ಕನಕಗಿರಿ: ಜನಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಆಸೆ, ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ತಾಲೂಕು ಐಇಸಿ ಸಂಯೋಜಕ ಕೆ ಶಿವಕುಮಾರ್ ಹೇಳಿದರು.
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ, ಗ್ರಾಪಂನಿಂದ ಬುಧವಾರ ಆಯೋಜಿಸಿದ್ದ ಮತದಾನ ಜಾಗೃತಿ ಹಾಗೂ ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಶೇ.100 ಮತದಾನವಾದರೆ ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ. ಯಾರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಗ್ರಾಮಸ್ಥರು ಇವಿಎಂನಲ್ಲಿ ಮತ ಚಲಾಯಿಸಿ ವಿವಿ ಪ್ಯಾಟ್ನಲ್ಲಿ ಪರಿಶೀಲಿಸಿದರು. ಕಂದಾಯ ನಿರೀಕ್ಷಕ ರವಿ ನಾಯಕ, ಗ್ರಾಪಂ ಉಪಾಧ್ಯಕ ಜಗದೀಶಪ್ಪ ಗದ್ದಿ, ಸದಸ್ಯ ರಾಜಸಾಬ್, ಪ್ರಮುಖರಾದ ಯಮನೂರಪ್ಪ ಕೆಲೂರ್, ಭೀಮಣ್ಣ ಹೂಗಾರ್, ತಾಲೂಕು ಸ್ವೀಪ್ ಸಮಿತಿ ಸದಸ್ಯರು ಇದ್ದರು.
ಕೃಷಿ, ಪಶು ಸಖಿಯರಿಗೆ ಜಾಗೃತಿ: ತಾಪಂ ಸಭಾಂಗಣದಲ್ಲಿ ಬುಧವಾರ ಎನ್ಆರ್ಎಲ್ಎಂನಿಂದ ಆಯೋಜಿಸಿದ್ದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಎರಡು ದಿನದ ತರಬೇತಿ ಕಾರ್ಯಾಗಾರದಲ್ಲಿ ಮತದಾನ ಜಾಗೃತಿ ನಡೆಯಿತು. ತಾಪಂ ವಿಷಯ ನಿರ್ವಾಹಕ ಕೊಟ್ರಯ್ಯಸ್ವಾಮಿ, ಎನ್ಆರ್ಎಲ್ಎಂ ಸಂಯೋಜಕಿ ರೇಣುಕಾ, ತಾಪಂ ಸಿಬ್ಬಂದಿ ಇದ್ದರು.