ನವದೆಹಲಿ: ಮಣಿಪುರ ಹಿಂಸಾಚಾರದ ವಿಚಾರದಲ್ಲಿ ವಿಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ನಡುವೆಯೇ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್, ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಭಾರತಕ್ಕೆ ತನ್ನ ನಾಯಕನ ಮೇಲೆ ನಂಬಿಕೆ ಇದೆ. ಮೋದಿ ಅವರು ಯಾವಾಗಲೂ ಈಶಾನ್ಯ ರಾಜ್ಯದ ಜನರಿಗಾಗಿ ಹೋರಾಡುತ್ತಾರೆ ಎಂದು ಮಿಲ್ಬೆನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಇಂಡಿಯಾ ವಿಪಕ್ಷಗಳ ಒಕ್ಕೂಟದ ಅವಿಶ್ವಾಸ ನಿರ್ಣಯಕ್ಕೆ ಗುರುವಾರ ಲೋಕಸಭೆಯಲ್ಲಿ ಪ್ರಧಾನಿ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಗಾಯಕಿ ಮಿಲ್ಬೆನ್ ಅವರು ಪ್ರಧಾನಿ ಪರ ಧ್ವನಿ ಎತ್ತಿದ್ದಾರೆ.
ನ್ಯಾಯ ಸಿಗಲಿದೆ
ಟ್ವೀಟ್ (ಪ್ರಸ್ತುತ ಎಕ್ಷ್) ಮಾಡಿರುವ ಮಿಲ್ಬೆನ್, ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದು, ಅವರ ನಡೆ ವಿದೇಶದಲ್ಲಿ ಭಾರತವನ್ನು ಗೌರವವನ್ನು ಕುಗ್ಗಿಸುತ್ತದೆ ಎಂದಿದ್ದಾರೆ. ಸತ್ಯವೇನೆಂದರೆ, ಭಾರತ ತನ್ನ ನಾಯಕನ ಮೇಲೆ ನಂಬಿಕೆ ಇಟ್ಟಿದೆ. ಮಣಿಪುರದ ತಾಯಂದಿರು, ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ನ್ಯಾಯ ಸಿಗಲಿದೆ ಮತ್ತು ಪ್ರಧಾನಿ ಮೋದಿ ಅವರು ನಿಮ್ಮ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡಲಿದ್ದಾರೆ ಎಂದು ಮಿಲ್ಬೆನ್ ಹೇಳಿದ್ದಾರೆ.
ನನಗೆ ವಿಶ್ವಾಸವಿದೆ
ವಿರೋಧದ ಧ್ವನಿಗಳು ಸತ್ವವಿಲ್ಲದೆ ಜೋರಾಗಿ ಜಪಿಸುತ್ತವೆ. ಆದರೆ ಸತ್ಯವು ಯಾವಾಗಲೂ ಜನರನ್ನು ಮುಕ್ತಗೊಳಿಸುತ್ತದೆ ಎಂದಿರುವ ಮಿಲ್ಬೆನ್, ಸ್ವಾತಂತ್ರ್ಯವು ಮೊಳಗಲಿ. ನನ್ನ ಪ್ರೀತಿಯ ಭಾರತ, ಸತ್ಯವನ್ನು ಹೇಳಲಿ. ಪ್ರಧಾನಿ ಮೋದಿಯವರೇ ನಿಮ್ಮ ಮೇಲೆ ನನಗೆ ವಿಶ್ವಾಸವಿದೆ. ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ ಎನ್ನುವ ಮೂಲಕ ಮಿಲ್ಬೆನ್ ಪ್ರಧಾನಿ ಪರ ಬ್ಯಾಟ್ ಬೀಸಿದ್ದಾರೆ.
The truth: India has confidence in its leader. The mothers, daughters, and women of #Manipur, India will receive justice. And #PMModi will always fight for your freedom.
The truth: to associate with a party that dishonors cultural legacy, denies children the right to sing the… pic.twitter.com/KzI7oSO1QL
— Mary Millben (@MaryMillben) August 10, 2023
ಪ್ರಧಾನಿ ಕಾಲಿಗೆ ಬಿದ್ದಿದ್ದರು
ಅಂದಹಾಗೆ ಮಿಲ್ಬೆನ್ ಅವರು ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಆಗಿದ್ದಾರೆ. ರಾಷ್ಟ್ರಗೀತೆ ಜನ ಗಣ ಮನ ಮತ್ತು ಓಂ ಜೈ ಜಗದೀಶ ಹರೆ ಹಾಡನ್ನು ಹಾಡುವ ಮೂಲಕ ಭಾರತದಲ್ಲೂ ತುಂಬಾ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡಿದ ಬಳಿಕ ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನಮನ ಗೆದ್ದಿತು.
ಅವಿಶ್ವಾಸ ನಿರ್ಣಯಕ್ಕೆ ಸೋಲು
ಇನ್ನೂ ನಿರೀಕ್ಷೆಯಂತೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವಿಶ್ವಾಸ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ನಿರ್ಣಯ ಸೋಲು ಕಂಡಿದೆ. ಪ್ರಧಾನಮಂತ್ರಿ ಭಾಷಣದ ಮಧ್ಯೆಯೇ ವಿಪಕ್ಷದ ಹಲವು ಸಂಸದರು ಸಭಾತ್ಯಾಗ ಮಾಡಿದ್ದರಿಂದ ವಿಪಕ್ಷ ಸಂಸದರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿತ್ತು.
ಇಂಥ ಅವಿಶ್ವಾಸ ನಿರ್ಣಯಗಳು ನನಗೆ ಶುಭ ಸಂಕೇತ ಎಂದು ವಿಪಕ್ಷಗಳನ್ನೇ ತಿವಿದ ಪಿಎಂ, ವಾಸ್ತವದಲ್ಲಿ ಇದು ಪ್ರತಿಪಕ್ಷಗಳಿಗೇ ಎದುರಾಗಿದ್ದ ಪರೀಕ್ಷೆ. ಅವರ ಬಗ್ಗೆ ಜನರೇ ನಿರ್ಣಯ ತೆಗೆದುಕೊಳ್ಳುತ್ತಾರೆ. ನಂತರದಲ್ಲಿ ದೊಡ್ಡ ಜನಾದೇಶದೊಂದಿಗೆ ಬಿಜೆಪಿಯನ್ನೇ ಅಧಿಕಾರಕ್ಕೆ ತರುತ್ತಾರೆ. 2028ರಲ್ಲೂ ಇಂಥದ್ದೇ ಸನ್ನಿವೇಶಕ್ಕೆ ದೇಶ ಸಾಕ್ಷಿಯಾಗಲಿದೆ. ವಿಪಕ್ಷದವರು ಯಾವುದೇ ಸಂಸ್ಥೆ ವಿರುದ್ಧ ಮಾತನಾಡಲಿ. ಅಲ್ಲಿಗೆ ಸಂಸ್ಥೆಯ ಅದೃಷ್ಟವೇ ಬದಲಾದಂತೆ ಎಂದರು.
ಮಣಿಪುರದಲ್ಲಿ ಶಾಂತಿ ಮರಳಲಿದೆ: ಅವಿಶ್ವಾಸ ನಿರ್ಣಯದ ಮೇಲೆ ಮೂರು ದಿನ ಭರಪೂರ ಚರ್ಚೆಗಳು ನಡೆದಿದ್ದು, ಬುಧವಾರ ಗೃಹ ಸಚಿವ ಅಮಿತ್ ಶಾ ಮಣಿಪುರ ಹಿಂಸಾಚಾರದ ಬಗ್ಗೆ ಸುದೀರ್ಘ ಉತ್ತರ ನೀಡಿದ್ದರು. ಹೀಗಾಗಿ, ಮಣಿಪುರದ ಬಗ್ಗೆ ನಾನು ಹೆಚ್ಚು ಹೇಳುವಂಥದ್ದಿಲ್ಲ. ವಿಪಕ್ಷಗಳ ಪ್ರಶ್ನೆಗೆ ಗೃಹ ಸಚಿವರೇ ಉತ್ತರ ನೀಡಿದ್ದಾರೆ. ವಿಪಕ್ಷಗಳು ಕೇವಲ ರಾಜಕೀಯ ಮಾಡುತ್ತಿವೆ ಎಂದರು. ಮಣಿಪುರ ಸಹಜ ಸ್ಥಿತಿಗೆ ಮರಳಿ ಶಾಂತಿ ಮತ್ತೆ ನೆಲೆಸಲಿದೆ ಎಂದು ಭರವಸೆ ನೀಡಿದ ಮೋದಿ, ಇಡೀ ದೇಶ ಮತ್ತು ಸಂಸತ್ತು ಮಣಿಪುರದೊಂದಿಗಿದೆ ಎಂದು ಅಲ್ಲಿನ ಎಲ್ಲ ಸೋದರಿ, ತಾಯಂದಿರಿಗೆ ಹೇಳಬಯಸುತ್ತೇನೆ. ಮಣಿಪುರದ ಅಭಿವೃದ್ಧಿಗಾಗಿ ನಾವು ಶ್ರಮಿಸಲಿದ್ದೇವೆ. ಅಲ್ಲಿನ ಘಟನಾವಳಿಗಳಿಗೆ ವಿಪಕ್ಷಗಳ ರಾಜಕಾರಣವೇ ಕಾರಣ ಎಂದು ದೂರಿದರು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದ ಕ್ರಮಗಳ ಬಗ್ಗೆ ವಿವರಣೆ ನೀಡಿದ ಮೋದಿ, ಅಲ್ಲಿಗೆ ನಾನೇ 50ಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ ಮತ್ತು ನಮ್ಮ ಸಚಿವರು 400 ಬಾರಿ ಭೇಟಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. 1966ರಲ್ಲಿ ಮಿಜೋರಾಂನಲ್ಲಿ ನಾಗರಿಕರ ಮೇಲೆ ದಾಳಿ ಮಾಡಲು ವಾಯುಸೇನೆ ಬಳಸಿಕೊಂಡಿದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಮತ್ತು 80ರ ದಶಕದಲ್ಲಿ ಅಕಾಲ್ ತಖ್ತ್ ವಿರುದ್ಧವೂ ಮಿಲಿಟರಿ ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. (ಏಜೆನ್ಸೀಸ್)
ಮಕ್ಕಳಿಬ್ಬರ ಮನವೊಲಿಸಿ ಒಟ್ಟಿಗೆ ಸಾವಿನ ಹಾದಿ ಹಿಡಿದ ತಾಯಿ: ಬಿಟ್ಟು ಬಿಡದೆ ಕಾಡಿದ ನೋವಿಗೆ ಕಣ್ಮರೆಯಾದ ಕುಟುಂಬ