ನದೇ ರೀತಿಯಲ್ಲಿ ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ, ನೀವೇನು ಮಾಡಿದ್ದೀರಿ, ಕಷ್ಟದಲ್ಲಿರುವವರಿಗೆ ಏನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಗಳನ್ನು ಕೇಳಿಕೇಳಿ ಸಾಕಾಗಿ ಹೋಗಿದೆ. ಹಾಗಾಗಿ ಇದುವರೆಗೂ ಏನು ಮಾಡಿದ್ದೇನೆ ಎಂದು ಅನಿವಾರ್ಯವಾಗಿ ಹೇಳಬೇಕಾಗಿದೆ’ ಎಂದಿದ್ದಾರೆ ಅಮಿತಾಭ್.