ಅಯೋಧ್ಯೆ: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯ ಸಂಪನ್ನಗೊಂಡಿದ್ದು, ಬಾಲರಾಮನ ದರ್ಶನ ಪಡೆಯಲು ಭಕ್ತರ ದಂಡೇ ಅಯೋಧ್ಯೆಗೆ ಹರಿದು ಬರುತ್ತಿದೆ. ಇದೀಗ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರ ದಂಡು ಹರಿದು ಬರುತ್ತಿದ್ದು, ಭದ್ರತಾ ಸಿಬ್ಬಂದಿ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಜನವರಿ 22ರಂದು ಸಂಪನ್ನಗೊಂಡ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯದ ಬಳಿಕ ದೇವಾಲಯಕ್ಕೆ ಸುಮಾರು 25ಲಕ್ಷಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದು, 11 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ರಾಮಜನ್ಮಭೂಮಿ ದೇವಸ್ಥಾನ ಟ್ರಸ್ಟ್ನ ಉಸ್ತುವಾರಿ ಪ್ರಕಾಶ್ ಗುಪ್ತಾ, ಕಳೆದ 11 ದಿನಗಳಲ್ಲಿ ಸುಮಾರು ₹8 ಕೋಟಿ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಚೆಕ್ ಮತ್ತು ಆನ್ಲೈನ್ ಮೂಲಕ ಸುಮಾರು ₹3.50 ಕೋಟಿ ಸಂಗ್ರಹವಾಗಿದೆ. ಅಲ್ಲದೇ 10 ಗಣಕೀಕೃತ ಕೌಂಟರ್ಗಳಲ್ಲಿಯೂ ಜನರು ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕ್ ನೀಡಿದ ಸರ್ಕಾರ; ರಾತ್ರೋರಾತ್ರಿ ಏರಿಕೆಯಾಯ್ತು ಬಿಯರ್ ಬೆಲೆ
ದೇಗುಲದ ಗರ್ಭಗುಡಿಯ ಮುಂಭಾಗದ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಗಾತ್ರದ ಕಾಣಿಕೆ ಡಬ್ಬಿಗಳನ್ನು ಇಡಲಾಗಿದ್ದು, ದೇಣಿಗೆ ಕೌಂಟರ್ನಲ್ಲಿ ದೇವಸ್ಥಾನದ ಟ್ರಸ್ಟ್ ನೌಕರರನ್ನು ನೇಮಿಸಲಾಗಿದೆ. ಸಂಜೆ ಕೌಂಟರ್ ಮುಚ್ಚಿದ ನಂತರ ಟ್ರಸ್ಟ್ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕದ ವರದಿಯನ್ನು ಇವರು ಸಲ್ಲಿಸುತ್ತಾರೆ.
11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್ನ ಮೂವರನ್ನು ಒಳಗೊಂಡ 14 ಜನರ ತಂಡವು ನಾಲ್ಕು ಕಾಣಿಕೆ ಹುಂಡಿಗಳಲ್ಲಿನ ಹಣವನ್ನು ಎಣಿಸುತ್ತಾರೆ. ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ ಎಂದು ರಾಮಜನ್ಮಭೂಮಿ ದೇವಸ್ಥಾನ ಟ್ರಸ್ಟ್ನ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ.