ಆಂಧ್ರ ಪ್ರದೇಶ: ಆಂಧ್ರದಲ್ಲಿ ಸಿನಿಮಾ ಟಿಕೆಟ್ ಬೆಲೆ ವಿಚಾರ ಇದೀಗ ಇಡೀ ದೇಶದಲ್ಲಿ ಮನೆಮಾತಾಗಿದೆ. ಹೌದು, ಪಾರ್ಕಿಂಗ್ ಲಾಟ್ ನಲ್ಲಿ ವಾಹನಗಳು ನಿಲ್ಲಿಸಲು ಟಿಕೆಟ್ ಬೆಲೆ ಮೂವತ್ತು ರೂ. ಇರುತ್ತೆ. ಅಂತಹದ್ದರಲ್ಲಿ ಒಂದು ಚಿತ್ರದ ಟಿಕೆಟ್ ಬೆಲೆ 30 ರೂ. ಗೆ ಇಳಿಯುತ್ತೆಂದರೆ ಸಹಜವಾಗಿಯೇ ಕೋಟಿ ಕೋಟಿ ಬಂಡವಾಳ ಹಾಕಿ ತೆಗೆದ ಯಾವುದೇ ಸಿನಿಮಾ ತಂಡದವರ ಮತ್ತು ಚಿತ್ರರಂಗದವರ ರಕ್ತ ಕುದಿಯುತ್ತೆ. ಹೀಗಾಗಿ, ಕಳೆದ ಎರಡು ತಿಂಗಳುಗಳಿಂದ ತೆಲುಗು ಚಿತ್ರರಂಗ ಮತ್ತು ಹೊಸ ಟಿಕೆಟ್ ದರವನ್ನು ಜಾರಿಗೆ ತಂದ ಜಗನ್ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ. ಇನ್ನು, ಇತ್ತೀಚೆಗೆ ನಟಿ, ಸಚಿವೆ ರೋಜಾ ಅವರು ಕೂಡ ತೆಲುಗಿನ ನ್ಯಾಚುರಲ್ ಸ್ಟಾರ್ ನಟ ನಾನಿ ವಿರುದ್ಧ ಕೀಡಿಕಾರಿರುವ ವಿಷಯ ಬೆಳಕಿಗೆ ಬಂದಿದೆ.
ಹೌದು, ನಟ ನಾನಿ ಅವರ ‘ಶ್ಯಾಮ್ ಸಿಂಘ ರಾಯ್‘ ಸಿನಿಮಾ ಡಿ.24 ರಂದು ಬಿಡುಗಡೆಯಾದ ಸಂದರ್ಭದಲ್ಲಿ ಜಗನ್ ಸರ್ಕಾರ ಜಾರಿಗೆ ತಂದ ಹೊಸ ಟಿಕೆಟ್ ಬೆಲೆಯ ಬಗ್ಗೆ ಮಾತಾಡಿದ್ದು, ”ಆಂಧ್ರದಲ್ಲಿ ಥಿಯೇಟರ್ಗಳಿಗಿಂತಲೂ ದಿನಸಿ ಅಂಗಡಿಗಳು ಹೆಚ್ಚು ಲಾಭ ಮಾಡುತ್ತಿವೆ. ಟಿಕೆಟ್ ದರ ಇಳಿಸಿದ ಸರ್ಕಾರ ಬುದ್ಧಿಹೀನ ಹಾಗೂ ಇದೊಂದು ತರ್ಕರಹಿತ ತೀರ್ಮಾನ. ಟಿಕೆಟ್ ದರ ಇಳಿಸಿರುವುದು ಬರೀ ಕಲಾವಿದರಿಗೆ, ಚಿತ್ರಮಂದಿರದವರಿಗೆ, ಸಿನಿಮಾ ಕೆಲಸಗಾರರಿಗೆ ಮಾತ್ರವಲ್ಲದೇ, ಸಿನಿ ಪ್ರೇಕ್ಷಕರಿಗೂ ಅಪಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಚುರಲ್ ಸ್ಟಾರ್ ನಟ ನಾನಿಯ ಈ ಹೇಳಿಕೆ ಸದ್ಯ ಜಗನ್ ಸರ್ಕಾರದ ಸಚಿವರು ಮತ್ತು ಶಾಸಕರ ನಿದ್ದೆ ಗೆಡಿಸಿದೆ. ಜೊತೆಗೆ, ನಟನ ಈ ಹೇಳಿಕೆಗೆ ನಟಿ, ಸಚಿವೆ ರೋಜಾ ಅವರು ತಿರುಗೇಟು ನೀಡಿದ್ದಾರೆ. ”ಚಿತ್ರಗಳಿಂದ, ಚಿತ್ರಮಂದಿರದಲ್ಲಿ ಹೆಚ್ಚು ಲಾಭ ಸಿಗದಿದ್ದರೆ, ನಾನಿ ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿ ಲಾಭ ಮಾಡುತ್ತಿರುವ ದಿನಸಿ ಅಂಗಡಿಗಳ ಮಾಲೀಕರಂತೆ ಅವರೂ ದಿನಸಿ ಅಂಗಡಿ ವ್ಯಾಪಾರ ಆರಂಭಿಸಬಹುದು. ಸರ್ಕಾರದ ಸಮಿತಿ ಎಲ್ಲವನ್ನೂ ಪರಿಶೀಲಿಸಿ ಟಿಕೆಟ್ ದರ ನಿಗದಿ ಪಡಿಸಿದೆ. ನಾನಿ ಅಂತಹ ನಟರು ಸ್ವಾರ್ಥಿಗಳು. ಅವರು ಕೇವಲ ಅವರ ಸಿನಿಮಾಗಳ ಬಗ್ಗೆಯೇ ಚಿಂತಿಸುತ್ತಾರೆ. ಟಿಕೆಟ್ ದರ ಏರಿಕೆ ಮಾಡಿದರೆ ಸಣ್ಣ ಸಣ್ಣ ಚಿತ್ರಗಳ ಗತಿ ಏನು?. ಸಿನಿಮಾ ಮಂದಿ ದೊಡ್ಡ ಲಾಭಕೋರರಾಗಿದ್ದಾರೆ. ಇತ್ತೀಚೆಗೆ ನಡೆದ ‘ಮಾ (Maa) ಸಂಘದ’ ಚುನಾವಣೆ, ಅದಕ್ಕೆ ಒಳ್ಳೆಯ ಉದಾಹರಣೆ.” ಎಂಬ ಹೇಳಿಕೆ ಕೊಟ್ಟಿದ್ದಾರೆ.
ಹೀಗೆ ಹೇಳಿ ಒಟ್ಟಾರೆ ಇಡೀ ತೆಲುಗು ಚಿತ್ರರಂಗದರವನ್ನೇ ಟೀಕಿಸಿದ್ದಾರೆ ನಟಿ ರೋಜಾ. ”ಸಿನಿಮಾ ರಂಗದಲ್ಲಿ ಕೆಲವರಿಗೆ ಬಾಯಿ ಚಪಲ ಹೆಚ್ಚು. ನಿಜ ಜೀವನದಲ್ಲೂ ಹೀರೋ ಆಗಲು, ಬಾಯಿಗೆ ಬಂದಂತೆ ಮಾತಾಡುತ್ತಾರೆ.” ಎಂದು ನಟ ಪವನ್ ಕಲ್ಯಾಣ್ಗೂ ಪರೋಕ್ಷವಾಗಿ ಟಿಕೆಟ್ ಬೆಲೆ ವಿಚಾರವಾಗಿ ಟಾಂಗ್ ಕೊಟ್ಟಿದ್ದಾರೆ ಸಚಿವೆ ರೋಜಾ. ಇದರಿಂದ ನಟಿಯ ಹೇಳಿಕೆಗಳು ಕೇಳಿದ ಹಲವು ತೆಲುಗು ಸಿನಿಮಾರಂಗದವರು ”ರೋಜಾ ಅವರು ಮೊದಲು ನಟಿಯಾಗಿ ನಂತರ ರಾಜಕಾರಣಿಯಾಗಿರುವುದು ಮರೆಯಬಾರದು. ಜಗನ್ಗೆ ಬೆಂಬಲು ನೀಡಲು ತಮಗೆ ಮೊದಲು ಅನ್ನ ಹಾಕಿದ ಸಿನಿ ಮನೆಗೆ ಕನ್ನ ಹಾಕುತ್ತಿದ್ದಾರೆ.” ಎಂಬ ಮಾತುಗಳು ಕೇಳಿಬರುತ್ತಿವೆ. ತೆಲುಗು ಚಿತ್ರರಂಗದ ಮತ್ತು ಜಗನ್ ಸರ್ಕಾರದ ನಡುವಿನ ಈ ತಿಕ್ಕಾಟ ಎಂದಿಗೆ ಮುಗಿಯುತ್ತೆ ಎಂದು ಕಾದು ನೋಡಬೇಕಿದೆ.
ಹಾಸನದಲ್ಲಿ ‘ಬಡವ ರಾಸ್ಕಲ್’ ಮತ್ತು ‘ರೈಡರ್’ ಜೋರು! ಡಾಲಿ, ನಿಖಿಲ್ ನೋಡಲು ಅಭಿಮಾನಿಗಳ ಸಾಗರ…
ಪುಷ್ಪ ಚಿತ್ರದ ಪ್ರೊಡಕ್ಷನ್ ವರ್ಕರ್ಸ್ಗೆ ತಲಾ 1 ಲಕ್ಷ ಬಹುಮಾನ: ಸುಕುಮಾರ್ ಭಾವುಕ
ವಿಚ್ಛೇದನದ ಬಳಿಕ ಸಮಂತಾ ದಿಲ್ ಖುಷ್? ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಹಾಟ್ ನಟಿ!