More

    ಇಲ್ಲಿದೆ ನೋಡಿ ‘ಮಾದರಿ’ ಹಸಿರುಮನೆ; ಮನೆಯನ್ನೂ ಪರಿಸರಸ್ನೇಹಿಯಾಗಿಸಬಹುದು ಎನ್ನುತ್ತಿದೆ ಈ ವಿದ್ಯಾರ್ಥಿಯ ಅನ್ವೇಷಣೆ!

    ಮಂಗಳೂರು: ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಸಾಕಾರಗೊಳಿಸಿಕೊಂಡು ಹಿರಿಮೆ ಹೆಚ್ಚಿಸಿಕೊಳ್ಳುವ ಅಪೇಕ್ಷೆ ಅನೇಕರಲ್ಲಿರುತ್ತದೆ. ಇಂಥ ಅಪೇಕ್ಷೆಗೆ ಪರಿಸರಪರ ಕಾಳಜಿ ಸೇರಿಕೊಂಡರೆ ಮನೆಯನ್ನೇ ಪ್ರಾಕೃತಿಕ ಕೊಡುಗೆಯನ್ನಾಗಿ ರೂಪಿಸಬಹುದು.

    ಇಂಥದ್ದೇ ಮಾದರಿಯ ವಿನ್ಯಾಸವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್​​ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಗಮನ ಸೆಳೆಯುತ್ತಿದೆ. ಕಾರ್ಕಳದ ಕಲ್ಕಿ ಇಂಗ್ಲಿಷ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಇರ್ಬಿಸ್ ಸುಂದರವಾದ ಹಸಿರು ಮನೆಯ ಮಾದರಿಯನ್ನು ನಿರ್ಮಿಸಿದ್ದು, ಇದರೆಡೆಗೆ ಕುತೂಹಲದಿಂದ ಎಲ್ಲರೂ ಮಾಹಿತಿ ಪಡೆಯುತ್ತಿದ್ದಾರೆ.

    ಮನೆಯ ಕಟ್ಟಡ ಒಳಗೊಳ್ಳುವ ಎಲ್ಲಾ ಪರಿಕರಗಳನ್ನೂ ಪರಿಸರಸ್ನೇಹಿಯಾಗಿಸಬಹುದು ಎಂಬ ಆತ್ಮವಿಶ್ವಾಸವನ್ನು ಈ ಮಾದರಿ ಮೂಡಿಸುತ್ತಿದೆ. ಎಲೆಕ್ಟ್ರಿಸಿಟಿ, ಗೋಡೆಯ ಬಣ್ಣ, ಸಿಮೆಂಟ್, ಸ್ಟೀಲ್ ಬಳಕೆಯ ಸಂದರ್ಭದಲ್ಲಿ ಪರಿಸರಸ್ನೇಹಿ ವಸ್ತುಗಳಿಗೇ ಆದ್ಯತೆ ನೀಡಬಹುದಾದ ಮಾದರಿ ಇದು. ಗೋಡೆಗೆ ಬಳಸಲಾಗುವ ಬಣ್ಣಕ್ಕೆ ರಸಾಯನಿಕ ಅಂಶವಿಲ್ಲದ ಉತ್ಪನ್ನಕ್ಕೆ ಆದ್ಯತೆ ನೀಡುವುದು ಹೇಗೆ ಎಂಬುದನ್ನು ಈ ಮಾದರಿ ತಿಳಿಸಿಕೊಡುತ್ತಿದೆ.

    ಪರಿಸರಸ್ನೇಹಿ ಸೋಲಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಮನೆಯ ವಿದ್ಯುತ್ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಪರ್ಯಾಯ ಮಾರ್ಗವನ್ನೂ ಈ ಮಾದರಿ ಹೊಳೆಸುತ್ತಿದೆ. ಮನೆಗೆ ಪ್ರವೇಶದ್ವಾರದಲ್ಲಿ ಆರ್‌ಎಫ್‌ಐಡಿ ಸ್ಕ್ಯಾನ್ ಮಾಡುವ ಮೂಲಕ ಮನೆ ಅಂಗಣಕ್ಕೆ ಪ್ರವೇಶಿಸಬಹುದು. ಕತ್ತಲ ಸಮಯದಲ್ಲಿ ಕಾಲ್ನಡಿಗೆಯನ್ನು ಗಮನಿಸುವ ಸೆನ್ಸಾರ್, ಸ್ವಯಂಚಾಲಿತವಾಗಿ ವಿದ್ಯುತ್ ದೀಪ ಬೆಳಗುವಂತೆ ಮಾಡುತ್ತದೆ. ಇನ್ನು ಮನೆಯಲ್ಲಿ ಅಳವಡಿಸಲಾಗಿರುವ ಸಾಫ್ಟ್​ವೇರ್ ಅಪ್ಲಿಕೇಶನ್ ಧ್ವನಿಯ ಬಳಕೆಯ ಮೂಲಕ ವಿದ್ಯುತ್ ದೀಪಗಳನ್ನು ಆನ್ ಮತ್ತು ಆಫ್ ಮಾಡಬಹುದಾಗಿದೆ. ಇದರಿಂದ ಸಮಯ ಹಾಗೂ ವಿದ್ಯುತ್‌ನ ಉಳಿತಾಯವು ಆಗಲಿದೆ. ಇದು ಪರಿಸರಕ್ಕೆ ಮಹತ್ವದ ಕೊಡುಗೆ ಎಂಬುದು ವಿದ್ಯಾರ್ಥಿ ಇರ್ಬಿಸ್‌ನ ಅಭಿಪ್ರಾಯ.

    ಈ ಮಾದರಿ ವಿನ್ಯಾಸದಲ್ಲಿ ರೂಪುಗೊಳ್ಳುವ ಮನೆಯಿಂದ ಪರಿಕರಗಳಿಂದ ಪರಿಸರಕ್ಕೆ ಯಾವುದೇ ಅಪಾಯವಿಲ್ಲ. ಇವುಗಳಿಂದ ರಾಸಯನಿಕಗಳ ಬಿಡುಗಡೆಯು ಶೂನ್ಯ, ಪೈಂಟ್, ಸಿಮೆಂಟ್ ಇವುಗಳಿಂದ ಅಸ್ತಮಾದಂತಹ ರೋಗ ಮನುಷ್ಯನಲ್ಲಿ ಕಂಡುಬರುತ್ತಿದೆ. ಆದರೆ ಇಲ್ಲಿ ಬಳಸಲಾಗಿರುವ ಪ್ರತಿ ವಸ್ತುಗಳು ಯಾವುದೇ ತರಹದ ಮಾಲಿನ್ಯಕಾರಕ ಸೂಸುವ ವಸ್ತುಗಳಲ್ಲ. ನೋಡಲು ಅದೇ ತೆರನಾಗಿ ಕಂಡುಬಂದರೂ ಈ ಬಗೆಯ ಮನೆ ನಿರ್ಮಾಣದ ಪ್ರಕಾರ ಪರಿಸರಸ್ನೇಹಿಯೂ ಆಗಿದೆ. ಮನುಷ್ಯನ ಸುಸ್ಥಿರ ಆರೋಗ್ಯಕ್ಕೂ ಪೂರಕವಾಗಿದೆ.

    ಇನ್ನೂ ಗಿಡಗಳಿಗೆ ನೀರಿನ ಕೊರತೆ ಉಂಟಾದಾಗ, ಮಣ್ಣಿನಲ್ಲಿ ನೀರಿನ ತೇವ ಕಡಿಮೆಯಾಗದಂತೆ ನಿರ್ವಹಿಸಲು ಹೊಸ ಬಗೆಯ ಸೆನ್ಸಾರ್‌ನ್ನು ಅಳವಡಿಕೆ ಮಾಡಲಾಗಿದೆ. ಇದು ಸ್ವಯಂಚಾಲಿತವಾಗಿ ಮೋಟಾರ್ ಪಂಪ್‌ಆನ್ ಆಗುವ ಮೂಲಕ ನೀರಿನ ನಿರ್ವಹಣೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ.

    ಚಿತ್ರ-ವರದಿ: ರಂಜಿತ್‌ ಕುಮಾರ್
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ
    ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts