ನವದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಲ್ಕರ್(26) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪಿ ಅಫ್ತಾಬ್ ಹೊಸ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ಧಾನೆ.
ವಿಚಾರಣೆ ವೇಳೆ ಆರೋಪಿ ಪ್ರಿಯಕರ ಅಫ್ತಾಬ್ ಪೂನಾವಾಲಾ ಕೊಲೆ ಆರೋಪವನ್ನು ನಿರಾಕರಿಸಿದ್ದು ವಿಚಾರಣೆ ಎದುರಿಸಲು ಸಿದ್ದನಿರುವುದಾಗಿ ನ್ಯಾಯಾಲಯದ ಮುಂದೆ ಹೇಳಿದ್ದಾನೆ.
ಆರೋಪ ನಿರಾಕರಣೆ
ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರಿಯಕರ ಅಫ್ತಾಬ್ ಪೂನಾವಾಲಾ ತನಗೂ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾನೆ.
ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದ ಮುಂದೆ ಮಾತನಾಡಿದ ಆರೋಪಿ ಅಫ್ತಾಬ್ ತಾನು ಹತ್ಯೆ ಮಾಡಿಲ್ಲ ವಿಚಾರಣೆ ಎದುರಿಸಲು ಸಿದ್ದನಿದ್ದೇನೆ ಎಂದು ನ್ಯಾಯಾಪೀಠ ಮುಂದೆ ವಿವರಿಸಿದ್ದಾನೆ.
ಇದನ್ನೂ ಓದಿ: ಕೇರಳ ಟೂರಿಸ್ಟ್ ಬೋಟ್ ದುರಂತ; 22 ಮಂದಿ ಮೃತ್ಯು, ಹಲವರು ನಾಪತ್ತೆ
ಉಪವಾಸ ಸತ್ಯಾಗ್ರಹ
ಪ್ರಕರಣವನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಕರಣ ಇತ್ಯರ್ಥಗೊಂಡಲ್ಲಿ ಮಗಳ ಅಂತ್ಯಕ್ರಿಯೆಯನ್ನು ಮಾಡಬಹುದು ಹಾಗೂ ವಿಧಿವಿಧಾನಗಳನ್ನು ನೆರವೇರಿಸಬಹುದು. ಪ್ರಕರಣದ ವಿಚಾರಣೆಯನ್ನು ಇನ್ನೊಂದು ತಿಂಗಳಲ್ಲಿ ಮುಗಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದರು.
ವಿಚಾರಣೆ ಮುಂದೂಡಿಕೆ
ಹತ್ಯೆ ಪ್ರಕರಣದ ವಿಚಾರವಾಗಿ ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನ್ಯಾಯಾಪೀಠವು ಆರೋಪಿ ಪ್ರಿಯಕರನ ವಿರುದ್ಧ ಭಾರತ ದಂಡ ಸಂಹಿತೆ(IPC Section) 302(ಕೊಲೆ), 201(ಸಾಕ್ಷ್ಯ ನಾಶ) ಅಡಿ ಪ್ರಕರಣ ದಾಖಲಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 1ಕ್ಕೆ ನಡೆಸಲಾಗುವುದು ಎಂದು ಹೇಳಿ ನ್ಯಾಯಾಲಯ ಮುಂದೂಡಿದೆ.