| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ಜನರಿಗೆ ನಿಕಟವಾಗಿರುವ ಕಂದಾಯ ಇಲಾಖೆ ಬಲವರ್ಧನೆಗೆ ರಾಜ್ಯದಲ್ಲಿ ಮತ್ತೆ ಹೊಸದಾಗಿ ನೂರಾರು ಗ್ರಾಮಲೆಕ್ಕಿಗರ ಹುದ್ದೆ ಭರ್ತಿಗೆ ಮುಂದಾಗಿದೆ.
ಆಯಾ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಕಂದಾಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಜನವರಿ 1ರಂದು ಆದೇಶಿಸಿತ್ತು. ಎರಡು ವರ್ಷಗಳ ಹಿಂದೆ ಆಯಾ ಜಿಲ್ಲಾ ವ್ಯಾಪ್ತಿ ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.ಕೋವಿಡ್ ಇತ್ಯಾದಿ ಕಾರಣಗಳಿಂದಾಗಿ ವಿಳಂಬವಾಗಿದ್ದ ಈ ನೇಮಕ ಪ್ರಕ್ರಿಯೆ, ಹಲವು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಪೂರ್ಣವಾಗದೆ ಅರ್ಹ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಸರ್ಕಾರ ಪ್ರಸ್ತುತ ಮಂಜೂರಾದ ಹುದ್ದೆಗಳ ಸಂಖ್ಯೆಯಲ್ಲಿ ಶೇ.30ಕ್ಕಿಂತ ಹೆಚ್ಚನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಆದರೆ, ಅಂತಿಮ ನೇಮಕ ಆದೇಶದ ಮೊದಲು ಆಯವ್ಯಯದಲ್ಲಿ ಅನುದಾನ ಲಭ್ಯತೆ ಖಚಿತ ಪಡಿಸಿಕೊಂಡು, ಕಡ್ಡಾಯವಾಗಿ ಅನುಮತಿ ಪಡೆಯುವಂತೆಯೂ ಡಿಸಿಗಳಿಗೆ ಬರೆದಿರುವ ಪತ್ರದಲ್ಲಿ ಸರ್ಕಾರ ಸೂಚಿಸಿದೆ.
ಚಿತ್ರದುರ್ಗದಲ್ಲಿ 2020ರ ಜನವರಿ 20ರಂದು ಹೊರಡಿಸಿದ್ದ ನೇಮಕ ಅಧಿಸೂಚನೆ ಅನ್ವಯ ಹುದ್ದೆಗಳು ಭರ್ತಿ ಪ್ರಕ್ರಿಯೆ ಪೂರ್ಣವಾಗಿಲ್ಲ. ಅರ್ಹರು ಆದೇಶ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳತ್ತಿದ್ದು, ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
ಜಿಲ್ಲೆಯಲ್ಲಿ ಸದ್ಯ 356 ಮಂಜೂರಾದ ಗ್ರಾಮಲೆಕ್ಕಿಗರ ಹುದ್ದೆಗಳ ಪೈಕಿ 59ಕ್ಕೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇವು ಭರ್ತಿ ಅಥವಾ ಅ ದರಲ್ಲಿ ಮತ್ತೆ ಏನಾದರೂ ಉಳಿದರೆ ಅವನ್ನೂ ಸೇರಿಸಿ 60-70 ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸ ಬೇಕಾಗುತ್ತದೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಅರ್ಹರಿಗೆ ಆದೇಶ ಪತ್ರಗಳನ್ನು ವಿತರಿಸಿದ ಬಳಿಕ ಹೊಸದಾಗಿ ಮತ್ತೆ ಹುದ್ದೆಗಳ ಭತಿರ್ಗೆ ಪ್ರಕಟಣೆ ಹೊರಡಿಸಲಾಗುವುದು. ಹೊಸದಾಗಿ ಅಧಿಸೂಚನೆ ಹೊರಡಿಸುವ ಮುನ್ನ ಹಣಕಾಸು ಇಲಾಖೆ ಒಪ್ಪಿಗೆ ಪಡೆಯಬೇಕಿದೆ.
| ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ, ಚಿತ್ರದುರ್ಗ