ಮುಂಬೈ: ಕಳೆದ ತಿಂಗಳು ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಎನ್ಸಿಪಿಯ ಬಹುಪಾಲು ಸದಸ್ಯರು ಸಹಿ ಹಾಕಿದ್ದಾರೆ ಎಂಬುದನ್ನು ಉಲ್ಲೇಖಿಸಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ನಾನೇ ಅಧ್ಯಕ್ಷ ಎಂದು ಘೊಷಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಚಿಕ್ಕಪ್ಪ ಶರದ್ ಪವಾರ್ ನೇಮಕ ಅನೂರ್ಜಿತ ಎಂದಿರುವ ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಶರದ್ ಪವಾರ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಲಾಗಿದ್ದು, ಪಕ್ಷದ ಸಂವಿಧಾನದಲ್ಲಿನ ಕೆಲ ನಿಬಂಧನೆಗಳು ದೋಷ ಪೂರಿತವಾಗಿವೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.
ಜೂನ್ 30ರಂದು ಶಾಸಕಾಂಗ ಮತ್ತು ಸಾಂಸ್ಥಿಕ ವಿಭಾಗದಿಂದ ಎನ್ಸಿಪಿಯ ಬಹುಪಾಲು ಸದಸ್ಯರು ಸಹಿ ಮಾಡಿದ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಇದರಲ್ಲಿ ಅಜಿತ್ ಪವಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪ್ರಫುಲ್ ಪಟೇಲ್ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾಗಿದ್ದರು ಮತ್ತು ಈಗ ಮುಂದುವರಿದಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಜಿತ್ ಅವರನ್ನು ನೇಮಿಸಲು ಎನ್ಸಿಪಿ ನಿರ್ಧರಿಸಿದೆ.
ಪಕ್ಷದ ಹೆಸರು, ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮೊರೆ: ಪಕ್ಷದ ಚಿಹ್ನೆ ಮತ್ತು ಹೆಸರ ಮೇಲೆ ತಮ್ಮನ್ನು ಬೆಂಬಲಿಸುವ ಬಣಕ್ಕೆ ಅಧಿಕಾರವಿದೆ ಎಂದು ಅಜಿತ್ ಪವಾರ್ ಅರ್ಜಿ ಸಲ್ಲಿಸಿರುವ ಬಗ್ಗೆ ಚುನಾವಣಾ ಆಯೋಗವೂ ಖಚಿತಪಡಿಸಿದೆ. ಇದರಿಂದ ರಾಜ್ಯದಲ್ಲಿ ಶಿವಸೇನೆ ರೀತಿಯ ಮತ್ತೊಂದು ಕಾನೂನಾತ್ಮಕ ಪ್ರಹಸನ ನಡೆಯುವುದೂ ನಿಶ್ಚಿತವಾಗಿದೆ.
40 ಶಾಸಕರು ಮತ್ತು ಸಂಸದರು ಬೆಂಬಲ ನೀಡಿರುವ ಅಫಿಡವಿಟ್ ಅನ್ನು ಅವರು ಆಯೋಗಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಕೇವಿಟ್ ಅರ್ಜಿ ಸಲ್ಲಿಸಿರುವ ಶರದ್ ಬಣ, ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಇತ್ಯರ್ಥ ಪಡಿಸುವುದಕ್ಕೆ ಮುನ್ನ ತಮ್ಮ ಅಹವಾಲು ಆಲಿಸಬೇಕು ಎಂದು ಕೋರಿದೆ.
ಶರದ್ ಹೇಳಿದ್ದೇನು?: ನೀವು (ಅಜಿತ್ ಬಣ) ಏನೇ ನಿರ್ಧಾರ ಮಾಡಿದರೂ ನಮ್ಮ ಜೊತೆ ಮಾತಾಡಿ ನಿರ್ಧಾರ ತೆಗೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ನಾವು ಶಿವಸೇನೆಯೊಂದಿಗೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಹೋಗಬಾರದು ಎಂದು ನೀವು ಪ್ರಶ್ನಿಸಬಹುದು. ಬಿಜೆಪಿ ಮತ್ತು ಶಿವಸೇನೆ ನಡುವೆ ವ್ಯತ್ಯಾಸವಿದೆ.ಶಿವಸೇನೆ ಕೂಡ ಹಿಂದುತ್ವವನ್ನು ಅನುಸರಿಸುತ್ತದೆ. ಆದರೆ ಅವರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಾರೆ. ಅದು ಅವರ ಹಿಂದುತ್ವ. ಬಿಜೆಪಿಯ ಹಿಂದುತ್ವವೆಂದರೆ ಜನರನ್ನು, ವಿಷಕಾರಿ ಮನುವಾದಿ ಮತ್ತು ಅಪಾಯಕಾರಿ. ಅವರು ಜನರನ್ನು ವಿಭಜಿಸುತ್ತಾರೆ ಎಂದು ಶರದ್ ಹೇಳಿದ್ದಾರೆ.
ಅಜಿತ್ ಹೇಳಿದ್ದೇನು?: ನಮ್ಮೊಂದಿಗೆ ಸೇರಿದರೆ 2024ರ ಚುನಾವಣೆಯಲ್ಲಿ ನಿಮಗೆ ಸಹಾಯವಾಗಲಿದೆ. ನಿಮ್ಮ ಕ್ಷೇತ್ರದಲ್ಲಿ ಅಪೂರ್ಣ ಯೋಜನೆಗಳಿದ್ದರೆ, ಅನುದಾನ ಜಾರಿಯಾಗದಿದ್ದರೆ, ಆ ಯೋಜನೆಗಳಿಗೆ ಪೂರಕ ನೆರವು ಪಡೆಯಲು ನಿಮಗೆ ಸಹಾಯ ಮಾಡುತ್ತೇವೆ ಎಂದು ಅಜಿತ್ ಪವಾರ್ ಹಾಗೂ ಬೆಂಬಲಿಗರು ಎನ್ಸಿಪಿ ಸದಸ್ಯರಿಗೆ ತಿಳಿಸಿದ್ದಾರೆನ್ನಲಾಗಿದೆ. ಪಕ್ಷದ ಶಾಸಕರು ಶರದ್ರನ್ನು ಗೌರವಿಸಿದರೂ, ರ್ತಾಕ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ. ಈಗ ಸಮಯ ಬದಲಾಗಿದೆ ಮತ್ತು ಈ ಕಾಲಘಟ್ಟಕ್ಕೆ ಯಾವುದೂ ಸೂಕ್ತವೋ ಅದರಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.
ಅಜಿತ್ಗೆ 32 – ಶರದ್ಗೆ 18
ಅಜಿತ್ ಪವಾರ್ ಬುಧವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಭೆಯಲ್ಲಿ ಪಕ್ಷದ 54 ಶಾಸಕರ ಪೈಕಿ 32 ಮಂದಿ ಹಾಜರಿದ್ದರು. ಶರದ್ ಪವಾರ್ ಬಣ ನಡೆಸಿದ ಇನ್ನೊಂದು ಸಭೆಯಲ್ಲಿ 18 ಶಾಸಕರು ಪಾಲ್ಗೊಂಡಿದ್ದರು. ಉಳಿದ ನಾಲ್ವರು ಶಾಸಕರು ಯಾರೊಂದಿಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅಜಿತ್ ಬಣದ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಎನ್ಸಿಪಿಯ 8 ವಿಧಾನ ಪರಿಷತ್ ಸದಸ್ಯರಲ್ಲಿ ಐವರು ಬಾಂದ್ರಾದಲ್ಲಿ ನಡೆದಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಜಿತ್ ಕ್ಯಾಂಪ್ ಗೆ ಅನರ್ಹತೆಯಿಂದ ಪಾರಾಗಲು ಕನಿಷ್ಠ 36 ಶಾಸಕರ ಬೆಂಬಲ ಅಗತ್ಯವಿದೆ. ಎರಡೂ ಬಣಗಳು ಪರಸ್ಪರ ಬೆಂಬಲ ತಮಗೆ ಹೆಚ್ಚಿರುವುದು ಎಂದು ಹೇಳಿಕೊಂಡಿವೆ.
ಕ್ರಿಕೆಟ್ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಅಜಿತ್ ಅಗರ್ಕರ್ ವೇತನವೆಷ್ಟು ಗೊತ್ತೇ?
ಮಹಾರಾಷ್ಟ್ರದ ರೀತಿಯಲ್ಲೇ ಕರ್ನಾಟದಲ್ಲೂ ಕ್ಷಿಪ್ರ ರಾಜಕೀಯ ಬೆಳವಣಿಗೆ: ಕೆ.ಎಸ್. ಈಶ್ವರಪ್ಪ