ವಿಶಾಖಪಟ್ಟಣಂ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ತೀವ್ರ ಮುಖಭಂಗ ಸನುಭವಿಸಿರುವ ಟೀಂ ಇಂಡಿಯಾಗೆ ಸ್ಟಾರ್ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಇದು ಎದ್ದು ಕಾಣುತ್ತಿತ್ತು. ಇದರಿಂದಾಗಿ ಟೀಂ ಇಂಡಿಯಾ ಸೋಲಿನ ಸುಲಿಗೆ ಸಿಲುಕಿತ್ತು ಎಂದು ಹೇಳಬಹುದಾಗಿದೆ.
ಸರಣಿ ಆರಂಭಕ್ಕೂ ಮುನ್ನ ಅನುಭವಿ ವೇಗಿ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಹೊರಗುಳಿದಿದ್ದರು. ಇವರೊಂದಿಗೆ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಮೊದಲೆರಡು ಟೆಸ್ಟ್ಗಳಿಂದ ಹಿಂದೆ ಸರಿದಿದ್ದರು. ಈ ಇಬ್ಬರ ಅಲಭ್ಯತೆ ನಡುವೆಯೇ ಟೀಂ ಇಂಡಿಯಾದ ಆಟಗಾರರಾದ ಕೆ.ಎಲ್. ರಾಹುಲ್ ಹಾಗೂ ರವೀಂದ್ರ ಜಡೇಜಾ ಗಾಯಕ್ಕೆ ತುತ್ತಾಗಿದ್ದು ತಂಡಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗಾಯದ ಸಮಸ್ಯೆಯಿಂದ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣವಾಗಿ ಗುಣಮುಖರಾಗಹಲು 4-8 ವಾರಗಳು ಬೇಕಾಗಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಇದರೊಂದಿಗೆ ರೌಇಂದ್ರ ಮೂರನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳಿ ಬಾಲರಾಮನಿಗೆ ಭಕ್ತಿ ಸಮರ್ಪಿಸಿದ 350 ಮುಸ್ಲಿಮರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜ್ಕೋಟ್ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಹಾಗೂ ಮೂರನೇ ಟೆಸ್ಟ್ ನಡುವೆ ಸಾಕಷ್ಟು ಅಂತರವಿದೆ. ಹೀಗಾಗಿ ಮೂರನೇ ಟೆಸ್ಟ್ ವೇಳೆಗೆ ರಾಹುಲ್, ಜಡೇಜಾ, ಕೊಹ್ಲಿ ತಂಡ ಸೇರಿಕೊಳ್ಳುವ ನಿರೀಕ್ಷೆಯನ್ನು ಬಿಸಿಸಿಐ ಇಟ್ಟುಕೊಂಡಿದೆ.
ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ವಾಪಸ್ ಆಗಲಿದ್ದಾರ ಎಂಬ ಅನುಮಾನ ತಂಡದ ಮ್ಯಾನೇಜ್ಮೆಂಟ್ಅನ್ನು ಕಾಡಲು ಶುರು ಮಾಡಿದೆ. ಸದ್ಯ ಸಂಕಷ್ಟದಲ್ಲಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.