ಮೈಸೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರು ಮೈಸೂರಿನಲ್ಲಿರುವ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣ ಆಗಬೇಕು ಎಂದು ಕಂಡ ಕನಸಿಗೆ ಇಂದು ಶಂಕುಸ್ಥಾಪನೆ ಆಗಿದೆ. ಹೌದು, 1998 ರಲ್ಲಿ ಪಾರ್ವತಮ್ಮ ರಾಜ್ಕುಮಾರ್ ಪ್ರಾರಂಭಿಸಿದ್ದ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣಕ್ಕೆಂದು ಇಂದು ಅಡಿಗಲ್ಲು ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ ಸೆಂಚುರಿ ಸ್ಟಾರ್ ನಟ ಶಿವರಾಜ್ಕುಮಾರ್, ಪತ್ನಿ ಗೀತಾ ಶಿವರಾಜ್ಕುಮಾರ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಸ್.ಟಿ.ಸೋಮಶೇಕರ್ ಸೇರಿ ಹಲವರು ಪಾಲ್ಗೊಂಡಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲು ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದು, ಬಳಿಕ ಶಕ್ತಿಧಾಮದ ಈ ವಿದ್ಯಾಶಾಲಾ ಶಂಕುಸ್ಥಾಪನೆಯನ್ನು ಸಹ ಮಾಡಿದರು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ಮಾತನಾಡಿದ್ದು, ”ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ರೀತಿ ಎಂದೂ ವರ್ತಿಸಲಿಲ್ಲ. ಅವರೊಬ್ಬ ಕಾಮನ್ ಮ್ಯಾನ್” ಎಂದು ಶ್ಲಾಘಿಸಿದರು.
ಬಳಿಕ, ”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಸರ್ಕಾರ ನಮಗೆ ಸಾಕಷ್ಟು ಭರವಸೆಗಳನ್ನು ನೀಡಿದೆ. ಇಂತಹ ಸಿಎಂ ಅನ್ನು ನಾನು ಹಿಂದೆಂದು ನೋಡಿಲ್ಲ. ನಮ್ಮ ಕುಟುಂಬದ ಮೇಲೆ ಅವರಿಗೆ ಸಿಕ್ಕಾಪಟ್ಟೆ ಪ್ರೀತಿ ಇದೆ. ನಮಗೆ ಅದ್ಭುತವಾಗಿ ಪ್ರತಿಕ್ರಿಯೆ ನೀಡಿ ಸಹಕರಿಸಿದ್ದಾರೆ”, ಎಂದು ಹೇಳುತ್ತಾ ಭಾವುಕರಾದರು. ಹಾಗೆಯೇ, ”ನನ್ನ ಉಸಿರಿರುವವರೆಗೂ ಇಲ್ಲಿನ ಮಕ್ಕಳ ಜೊತೆ ಇರುತ್ತೇನೆ” ಎಂದ ನಟ ಶಿವರಾಜ್ಕುಮಾರ್ ಅವರು ಸಿಎಂ ಜತೆಗೆ ಶಕ್ತಿಧಾಮಕ್ಕೆ ಕಟ್ಟಡ ಕಟ್ಟಿಕೊಟ್ಟ ಸುಧಾಮೂರ್ತಿ ಅವರು ಹಾಗೂ ಕಾರ್ಯಕ್ರಮದಲ್ಲಿದ್ದ ಸುತ್ತೂರು ಶ್ರೀಗಳಿಗೆ ಧನ್ಯವಾದ ತಿಳಿಸಿದರು.
ಮಾತು ಮುಂದುವರಿಸಿದ ಶಿವಣ್ಣ, ”ಅಮ್ಮ ಶಕ್ತಿಧಾಮಕ್ಕೆ ಹೋಗುವಂತೆ ಹೇಳುತ್ತಿದ್ದರು. ನಾನು ಅವಾಗ ಬಹಳ ಕಡಿಮೆ ಬರುತ್ತಿದೆ. ಯಾವಾಗ ಮನಸ್ಸು ಬರುತ್ತದೆಯೋ ಅವಾಗ ಹೋಗಲಿ ಎಂದು ತಂದೆ ಹೇಳುತ್ತಿದ್ದರು. ನನಗೆ ಶಕ್ತಿಧಾಮಕ್ಕೆ ಹೋಗಬಾರದು ಎಂಬ ಯೋಚನೆ ಇರಲಿಲ್ಲ. ಇತ್ತೀಚೆಗೆ, ಮೈಸೂರಿಗೆ ಹೆಚ್ಚಾಗಿ ಶೂಟಿಂಗ್ಗೆ ಬರುತ್ತಿದ್ದೇನೆ. ಅದರಲ್ಲೂ, ಕಳೆದ 7 ರಿಂದ 8 ತಿಂಗಳಿಂದ ಹೆಚ್ಚೆಚ್ಚು ಬರುತ್ತಿದ್ದೇನೆ. ಮಕ್ಕಳ ಜೊತೆ ಮಗುವಾಗಿ ನಾನು ಇರುತ್ತಿದ್ದೇನೆ. ಈ ಮಕ್ಕಳಲ್ಲಿ ಅಪ್ಪುನ ನೋಡುತ್ತಿದ್ದೇನೆ”, ಎಂದು ಶಿವಣ್ಣ ಹೇಳಿಕೊಂಡರು.
ಇನ್ನು, ಶಕ್ತಿಧಾಮದ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ”ಸ್ತ್ರಿ ಅಂದರೆ ಒಂದು ಶಕ್ತಿ. ಭಗವಂತ ಸೃಷ್ಟಿ ಮಾಡುವಾಗ ತಾಯಂದರಿಗೆ ಹೆಚ್ಚು ತೂಕ ಕೊಟ್ಟಿದಾನೆ. ಶಿವರಾಜ್ ಕುಮಾರ್ ಅವರು ಇದನ್ನು ಮುನ್ನಡೆಸುತ್ತಿರುವುದು ಖುಷಿಯ ವಿಚಾರ. ಒಂದು ಸರ್ಕಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಅಪ್ಪುಗೆ ತಾಯಿ ಕರುಳು ಇತ್ತು. ಈ ಕಾರಣಕ್ಕೆ ಅವರು ಇಷ್ಟೊಂದು ಜನಕ್ಕೆ ಸಹಾಯ ಮಾಡಿದ್ದರು”, ಎಂದು ಹೇಳಿದ್ದಾರೆ. ಅಂದಹಾಗೆ, ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣ ಮಾಡಬೇಕು ಎಂಬುದು ದೊಡ್ಮನೆ ಕುಟುಂಬದ ಬಹು ವರ್ಷಗಳ ಕನಸಾಗಿದ್ದು, ಪುನೀತ್ ರಾಜ್ಕುಮಾರ್ ಸಹ ಇದೇ ಕನಸು ಹೊಂದಿದ್ದರು.
ಮಾರ್ಚ್ 4 ರಂದು ಬಜೆಟ್ ಮಂಡಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಶಕ್ತಿಧಾಮದ ಆವರಣದಲ್ಲೇ ಶಾಲೆ ನಿರ್ಮಾಣ ಮಾಡಲು 4 ಎಕರೆ ಜಾಗ ಇದ್ದು, ಅಲ್ಲಿ ಶಾಲೆ ಖಚಿತವಾಗಿ ನಿರ್ಮಾಣ ಆಗುತ್ತೆ ಎಂಬ ಭರವಸೆ ನೀಡಿದರು. ಇನ್ನು, 1 ರಿಂದ 8 ನೇ ತರಗತಿವರೆಗೆ ಶಾಲೆ ನಡೆಸಲು ಅನುಮತಿ ಈಗಾಗಲೇ ಸಿಕ್ಕಿದೆ. ಹಾಗಾಗಿ, ಇಂದು ಶಾಲೆ ನಿರ್ಮಾಣದ ಶಂಕುಸ್ಥಾಪನೆ ನೆರವೇರಿದೆ. ಜತೆಗೆ, ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂಪಾಯಿ ನೆರವನ್ನು ನೀಡಲಾಗುವುದು ಎಂದು ಸಿಎಂ ಇಂದು ಘೋಷಿಸಿದರು.
‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?
ಚಿಲ್ಡ್ ಬಿಯರ್ ದಾನ ಮಾಡಿ ಎಂದ ಅಭಿಮಾನಿ; ಬಿಯರ್ ಜತೆ ಮಿಕ್ಸ್ಚರ್ ಸಾಕಾ ಎಂದ ರಿಯಲ್ ಹೀರೋ!
ಬಿ.ಎಸ್.ವೈ ಜತೆ ತೆರೆಹಂಚಿಕೊಳ್ಳಲಿದ್ದಾರೆ ಸಚಿವ ಸುಧಾಕರ್! ‘ತನುಜಾ’ ಚಿತ್ರದಲ್ಲಿ ಯಾವ ಪಾತ್ರ?
ಮುಹೂರ್ತ, ಚಿತ್ರೀಕರಣಕ್ಕೆ ಮೊದಲೇ ದಾಖಲೆ ಬರೆದ ದುನಿಯಾ ವಿಜಯ್ ನಿರ್ದೇಶನದ 2ನೇ ಚಿತ್ರ ಭೀಮ!