ಹುಬ್ಬಳ್ಳಿ: ಸಿನಿಮಾ ನಟಿ ಹಾಗೂ ಮಾಡೆಲ್ ಶನಾಯ ಕಾಟವೆ ಸಹೋದರನ ಹತ್ಯೆ ಕೇಸ್ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಏ.11ರಂದು ರುಂಡ-ಮುಂಡ-ಕೈಕಾಲು ಬೇರ್ಪಟ್ಟು ಅರ್ಧಂಬರ್ಧ ಸುಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಶನಾಯಳ ಅಣ್ಣ ರಾಕೇಶ್ ಕಾಟವೆಯದ್ದು ಎಂದು ಗೊತ್ತಾಗುತ್ತಿದ್ದಂತೆ ಹಲವು ರಹಸ್ಯ ಬಯಲಾಗಿತ್ತು. ರಾಕೇಶ್ ಕಾಟವೆಯನ್ನ ಶನಾಯಳ ಪ್ರಿಯಕರ ನಿಯಾಜ್ ಅಹ್ಮದ್ ಕಾಟಿಗಾರ ಕೊಲೆ ಮಾಡಿದ್ದ. ಅಷ್ಟೇ ಅಲ್ಲ, ಶವ ಇದ್ದ ಕಾರಿನಲ್ಲಿ ಹಂತಕರೊಂದಿಗೆ ಶನಾಯ ಕೂಡ ಪ್ರಯಾಣಸಿದ್ದಳು! ಶನಾಯ ಮತ್ತು ನಿಯಾಜ್ ಲವ್ಗೆ ಅಡ್ಡಿ ಬಂದಿದ್ದಕ್ಕೆ ರಾಕೇಶ್ನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಆದರೀಗ ಸತ್ಯ ಬೇರೆಯೇ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಸೋನಿಯಾ ಅಲಿಯಾಸ್ ಶನಾಯ ಕಾಟವೆ ಹೆಸರಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ಮೇಲೆ ನಿಯಾಜ್ ಅಹ್ಮದ್ ಕಣ್ಣಿಟ್ಟಿದ್ದ. ಪ್ರೀತಿ ಹೆಸರಲ್ಲಿ ಆಕೆಗೆ ಸಹಾಯ ಮಾಡಿದಂತೆ ನಟಿಸಿ, ಆಕೆಯ ಸಹೋದರ ರಾಕೇಶ ಕಾಟವೆಯನ್ನು ಹತ್ಯೆಗೈದಿದ್ದ. ನಂತರ ಸಹಚರರೊಂದಿಗೆ ಸೇರಿ ರಾಕೇಶನ ತಾಯಿಯ ಹೆಸರಲ್ಲಿದ್ದ ಸೈಟ್ನಲ್ಲೇ ಗುಂಡಿ ತೋಡಿದ್ದ ಎಂಬ ಅಂಶ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ರಾಕೇಶ ಕಾಟವೆ ರುಂಡ- ಮುಂಡ ಚಂಡಾಡಿದ ಪ್ರಕರಣ ವಾಣಿಜ್ಯ ನಗರಿ ಇತಿಹಾಸದಲ್ಲೇ ಭೀಕರವಾದುದು. ಪ್ರಕರಣದ ಆಳಕ್ಕೆ ಇಳಿದಷ್ಟು ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ. ಶನಾಯ ಕಾಟವೆ ತಾಯಿ 2019ರಲ್ಲಿ ಮೃತಪಟ್ಟಿದ್ದರು. ಅಂದಿನಿಂದ ಶನಾಯ ಒಂಟಿಯಾಗಿದ್ದಳು. ಆಕೆಯ ಸಹೋದರ ರಾಕೇಶ ಕಾಟವೆ ಪ್ರತ್ಯೇಕವಾಗಿ ವಾಸವಾಗಿದ್ದ. ಇದನ್ನೇ ದುರುಪಯೋಗ ಮಾಡಿಕೊಂಡ ನಿಯಾಜ್, ಪ್ರೀತಿಯ ಸೋಗಿನಲ್ಲಿ ಶನಾಯಗೆ ಹತ್ತಿರವಾಗಿದ್ದ. ಆಕೆಗೂ ಯಾರೂ ಇಲ್ಲದ ಕಾರಣ ಆತನ ಬಲೆಗೆ ಸುಲಭವಾಗಿ ಬಿದ್ದಳು.
ಶನಾಯ ತಾಯಿ ಹೆಸರಲ್ಲಿದ್ದ ಕೇಶ್ವಾಪುರದ 3 ಸೈಟ್ಗಳ ದಾಖಲೆ, 400 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಭ ಹಾಗೂ ಆಕೆಯ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ನಿಯಾಜ್ ತನ್ನ ವಶಕ್ಕೆ ಪಡೆದಿದ್ದ. ಶನಾಯಳ ಎಟಿಎಂ ಕಾರ್ಡ್ ಕೂಡ ಆತನ ಬಳಿಯೇ ಇತ್ತು. ಇದಕ್ಕೆ ನಿಯಾಜ್ ತಂದೆ ಸೈಫುದ್ದೀನ ಕಾಟೀಗಾರ ಹಾಗೂ ಸಹೋದರ ಫಿರೋಜ್ ಕಾಟಿಗಾರ ಕೈಜೋಡಿಸಿದ್ದರು ಎಂಬುದು ಗಮನಾರ್ಹ ಸಂಗತಿ.
ಹೀಗೆ, ಕೋಟ್ಯಂತರ ರೂ. ಆಸ್ತಿ ಇರುವುದನ್ನು ನಿಯಾಜ್ ಸೂಕ್ಷ್ಮವಾಗಿ ಗಮನಿಸಿದ್ದ. ಶನಾಯಳ ಸೈಟ್ ಎಲ್ಲಿವೆ ಎಂಬುದನ್ನೂ ಪತ್ತೆ ಹಚ್ಚಿದ್ದ. ಈ ಮಧ್ಯೆ ಶನಾಯಳ ತಾಯಿ ಹೆಸರಲ್ಲಿರುವ ಸೈಟ್ಗಳ ಬಗ್ಗೆ ರಾಕೇಶ ವಿಚಾರಣೆ ನಡೆಸಿರುವ ವಿಷಯ ನಿಯಾಜ್ಗೆ ಗೊತ್ತಾಗಿತ್ತು. ರಾಕೇಶ ಎಂಟ್ರಿ ಆದರೆ ಆಸ್ತಿ ಕೈತಪ್ಪುವ ಭೀತಿ ಎದುರಾಗಿತ್ತು. ಈ ಕಾರಣಕ್ಕಾಗಿ ಕತ್ತಿ ಮಸೆಯುತ್ತಿದ್ದ ನಿಯಾಜ್ ಸಮಯ ಸಾಧಿಸಿ, ರಾಕೇಶನನ್ನು ಹತ್ಯೆಗೈದಿದ್ದ. ರುಂಡ- ಮುಂಡ ಬೇರ್ಪಡಿಸಿದ ಬಳಿಕ ಶವ ಹೂತು ಹಾಕಲೆಂದು ಶನಾಯ ತಾಯಿ ಹೆಸರಲ್ಲಿದ್ದ ಕೇಶ್ವಾಪುರದ ಸೈಟ್ ಆಯ್ದುಕೊಂಡಿದ್ದ. ನಿಯಾಜ್ ಸಹೋದರ ಫಿರೋಜ್ ಹಾಗೂ ಇತರರು ಗುಂಡಿ ತೋಡಿದ್ದರು ಎಂದು ಮೂಲಗಳು ತಿಳಿಸಿವೆ.
ಕೊಲೆ ಆರೋಪಿಗಳಿಗೆ ಕರೊನಾ ಪಾಸಿಟಿವ್: ರಾಕೇಶ ಕಾಟವೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿಯಾಜ್ ಕಾಟಿಗಾರ ಹಾಗೂ ಕೊಲೆಯ ಮಾಸ್ಟರ್ ಮೈಂಡ್ ತೌಸೀಫ್ ಚನ್ನಾಪುರಗೆ ಕರೊನಾ ಪಾಸಿಟಿವ್ ಆಗಿದೆ. ಹೆಚ್ಚಿನ ವಿಚಾರಣೆಗೆಂದು ಗ್ರಾಮೀಣ ಠಾಣೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾಗ ಕರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ರಮೇಶ ಗೋಕಾಕ ಹಾಗೂ ಕೆಲ ಸಿಬ್ಬಂದಿ ಸಹ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಎಲ್ಲರ ವರದಿ ನೆಗೆಟಿವ್ ಬಂದಿದೆ.
ಇನ್ನೂ ಸಿಕ್ಕಿಲ್ಲ ಕಾಲು!: ಏಪ್ರಿಲ್ 12ರಂದು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದಲ್ಲಿ ರಾಕೇಶನ ರುಂಡ ಸಿಕ್ಕಿತ್ತು. ಅಂದು ಸಂಜೆ ಕೇಶ್ವಾಪುರದ ಗ್ಲೋಬಸ್ ಸ್ಮಾರ್ಟ್ ಸಿಟಿ ಅಪಾರ್ಟ್ಮೆಂಟ್ ಬಳಿ ಖಾಲಿ ಸೈಟ್ನಲ್ಲಿ ಮುಂಡ ಸಿಕ್ಕಿತ್ತು. 100 ಮೀ. ದೂರದಲ್ಲಿ ಎರಡು ಕೈಗಳು, ಒಂದು ಕಾಲು ಸಿಕ್ಕಿದ್ದವು. ಬಲಗಾಲು ಸಿಕ್ಕಿರಲಿಲ್ಲ. ಈ ಕಾಲು ಈವರೆಗೂ ಪತ್ತೆಯಾಗಿಲ್ಲ. ಬಹುಶಃ ನಾಯಿ-ನರಿ ಪಾಲಾಗಿರುವ ಶಂಕೆ ಮೂಡಿದೆ.
ಶನಾಯ ಹೆಸರಲ್ಲಿ ಕೋಟ್ಯಂತರ ರೂ. ಆಸ್ತಿ ಇದೆ. ನ್ಯಾಯಾಲಯದ ಒಪ್ಪಿಗೆ ಮೇರೆಗೆ ಚಿನ್ನಾಭರಣ ಹಾಗೂ ಮಹತ್ವದ ದಾಖಲೆಗಳನ್ನು ಶನಾಯಳ ಹೆಸರಲ್ಲಿ ಬ್ಯಾಂಕ್ ಲಾಕರ್ನಲ್ಲಿ ಇರಿಸಲಾಗಿದೆ.
|ಸಂಜಯ ಬಡಸ್ಕರ ಶನಾಯ ಪರ ವಕೀಲ
ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು
ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ
ಕಾರಿನಲ್ಲೇ ಟಿವಿ ಸೀರಿಯಲ್ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ