ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಅವರ ಭರತನಾಟ್ಯ ರಂಗಪ್ರವೇಶ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನ ಗ್ರ್ಯಾಂಡ್ ಥಿಯೇಟರ್ನಲ್ಲಿ ಅದ್ಭುತವಾಗಿ ನಡೆಯಿತು. ಈ ಸುಂದರ ಕ್ಷಣವನ್ನು ಸಿನಿಮಾ, ರಾಜಕೀಯ, ಕ್ರೀಡಾ ಕ್ಷೇತ್ರದ ಗಣ್ಯರು ಕಣ್ತುಂಬಿಕೊಂಡರು. ರಾಧಿಕಾರ ಭರತನಾಟ್ಯಕ್ಕೆ ಮನಸೋತ ಗಣ್ಯರು ಮನತುಂಬಿ ಹರಸಿದರು.
ರಾಧಿಕಾ ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಅವರ ಪುತ್ರಿ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಎರಡನೇ ಪುತ್ರ ಅನಂತ್ ಅಂಬಾನಿ ಅವರ ಜೊತೆ 2019ರಲ್ಲಿ ರಾಧಿಕಾರ ಮದುವೆ ನಿಶ್ಚಿತಾರ್ಥ ನಡೆದಿದೆ. ಶ್ರೀ ನಿಭಾ ಆರ್ಟ್ಸ್ನ ಶ್ರೀಮತಿ ಭಾವನಾ ಠಾಕರ್ ಅವರ ಬಳಿ ಭರತನಾಟ್ಯ ತರಬೇತಿಯನ್ನು ಪೂರ್ಣಗೊಳಿಸಿದ ರಾಧಿಕಾ ಅವರು ಭಾನುವಾರ ರಂಗಪ್ರೇಶಿಸಿದರು.
ಏಕವ್ಯಕ್ತಿ ಪ್ರದರ್ಶನ ಕಲಾರಸಿಕರ ಮನಸೆಳೆಯಿತು. ಭಾರತದ ಪ್ರಾಚೀನ ಕಲಾ ಪ್ರಕಾರದ ಜಗತ್ತು ಮತ್ತು ಕಲಾ ಪ್ರಕಾರದ ಸಂಪ್ರದಾಯದ ನಿರಂತರತೆ ಮತ್ತು ಗುರು-ಶಿಷ್ಯ ಪರಂಪರೆ ಅನಾವರಣ ಗೊಂಡಿತು. ಮುಖೇಶ್ ಅಂಬಾನಿ ಅವರ ಭಾವಿ ಸೊಸೆಯ ಭರತನಾಟ್ಯ ರಂಗಪ್ರವೇಶದಲ್ಲಿ ಗಣ್ಯರು ಸಾಂಪ್ರದಾಯಿಕ ಉಡುಗೆತೊಟ್ಟು ಆಗಮಿಸಿದ್ದು ಮತ್ತೊಂದು ಆಕರ್ಷಣೆ.
ರಾಧಿಕಾ ಅವರ ಚೊಚ್ಚಲ ಭರತನಾಟ್ಯ ಪ್ರದರ್ಶನ ಎಲ್ಲ ಸಾಂಪ್ರದಾಯಿಕ ಅಂಶಗಳನ್ನು ಒಳಗೊಂಡಿತ್ತು. ವೇದಿಕೆ ಮೇಲಿದ್ದ ನಟರಾಜ ದೇವರು, ಗುರುಗಳು, ಪ್ರೇಕ್ಷಕರ ಆಶೀರ್ವಾದ ಕೋರುವ ಮೂಲಕ ಆರಂಭವಾದ ನೃತ್ಯ ಗಣಪತಿಗೆ ವಂದನೆ ಸಲ್ಲಿಸುವ ಮೂಲಕ ಸಾಗಿತು. ಬಳಿಕ ‘ಅಚ್ಯುತಂ ಕೇಶವಂ’ ಅಂತಾ ಶಬರಿಯು ರಾಮನಿಗಾಗಿ ಕಾಯುವುದು, ಗೋಪಿಯರೊಂದಿಗೆ ಕೃಷ್ಣನ ನೃತ್ಯ, ಬಾಲ ಕೃಷ್ಣನಾಗಿ ಯಶೋದೆ ಜತೆ ಸಾಗುವ ತುಂಟಾಟಗಳ ನೃತ್ಯ ಪ್ರೇಕ್ಷಕರ ಮನರಂಜಿಸಿತು. ಮನುಷ್ಯರಲ್ಲಿ ಅಂತರ್ಗತವಾಗಿರುವ ಭಾವನೆಗಳಾದ ಕರುಣೆ, ಭಯ, ವೀರತೆ, ಕ್ರೌರ್ಯ, ಭೀಭತ್ಸ, ಅದ್ಭುತ, ಶೃಂಗಾರ ಮತ್ತು ಹಾಸ್ಯ ರಸಗಳನ್ನು ನೃತ್ಯದ ಮೂಲಕವೇ ಅಭಿವ್ಯಕ್ತಪಡಿಸಿ ಮನಸೆಳೆದರು. ರಾಧಿಕಾರ ನೃತ್ಯ ಪ್ರದರ್ಶನಕ್ಕೆ ನೆರೆದಿದ್ದ ಗಣ್ಯರು ಮೂಕವಿಸ್ಮಿತರಾದರು. ಕೊನೆಯಲ್ಲಿ ಪ್ರದರ್ಶಿಸಿದ ತಿಲ್ಲಾನ ನೃತ್ಯ… ಅದ್ಭುತವನ್ನೇ ಸೃಷ್ಟಿಸಿತು. ಪ್ರದರ್ಶನ ಮುಗಿಯುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು.
ಬಾಲಿವುಡ್ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್ನ ಹಲವಾರು ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲೂ ಕರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಮುಖೇಶ್ ಅಂಬಾನಿ ಮನೆಯಲ್ಲಿ ಇಬ್ಬರು ಭರತನಾಟ್ಯ ಕಲಾವಿದರಿದ್ದಾರೆ. ಮುಖೇಶ್ ಅವರ ಪತ್ನಿ ನೀತಾ ಅಂಬಾನಿ ಕೂಡ ಭರತನಾಟ್ಯದಲ್ಲಿ ಪ್ರವೀಣೆ. ರಾಧಿಕಾ ಅವರು ಅಂಬಾನಿ ಕುಟುಂಬದ ಎರಡನೇ ಕಲಾವಿದೆಯಾಗಿದ್ದಾರೆ.
ಸಕಲೇಶಪುರದಲ್ಲಿ ಪೈಪ್ಲೈನ್ ಕೊರೆದು ಪೆಟ್ರೋಲ್ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ