ಮುಂಬೈ: ತನಗೆ ನಟನೆ ಸಾಕಾಗಿದೆ, ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಆಮೀರ್ ಖಾನ್ ಮೊದಲೇ ಸೂಕ್ಷ್ಮವಾಗಿ ಹೇಳಿದ್ದರು. ಅದಕ್ಕೆ ಸರಿಯಾಗಿ ‘ಚಾಂಪಿಯನ್’ ಚಿತ್ರದಲ್ಲಿ ನಟಿಸುವುದರಿಂದ ಹಿಂದೆ ಸರಿದಿದ್ದರು. ಆಮೀರ್ ತಾನೊಲ್ಲೆ ಎಂದು ಹೇಳುತ್ತಿದ್ದರೂ, ಅವರ ಜತೆಗೆ ಕೆಲಸ ಮಾಡುವುದಕ್ಕೆ ಆಸೆ ಪಡುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಈಗಿನ ಸುದ್ದಿಯ ಪ್ರಕಾರ, ಆಮೀರ್ ಖಾನ್ ಜತೆಗೆ ಕೆಲಸ ಮಾಡುವುದಕ್ಕೆ ‘ಉಗ್ರಂ’ ಮತ್ತು ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಸಹ ಆಸಕ್ತಿ ತೋರಿಸಿದ್ದಾರಂತೆ.
ಇದನ್ನೂ ಓದಿ: ‘ಛೂ ಮಂತರ್’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್ …
ಪ್ರಶಾಂತ್ ಸದ್ಯ ‘ಸಲಾರ್’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಕೆಲಸಗಳೆಲ್ಲ ಮುಗಿದ ನಂತರ ಅವರು ಜ್ಯೂನಿಯರ್ ಎನ್ಟಿಆರ್ಗೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್ ಎದುರು ಖಳನಾಯಕನನ್ನಾಗಿ ಆಮೀರ್ ಖಾನ್ ಅವರನ್ನು ಕರೆತರುವುದು ಪ್ರಶಾಂತ್ ಯೋಚನೆಯಂತೆ.
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳಲ್ಲಿ ನಾಯಕನಿಗಿರುವಷ್ಟೇ ಪ್ರತಿನಾಯಕನಿಗೂ ಸ್ಕೋಪ್ ಇರುತ್ತದೆ. ‘ಕೆಜಿಎಫ್ 2’ ಚಿತ್ರದಲ್ಲಿ ಯಶ್ ಎದುರು ಸಂಜಯ್ ದತ್ ಅವರನ್ನು ನಿಲ್ಲಿಸಿದ್ದರು ನೀಲ್. ‘ಸಲಾರ್’ನಲ್ಲಿ ಪ್ರಭಾಸ್ಗೆ ವಿಲನ್ ಆಗಿ ಪೃಥ್ವಿರಾಜ್ ಸುಕುಮಾರನ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅದೇ ರೀತಿ, ಜ್ಯೂನಿಯರ್ ಎನ್ಟಿಆರ್ ಅಭಿನಯದ ಹೊಸ ಚಿತ್ರದಲ್ಲಿ ಅವರಿಗೆ ವಿಲನ್ ಆಗಿ ಆಮೀರ್ ಖಾನ್ರನ್ನು ಕರೆತಂದರೆ ಹೇಗೆ ಎಂಬ ಯೋಚನೆ ಪ್ರಶಾಂತ್ ಅವರದ್ದು.
ಇದನ್ನೂ ಓದಿ: ಈ ಆರು ಓಟಿಟಿಗಳು 2022ರಲ್ಲಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?
ಈ ಚಿತ್ರ ಘೋಷಣೆಯಾಗಿದೆಯಾದರೂ, ಪ್ರಾರಂಭವಾಗುವುದೇನಿದ್ದರೂ 2024ರಲ್ಲಿ. ಇನ್ನು, ಬಿಡುಗಡೆಯಾಗುವುದು 2025ರಲ್ಲಿ. ಸಾಕಷ್ಟು ಸಮಯವಿರುವುದರಿಂದ, ಆಮೀರ್ ಖಾನ್ ಅವರನ್ನು ಒಪ್ಪಿಸಿ ಹೇಗಾದರೂ ಕರೆ ತರಬೇಕು ಎನ್ನುವುದು ಪ್ರಶಾಂತ್ ಐಡಿಯಾ. ಬರೀ ಪ್ರಶಾಂತ್ ಅಷ್ಟೇ ಅಲ್ಲ, ದಕ್ಷಿಣದ ಇನ್ನೂ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಆಮೀರ್ ಅವರನ್ನು ತಮ್ಮ ಚಿತ್ರಕ್ಕಾಗಿ ಸಂಪರ್ಕಿಸಿದ್ದಾರಂತೆ. ಈ ಪೈಕಿ ಯಾರಿಗೆ ಅವರು ಗ್ರೀನ್ ಸಿಗ್ನಲ್ ಕೊಡುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
‘ಸೂರ್ಯ 42’ ಚಿತ್ರದ ಹಿಂದಿ ಅವತರಣಿಕೆಗೆ 100 ಕೋಟಿ ಕೊಟ್ಟರಂತೆ ‘RRR’ ವಿತರಕ!