ಬೆಂಗಳೂರು: ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಚೆನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿ, ಡಿವೈಎಸ್ಪಿ ಅಂಥೋನಿ ಜಾನ್ ಮುಂದೆ ಹಾಜರಾದರು.
ನಿರೀಕ್ಷಣಾ ಜಾಮೀನು ಆದೇಶದ ಪ್ರತಿ ತಮ್ಮ ವಕೀಲರಿಗೆ ಲಭ್ಯವಾಗಿ ಮಾಹಿತಿ ಸಿಕ್ಕ ಬೆನ್ನಲ್ಲೇ ಸಂಜಯ್ ನಗರದ ತಮ್ಮ ಮನೆಯಿಂದ ತೆರಳಿ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾದರು. ತಮ್ಮೊಂದಿಗೆ 5 ಲಕ್ಷದ ಬಾಂಡ್ ಹಾಗೂ ಜಾಮೀನುದಾರರನ್ನೂ ಕರೆತಂದಿದ್ದರು. ಅವರ ಪರ ಇಬ್ಬರ ಶ್ಯೂರಿಟಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳಲ್ಲ; ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು
ತನಿಖಾಧಿಕಾರಿ ಕೇಳುವ ಪ್ರಾಥಮಿಕ ಮಾಹಿತಿಗಳಿಗೆ ಮಾತ್ರ ವಿರೂಪಾಕ್ಷಪ್ಪ ಉತ್ತರಿಸಿದ್ದಾರೆ. ಇದಕ್ಕೂ ಮುನ್ನ ತನಿಖಾಧಿಕಾರಿಳಿಗೆ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನು ಆದೇಶದ ಪ್ರತಿಯನ್ನು ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲರು ನೀಡಿದರು.
ಏನಿದು ಪ್ರಕರಣ?
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ (ಮಾ. 02) ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಕೆಎಸ್ಡಿಎಲ್ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಅವರನ್ನು 40 ಲಕ್ಷ ಲಂಚ ಪಡೆಯುತ್ತಿದ್ದಾಗ ಗುರುವಾರ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅವರ ಖಾಸಗಿ ಕಚೇರಿಯಲ್ಲಿ ಇನ್ನೂ ಒಟ್ಟು 2.02 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು.
ಬಳಿಕ ಡಾಲರ್ಸ್ ಕಾಲೋನಿಯ ಪ್ರಶಾಂತ್ ಮನೆಯ ಮೇಲೆ ದಾಳಿಮಾಡಿದ್ದ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು. ಗುರುವಾರ ಸಂಜೆ ಖಾಸಗಿ ಕಚೇರಿಯಲ್ಲಿ 2.42 ಕೋಟಿ ಮತ್ತು ಮಧ್ಯರಾತ್ರಿ ಡಾಲಸ್೯ ಕಾಲನಿಯ ಪ್ರಶಾಂತ್ ನಿವಾಸದಲ್ಲಿ 6 ಕೋಟಿ ಸೇರಿ ಒಟ್ಟಾರೆ 8.42 ಕೋಟಿ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಮರು ಸ್ಥಾಪನೆಯಾದ ಮೇಲೆ ಲೋಕಾ ಪೊಲೀಸರು ಭೇಟೆಯಾಡಿರುವ ದೊಡ್ಡ ಮೊತ್ತದ ಪ್ರಕರಣ ಇದಾಗಿದ್ದು, ಈ ಪ್ರಕರಣ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಪಾಕಿಸ್ತಾನದ ಹೈದರಾಬಾದ್ನಲ್ಲಿ ಖ್ಯಾತ ಹಿಂದು ವೈದ್ಯನ ಬರ್ಬರ ಹತ್ಯೆ: ಕಾರು ಚಾಲಕ ಅರೆಸ್ಟ್
ಈ ಪ್ರಕರಣದ ಬಳಿಕ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ನಂತರ ಜಾಮೀನಿಗಾಗಿ ತಮ್ಮ ಪರ ವಕೀಲರಿಂದ ಅರ್ಜಿ ಸಲ್ಲಿಸಿದ್ದರು. ಜಾಮೀನು ಮಂಜೂರಾಗಿದ್ದು, ಬಂಧನ ಭೀತಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದಾರೆ. (ದಿಗ್ವಿಜಯ ನ್ಯೂಸ್)
ಲೋಕಾಯುಕ್ತ ದಾಳಿ ಪ್ರಕರಣ: ವಿರೂಪಾಕ್ಷಪ್ಪಗೆ ಹೈಕೋರ್ಟ್ ರಿಲೀಫ್, ಮಧ್ಯಂತರ ಜಾಮೀನು ಮಂಜೂರು
ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು: ಬೆಂಗಳೂರು ವಕೀಲರ ಸಂಘದಿಂದ ಸುಪ್ರೀಂಕೋರ್ಟ್ ಸಿಜೆಗೆ ಪತ್ರ, ಹೀಗೊಂದು ಮನವಿ