ಅಡಿಲೇಡ್: ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರೀಕ್ಷೆಯಂತೆಯೇ ಪಿತೃತ್ವದ ರಜೆಯ ಮೇರೆಗೆ ಮಂಗಳವಾರ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ತಂಡದ ನಾಯಕತ್ವವನ್ನು ಉಪನಾಯಕ ಅಜಿಂಕ್ಯ ರಹಾನೆ ಅವರಿಗೆ ಒಪ್ಪಿಸುವ ಮುನ್ನ ಕೊಹ್ಲಿ ಸಹ-ಆಟಗಾರರೊಂದಿಗೆ ಸ್ಫೂರ್ತಿದಾಯಕ ಮಾತುಕತೆ ನಡೆಸಿದ್ದಾರೆ. ಅಡಿಲೇಡ್ನಲ್ಲಿ ಕೇವಲ 36 ರನ್ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡ ಬಳಿಕ ಭಾರತ ತಂಡದ ಆಟಗಾರರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆತಿಥೇಯ ಆಸೀಸ್ಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಕೊಹ್ಲಿ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ಮೆಲ್ಬೋರ್ನ್ಗೆ ತೆರಳಿದ ಭಾರತ ತಂಡ
ಕೊಹ್ಲಿ ನಿರ್ಗಮನದ ನಡುವೆ ಭಾರತ ತಂಡದ ಆಟಗಾರರು ಮಂಗಳವಾರ ಅಡಿಲೇಡ್ನಿಂದ ಮೆಲ್ಬೋರ್ನ್ಗೆ ತೆರಳಿದರು. ಟೆಸ್ಟ್ ಸರಣಿಯ 2ನೇ ಪಂದ್ಯ ಶನಿವಾರದಿಂದ ಮೆಲ್ಬೋರ್ನ್ನಲ್ಲಿ ನಡೆಯಲಿದೆ. ವಿಮಾನ ಪ್ರಯಾಣದ ಚಿತ್ರಗಳನ್ನು ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 2.5 ಕೋಟಿ ರೂ.ಗೆ ಬ್ರಾಡ್ಮನ್ ಕ್ಯಾಪ್ ಮಾರಾಟ; ಹರಾಜಿನ ಹಿಂದಿದೆ ಕ್ರಿಮಿನಲ್ ಸ್ಟೋರಿ!
ಕೊಹ್ಲಿ ನಿರ್ಧಾರಕ್ಕೆ ಸ್ಮಿತ್ ಬೆಂಬಲ
ಕ್ರಿಕೆಟ್ಗಿಂತ ಮಗುವಿನ ಜನನಕ್ಕೆ ಹೆಚ್ಚಿನ ಆದ್ಯತೆ ನೀಡಿ ತವರಿಗೆ ಮರಳುತ್ತಿರುವ ವಿರಾಟ್ ಕೊಹ್ಲಿ ನಿರ್ಧಾರವನ್ನು ಆಸೀಸ್ ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ಬೆಂಬಲಿಸಿದ್ದಾರೆ. ‘ಕೊಹ್ಲಿ ತವರಿಗೆ ಮರಳುತ್ತಿರುವುದು ಭಾರತ ತಂಡಕ್ಕೆ ದೊಡ್ಡ ನಷ್ಟವೆಂಬುದು ನಿಜ. ತಂಡದ ಜತೆ ಉಳಿದುಕೊಳ್ಳಲು ಅವರಿಗೂ ಸಾಕಷ್ಟು ಒತ್ತಡಗಳಿವೆ. ಅದರ ನಡುವೆಯೂ ಅವರು ಮೊದಲ ಮಗುವಿನ ಜನನದ ವೇಳೆ ಪತ್ನಿಯ ಜತೆಗಿರಲು ಬಯಸಿದ್ದಾರೆ. ಅವರ ಈ ದಿಟ್ಟ ನಿರ್ಧಾರಕ್ಕೆ ಶ್ರೇಯ ಸಲ್ಲಲೇಬೇಕು. ಈ ವಿಶೇಷ ಸಮಯವನ್ನು ಅವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಿರಲು ಬಯಸಿದ್ದಾರೆ’ ಎಂದು ಸ್ಮಿತ್ ಹೇಳಿದ್ದಾರೆ.
ಮುಂಬೈನ ಡ್ರ್ಯಾಗನ್ಫ್ಲೈ ಕ್ಲಬ್ ಮೇಲೆ ದಾಳಿ: ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಂಧನ!