‘ಆರ್ಆರ್ಆರ್’ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸುತ್ತಾರೋ, ಇಲ್ಲವೋ ಎಂಬ ಸುದ್ದಿಯೊಂದು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ನಿರ್ದೇಶಕ ರಾಜಮೌಳಿ ಮಾತ್ರ, ಆಲಿಯಾ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ, ಆಕೆಯ ಬದಲು ಬೇರೆ ನಟಿ ಬರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ತೀರಾ ಇತ್ತೀಚೆಗೆ, ಆಲಿಯಾ ಅಭಿನಯದ ‘ಸಡಕ್ 2’ ಚಿತ್ರಕ್ಕೆ ಪ್ರೇಕ್ಷಕರಿಂದ ಒಂದೇ ಸಮನೆ ಡಿಸ್ಲೈಕ್ಗಳು ಸಿಕ್ಕ ಹಿನ್ನೆಲೆಯಲ್ಲಿ, ‘ಆರ್ಆರ್ಆರ್’ ಚಿತ್ರದಿಂದ ಆಲಿಯಾಗೆ ಖೊಕ್ ಕೊಡಲಾಗುತ್ತದಾ ಎಂಬ ಪ್ರಶ್ನೆ ಬಂದಿತ್ತು. ಆಗಲೂ ರಾಜಮೌಳಿ, ಯಾವುದೇ ಕಾರಣಕ್ಕೂ ತಮ್ಮ ಚಿತ್ರದ ನಾಯಕಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಕನಸು ನನಸಾಗಿಸಿಕೊಳ್ಳಲು ಸುಶಾಂತ್ ಏನು ಮಾಡಿದ್ದರು ಗೊತ್ತಾ?
ಆದರೆ, ಈಗಿನ ಸುದ್ದಿಯ ಪ್ರಕಾರ, ರಾಜಮೌಳಿ ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರಂತೆ. ಅದಕ್ಕೆ ಕಾರಣ, ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ತನಗೆ ಆಗುತ್ತಿಲ್ಲ ಎಂದು ಆಲಿಯಾ ಹೇಳಿರುವುದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ‘ಆರ್ಆರ್ಆರ್’ ಚಿತ್ರದ ಕೆಲಸಗಳು ಮುಗಿಯಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಚಿತ್ರೀಕರಣ ಮುಂದೆ ಹೋಗುತ್ತಲೇ ಇದೆ. ಬಹುಶಃ ಡಿಸೆಂಬರ್ ಹೊತ್ತಿಗೆ ಚಿತ್ರೀಕರಣ ಮತ್ತೆ ಶುರುವಾಗಬಹುದು ಎಂಬ ನಿರೀಕ್ಷೆ ಇದೆ.
ಒಂದು ಪಕ್ಷ ಡಿಸೆಂಬರ್ನಲ್ಲಿ ಚಿತ್ರೀಕರಣ ಶುರುವಾದರೆ, ಅದರಿಂದ ತಮ್ಮ ಇನ್ನಿತರ ಚಿತ್ರಗಳಿಗೆ ಸಮಸ್ಯೆ ಎದುರಾಗಬಹುದು ಎಂಬ ಭಯ ಆಲಿಯಾ ಭಟ್ ಅವರದ್ದು. ಈಗಾಗಲೇ ‘ಬ್ರಹಾಸ್ತ್ರ’, ‘ತಖ್ತ್’, ‘ಗಂಗೂಬಾಯಿ ಕತಿಯಾವಾಡಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಆಲಿಯಾ, ಆ ಚಿತ್ರಗಳಿಗೆ ಡೇಟ್ಸ್ ಕೊಟ್ಟಿದ್ದಾರಂತೆ. ಈಗ ‘ಆರ್ಆರ್ಆರ್’ ಸಹ ಅದೇ ಸಮಯದಲ್ಲಿ ಚಿತ್ರೀಕರಣವಾದರೆ, ಎಲ್ಲಾ ಚಿತ್ರಗಳಿಗೆ ಸಮಸ್ಯೆ ಎಂಬ ಕಾರಣಕ್ಕೆ, ಬೇರೆ ನಾಯಕಿಯನ್ನು ನೋಡಿಕೊಳ್ಳಿ ಎಂದು ನಿರ್ದೇಶಕ ರಾಜಮೌಳಿ ಅವರಿಗೆ ಸಂದೇಶ ರವಾನಿಸಿದ್ದಾರಂತೆ.
ಇದನ್ನೂ ಓದಿ: ಚಿರಂಜೀವಿ ಮನೆಗೆ ಬಂತು ಕಟ್ಟಿಗೆಯ ಬೈಕ್…
ನಾಯಕಿಯ ಬಾಯಿಂದಲೇ ಇಂಥದ್ದೊಂದು ಮಾತು ಬಂದಿರುವಾಗ, ರಾಜಮೌಳಿಗೂ ಬೇರೆ ದಾರಿ ಕಾಣುತ್ತಿಲ್ಲವಂತೆ. ಹಾಗಾಗಿ ಅವರು ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಲಿಯಾಗೆ ಪರ್ಯಾಯವಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ನಾಯಕಿಯನ್ನಾಗಿ ಮಾಡಿದರೆ ಹೇಗೆ ಎಂಬ ಆಲೋಚನೆ ರಾಜಮೌಳಿಗೆ ಬಂದಿದ್ದು, ಈ ಸಂಬಂಧ ಅವರನ್ನಾಗಲೇ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇಷ್ಟೆಲ್ಲಾ ಆಗುತ್ತಿದ್ದರೂ, ಚಿತ್ರತಂಡದ ಯಾರೊಬ್ಬರೂ ನಾಯಕಿ ಬದಲಾಗುತ್ತಿರುವ ಅಧಿಕೃತ ಘೋಷಣೆಯನ್ನು ಮಾಡಿಲ್ಲ.
‘ಆರ್ಆರ್ಆರ್’ ಚಿತ್ರದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ಚರಣ್ ತೇಜ ಜತೆಯಾಗಿ ನಟಿಸುತ್ತಿದ್ದು, ಅಜಯ್ ದೇವಗನ್ ಸಹ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುಇದ್ದಾರೆ. ಅಜಯ್ ದೇವಗನ್ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿ ಅವರ ಹೆಸರಿದೆ. ಇಷ್ಟೆಲ್ಲಾ ಪ್ಲಸ್ಗಳು ಇರುವುದರಿಂದ, ಆಲಿಯಾ ಚಿತ್ರದಲ್ಲಿ ನಟಿಸುವುದು ಮೈನಸ್ ಆಗುವುದಿಲ್ಲ ಎಂಬುದು ರಾಜಮೌಳಿ ಲೆಕ್ಕಾಚಾರ. ಅದೇ ಕಾರಣಕ್ಕೆ ಅವರನ್ನು ಮುಂದುವರೆಸುವುದಕ್ಕೆ ರಾಜಮೌಳಿ ತೀರ್ಮಾನಿಸಿದ್ದಾರೆ.