ಶಿವಮೊಗ್ಗ: ನಗರದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಅಲ್ಮಾಸ್ಬಾನು ಅವರನ್ನು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ತಾಯಿ ಮತ್ತು ನಾಲ್ವರು ಮಕ್ಕಳೂ ಆರೋಗ್ಯವಾಗಿದ್ದು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಬೀಳ್ಕೊಟ್ಟರು.
ಅಲ್ಮಾಸ್ ಬಾನು ಮೇ 23ರಂದು ಸರ್ಜಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದರು. ಮಕ್ಕಳ ತೂಕ ಕಡಿಮೆ ಹಾಗೂ ಅಲ್ಪ ಪ್ರಮಾಣದ ಉಸಿರಾಟದ ತೊಂದರೆ ಇದ್ದ ಕಾರಣ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ 2 ಶಿಶುಗಳಿಗೆ ಸಿಪ್ಯಾಪ್ ಅಳವಡಿಸಿ, ಇನ್ನೆರಡು ಶಿಶುಗಳಿಗೆ ಆಕ್ಸಿಜನ್, ಕಾಂಗೂರು ಮದರ್ ಕೇರ್ ಹಾಗೂ ಆಗಾಗ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಎದೆಹಾಲು ನೀಡಲಾಗಿತ್ತು.
ಮಕ್ಕಳು ಜನಿಸಿದ ಬಳಿಕ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಕಂಡುಬಂದಿದ್ದವು. ಆ ಸಂದರ್ಭ ಶಿಶುಗಳನ್ನು ರಕ್ಷಣೆ ಮಾಡುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ಆಸ್ಪತ್ರೆ ವೈದ್ಯರ ಬಳಗ ನಿಗಾ ವಹಿಸಿ ಚಿಕಿತ್ಸೆ ನೀಡಿದೆ. ಪರಿಣಾಮ ಆರೋಗ್ಯಪೂರ್ಣ ಮಕ್ಕಳೊಂದಿಗೆ ಅಲ್ಮಾಸ್ ಬಾನು ತಮ್ಮ ಊರಿಗೆ ತೆರಳಿದರು. ಇದು ಆಸ್ಪತ್ರೆಯ ವೈದ್ಯ ವೃಂದದಲ್ಲಿ ಸಂತಸ ಉಂಟುಮಾಡಿದೆ. ಅಲ್ಲದೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ ಸರ್ಜಿ ತಿಳಿಸಿದ್ದಾರೆ.
ನಿರ್ದೇಶಕಿ ನಮಿತಾ ಸರ್ಜಿ, ವೈದ್ಯಕೀಯ ಅಧೀಕ್ಷಕ ಡಾ. ಎಚ್.ಎಸ್.ಸತೀಶ್, ಮಕ್ಕಳ ತಜ್ಞ ಡಾ. ಅನಿಲ್ ಕಲ್ಲೇಶ್, ಪ್ರಸೂತಿ ಮತ್ತು ಹೆರಿಗೆ ತಜ್ಞೆ ಡಾ.ಚೇತನಾ, ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್ ಮತ್ತು ಸಿಬ್ಬಂದಿ ಇದ್ದರು.
ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ: ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ತುಮಕೂರಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡನ ಭೀಕರ ಹತ್ಯೆ! ಬೆಚ್ಚಿಬಿದ್ದ ಜನ