ಬೆಂಗಳೂರು: ದೇಶ ಮಾತ್ರವಲ್ಲದೆ ರಾಜ್ಯದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಕೈಗೊಂಡಿರುವುದಲ್ಲದೆ, ಕೋವಿಡ್ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯ ನಿಯಮ ಸೇರಿದಂತೆ ಎಲ್ಲ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೊಸದೊಂದು ಆದೇಶವನ್ನು ಹೊರಡಿಸಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆ ಉಂಟಾಗಿದ್ದು, ಜೂ. 9ರಂದು 471 ಹೊಸ ಪ್ರಕರಣಗಳು ಹಾಗೂ ಪಾಸಿಟಿವ್ ಪ್ರಮಾಣ ಶೇ. 2.14 ಕಂಡುಬಂದಿದೆ. ಕೋವಿಡ್ 19 ಮೂರನೇ ಅಲೆಯ ನಂತರದ ಅವಧಿಯ ಏರಿಕೆ ಇದಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಆರೋಗ್ಯ ಇಲಾಖೆ ಹೊಸ ಆದೇಶ ಹೊರಡಿಸಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿರುವ ಇಲಾಖೆ, ಈ ಕುರಿತು ಮಾರ್ಷಲ್/ಪೋಲೀಸ್ ಸಿಬ್ಬಂದಿಯ ಸಹಾಯ ಪಡೆಯಲು ಸೂಚಿಸಿದೆ.