ಹೈದರಾಬಾದ್: ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಖ್ಯಾತ ನಟಿ ಎನಿಸಿಕೊಂಡಿರುವ ಡಿಂಪಲ್ ಹಯಾತಿ ಕೆಲವು ದಿನಗಳಿಂದ ತುಂಬಾ ಸುದ್ದಿಯಲ್ಲಿರುವುದು ಎಲ್ಲರಿಗು ತಿಳಿದಿದೆ. ಐಪಿಎಸ್ ಅಧಿಕಾರಿಯ ಕಾರಿಗೆ ನಟಿ ಡಿಂಪಲ್ ಹಯಾತಿ ಡಿಕ್ಕಿ ಹೊಡೆದಿದ್ದಲ್ಲದೆ, ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದರ ನಡುವೆ ಹಯಾತಿ ಅವರು ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ವಿಡಿಯೋ ತುಣುಕೊಂದನ್ನು ಹಂಚಿಕೊಳ್ಳುವ ಮೂಲಕ ಪೊಲೀಸರಿಗೆ ಟಾಂಗ್ ಕೊಟ್ಟಿದ್ದಾರೆ.
ಪೊಲೀಸರಿಗೆ ಹಯಾತಿ ಕೊಟ್ಟ ಟಾಂಗ್ ಏನು ಎಂದು ತಿಳಿದುಕೊಳ್ಳುವ ಮುನ್ನ ಪ್ರಕರಣದ ಹಿನ್ನೆಲೆ ತಿಳಿದುಕೊಳ್ಳೋಣ. ಹಯಾತಿ ಅವರು ಜುಬಿಲಿ ಹಿಲ್ಸ್ನ ಹುಡಾ ಎನ್ಕ್ಲೇವ್, ಜರ್ನಲಿಸ್ಟ್ ಕಾಲನಿಯಲ್ಲಿರುವ ಎಸ್ಕೆಆರ್ ಅಪಾರ್ಟ್ಮೆಂಟ್ನಲ್ಲಿ ತನ್ನ ಫ್ರೆಂಡ್ ವಿಕ್ಟರ್ ಡೇವಿಡ್ ಜತೆ ವಾಸವಿದ್ದಾರೆ. ಅದೇ ಅಪಾರ್ಟ್ಮೆಂಟ್ನಲ್ಲಿ ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ನೆಲೆಸಿದ್ದಾರೆ. ರಾಹುಲ್ ಹೆಗ್ಡೆ ಅವರು ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: 2 ತಿಂಗಳಲ್ಲಿ ಮೂರು ಮರಿಗಳು ಸೇರಿ 6 ಚೀತಾ ಸಾವು: ಕೇಂದ್ರ ಸರ್ಕಾರ ಕೊಟ್ಟ ಉತ್ತರ ಹೀಗಿದೆ….
ಐಪಿಎಸ್ ಅಧಿಕಾರಿಗೆ ಗೊತ್ತುಪಡಿಸಲಾದ ಪಾರ್ಕಿಂಗ್ ಜಾಗದಲ್ಲಿ ಹಯಾತಿ ತನ್ನ ಕಾರು ಪಾರ್ಕ್ ಮಾಡುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಅಲ್ಲದೆ, ಈ ವಿಚಾರವಾಗಿ ಅನೇಕ ಬಾರಿ ಕ್ಯಾತೆ ತೆಗೆದಿದ್ದಾರೆ. ಪ್ರತಿ ಬಾರಿ ಪಾರ್ಕಿಂಗ್ ಏರಿಯಾದಿಂದ ಹೊರ ಹೋಗುವಾಗ ಹಯಾತಿ ಅಧಿಕಾರಿಯ ಕಾರನ್ನು ಕಾಲಿನಿಂದ ಒದೆಯುತ್ತಿದ್ದರು. ಮೇ 14ರಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಅಂದು ಹಯಾತಿ ಅವರು ಉದ್ದೇಶಪೂರ್ವಕವಾಗಿಯೇ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ, ತುಂಬಾ ಆಕ್ರಮಣಕಾರಿ ವರ್ತನೆ ತೋರಿ, ನಿಂದಿಸುವ ಮೂಲಕ ಅನುಚಿತವಾಗಿ ವರ್ತಿಸಿದರು ಎಂದು ಐಪಿಎಸ್ ಅಧಿಕಾರಿಯ ಕಾರು ಚಾಲಕ ಆರೋಪ ಮಾಡಿದ್ದು, ಈ ಸಂಬಂಧ ಜುಬಿಲಿ ಹಿಲ್ಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಆದರೆ, ಹಯಾತಿ ಅವರ ಪರ ವಕೀಲ ಹೇಳೋದೆ ಬೇರೆ, ಐಪಿಎಸ್ ಅಧಿಕಾರಿ ದಾಖಲಿಸಿರುವ ಪ್ರಕರಣವು ಹಯಾತಿ ಮೇಲಿನ ಕಿರುಕುಳವಾಗಿದೆ. ಆಕೆಯ ಕಾರಿಗೆ ಹಾನಿಯನ್ನು ಉಂಟು ಮಾಡಿಲ್ಲ. ಬೇಕಿದ್ದರೆ ಸಿಸಿಟಿವಿ ದೃಶ್ಯಾವಳಿಯನ್ನೂ ಸಹ ಪರಿಶೀಲಿಸಬಹುದು ಎಂದು ಹಯಾತಿ ಪರ ವಕೀಲ ಪೌಲ್ ಸತ್ಯನಂದನ್ ಅವರು ಹೇಳಿದ್ದಾರೆ.
ಅಧಿಕಾರ ದುರ್ಬಳಕೆ
ವಿಡಿಯೋ ಸಹ ಬಹಿರಂಗವಾಗಿದ್ದು, ಅದರಲ್ಲಿ ಹಯಾತಿ ಅವರು ಅಧಿಕಾರಿ ಕಾರನ್ನು ಸ್ಪರ್ಶಿಸಿಯೇ ಇಲ್ಲ. ಬದಲಾಗಿ ಕಾರಿನ ಮುಂದೆ ಇದ್ದ ಟ್ರಾಫಿಕ್ ಕೋನ್ಗಳನ್ನು ಕಾಲಿನಿಂದ ಒದ್ದಿದ್ದಾರೆ. ಅಲ್ಲದೆ, ಕಾರಿನ ಮುಂದೆ ಟ್ರಾಫಿಕ್ ಸಿಮೆಂಟ್ ಬ್ಲಾಕ್ಗಳನ್ನು ಇರಿಸಲಾಗಿದೆ. ಇದನ್ನು ಉಲ್ಲೇಖಿಸಿರುವ ಹಯಾತಿ ಪರ ವಕೀಲ, ಟ್ರಾಫಿಕ್ ಸಿಮೆಂಟ್ ಬ್ಲಾಕ್ ಸರ್ಕಾರಿ ಆಸ್ತಿಯಾಗಿದೆ. ಅದು ಅಧಿಕಾರಿಯ ಕಾರಿನ ಮುಂದೆ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಧಿಕಾರಿ, ಕೆಲಸದ ಕರೆ ಬಂದಾಗ ತಕ್ಷಣ ಹೊರಡಬೇಕಾಗಿರುವುದರಿಂದ ಅವುಗಳನ್ನು ಅಲ್ಲಿ ಇರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದು ಅಧಿಕಾರ ದುರ್ಬಳಕೆ ಎಂದು ಹಯಾತಿ ಹೇಳಿದ್ದಾರೆ.
ಅನ್ಯಾಯವಾದಾಗಲೆಲ್ಲ ನೋ ಪೊಲೀಸ್
ಇದೀಗ ಹಯಾತಿ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಬಾರಿ ತನ್ನ ಭಾವನೆಗಳಿಗೆ ಅಕ್ಷರ ರೂಪವನ್ನು ನೀಡದೆ ಟಾಲಿವುಡ್ ಸೂಪರ್ಸ್ಟಾರ್ ಬಾಲಯ್ಯ ಅವರನ್ನು ಪ್ರಕರಣದ ಅಖಾಡಕ್ಕೆ ಎಳೆದು ತಂದ್ದಾರೆ. ಸಿಂಹ ಸಿನಿಮಾದಲ್ಲಿ ಬಾಲಯ್ಯ ಅವರು ಉನ್ನತ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ, ಅನ್ಯಾಯವಾದಾಗಲೆಲ್ಲ ‘ನೋ ಪೊಲೀಸ್’ ಎಂಬ ಪವರ್ ಫುಲ್ ಡೈಲಾಗ್ ಇರುವ ವಿಡಿಯೋ ತುಣಕನ್ನು ಎಡಿಟ್ ಮಾಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಪಿನ್ ಸಹ ಮಾಡಿದ್ದಾರೆ. ಇದು ಖಂಡಿತ ಪೊಲೀಸ್ ಅಧಿಕಾರಿಗೆ ಕೌಂಟರ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು
— Dimple Hayathi (@DimpleHayathi) May 27, 2023
ತನ್ನದಲ್ಲದ ತಪ್ಪಿನಿಂದ ಪೊಲೀಸರ ಕೆಂಗಣ್ಣಿಗೆ ಗುರಿಯಾದ ಸಿಟ್ಟಿನಿಂದ ಡಿಂಪಲ್ ಪೊಲೀಸರಿಗೆ ತಮ್ಮದೇ ಶೈಲಿಯಲ್ಲಿ ಕೌಂಟರ್ ಕೊಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮತ್ತೊಂದೆಡೆ, ಇತರರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಡಿಂಪಲ್ ವರ್ಸಸ್ ಐಪಿಎಸ್ ಅಧಿಕಾರಿ ನಡುವಿನ ವಿವಾದ ಮುಂದುವರೆದಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗಷ್ಟೇ ಆಕೆ ನಟಿಸಿದ್ದ ರಾಮ ಬಾಣಂ ಚಿತ್ರ ತೆರೆಕಂಡಿತ್ತು. ಆದರೆ ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. (ಏಜೆನ್ಸೀಸ್)
ಐಪಿಎಸ್ ಅಧಿಕಾರಿ ಜತೆ ಹಯಾತಿ ಅನುಚಿತ ವರ್ತನೆ ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಸಿಸಿಟಿವಿ ವಿಡಿಯೋ!
ಐಪಿಎಸ್ ಅಧಿಕಾರಿ ಜತೆ ಡಿಂಪಲ್ ಹಯಾತಿ ಅನುಚಿತ ವರ್ತನೆ: ಕ್ರಿಮಿನಲ್ ಪ್ರಕರಣ ದಾಖಲು