ಕನಕಗಿರಿ: ಮೇ 7ರಂದು ನಡೆಯುವ ಮತದಾನದಲ್ಲಿ ಹೆಚ್ಚಿನ ಮತದಾನವಾಗಿಸಲು ತಾಲೂಕು ಸ್ವೀಪ್ ಸಮಿತಿಯಿಂದ ಸೋಮವಾರ ಪಟ್ಟಣದಲ್ಲಿ ಬೈಕ್ ಜಾಥಾ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ವೃತ್ತದಿಂದ ಆರಂಭವಾದ ಬೈಕ್ ಜಾಥಾಕ್ಕೆ ತಾಪಂ ಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಎಲ್. ವೀರೇಂದ್ರಕುಮಾರ್ ಚಾಲನೆ ನೀಡಿದರು.
ಇದನ್ನು ಓದಿ: ಮತದಾನದಿಂದ ದೂರ ಉಳಿಯದಿರಿ
ನಂತರ ಮಾತನಾಡಿ, ಪ್ರತಿಯೊಬ್ಬರೂ ಚುನಾವಣೆ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಳ್ಳಬೇಕು. ಮತ ಚಲಾಯಿಸಲು ಯಾರೂ ನಿರ್ಲಕ್ಷ್ಯ ತೋರಬಾರದು. ಸದೃಢ ದೇಶ ಕಟ್ಟಲು ಶೇ.100 ಮತದಾನ ಆಗಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಮೇ 7ರಂದು ನಡೆಯುವ ಮತದಾನದಂದು ಕಡ್ಡಾಯವಾಗಿ ಪ್ರತಿಯೊಬ್ಬರೂ ಹಕ್ಕು ಚಲಾಯಿಸಬೇಕು. ಮತದಾನ ಪವಿತ್ರವಾದದ್ದು, ಯಾರೂ ಮತದಾನದಿಂದ ಹೊರಗುಳಿಯದೇ, ಮತ ಚಲಾಯಿಸಬೇಕು ಎಂದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರು ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಅಂಬೇಡ್ಕರ್ ವೃತ್ತದಿಂದ ಎದುರು ಹನುಮಪ್ಪ ದೇಗುಲದ ಮೂಲಕ ವಾಲ್ಮೀಕಿ ವೃತ್ತದವರೆಗೆ ಜಾಥಾ ನಡೆಯಿತು.