ಬೆಂಗಳೂರು: ಸಿನಿಮಾ ಜಗತ್ತು ಕ್ರೀಡಾಕಾರರನ್ನು ಮತ್ತು ರಾಜಕಾರಣಿಗಳ ಗಮನ ಸೆಳೆದಿರುವುದು ಇದೇನು ಮೊದಲಲ್ಲ. ಜತೆಗೆ, ಅನೇಕ ಕ್ಷೇತ್ರಗಳ ಜನರು ಬಣ್ಣದ ಲೋಕದ ಜತೆಗೆ ಒಳ್ಳೆಯ ನಂಟು ಹೊಂದಿದ್ದಾರೆ. ಇದೀಗ, ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಅಭಿನಯಿಸೋಕೆ ರೆಡಿಯಾಗಿದ್ದಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ‘ತನುಜಾ‘ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ತನುಜಾ‘ ಒಂದು ರಿಯಲ್ ಲೈಫ್ ಘಟನೆಯ ಕಥೆಯನ್ನು ಆಧರಿಸಿಕೊಂಡಿರುವ ಸಿನಿಮಾ ಆಗಿದೆ. ಅಂದಹಾಗೆ, ತನುಜಾ ಎಂಬ ಹುಡುಗಿ ಕರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತರಾದ ವಿಶ್ವೇಶ್ವರ ಭಟ್, ಪ್ರದೀಪ್ ಈಶ್ವರ್ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದ ಸುದ್ದಿ ಇಡೀ ರಾಜ್ಯಕ್ಕೆ ತಿಳಿದಿದೆ.
ಹೌದು, ಕರೊನಾ ಸಮಯದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು 350 ಕಿಮೀ ದೂರ ಪ್ರಯಾಣ ಮಾಡಿದ ತನುಜಾ ಎಂಬ ಹುಡುಗಿಯ ಜೀವನದ ಈ ರೋಚಕ ಘಟನೆಯೇ ಸಿನಿಮಾದ ಕಥೆಯಾಗಿದೆ. ಇನ್ನು, ಆ ಘಟನೆಯನ್ನೇ ಸ್ಟೋರಿ ಮಾಡಿಕೊಂಡ ನಿರ್ದೇಶಕ ಹರೀಶ್ ಅವರ ‘ತನುಜಾ‘ ಸಿನಿಮಾದಲ್ಲಿ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಟಿಸುತ್ತಿದ್ದಾರೆ ಎಂದು ಘೋಷಣೆ ಆಗಿತ್ತು. ಆದರೆ, ಈಗ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕೂಡಾ ಈ ಚಿತ್ರತಂಡವನ್ನು ಸೇರಿಕೊಂಡಿರುವ ವಿಷಯ ತಿಳಿದುಬಂದಿದೆ. ತನುಜಾಳ ಜೀವನದಲ್ಲಿ ನಡೆದ ಆ ಘಟನೆಯ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದರೆ ಜತೆಗೆ ಈಗಿನ ಆರೋಗ್ಯ ಸಚಿವರಾಗಿರುವ ಡಾ. ಕೆ.ಸುಧಾಕರ್ ಅವರೇ ಆಗಲೂ ಆರೋಗ್ಯ ಸಚಿವರಾಗಿದ್ದರು. ಈ ಮೂಲಕ ತಮ್ಮ ರಿಯಲ್ ಲೈಫ್ ಪಾತ್ರಕ್ಕೆಂದೇ ರಾಜ್ಯದ ಇಬ್ಬರು ಖ್ಯಾತ ರಾಜಕಾರಣಿಗಳು ಮೊದಲ ಬಾರಿಗೆ ಬಣ್ಣ ಹಚ್ಚುಲು ರೆಡಿಯಾಗಿದ್ದಾರೆ.
ಹಾಗಾಗಿ, ಸಿನಿಪ್ರಿಯರ ಮತ್ತು ರಾಜಕೀಯ ವಲಯದಲ್ಲಿ ಹಾಗೂ ಜನಸಾಮಾನ್ಯರಲ್ಲಿ ಕೂಡ ಈ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ ಎಂದರೇ ತಪ್ಪಾಗುವುದಿಲ್ಲ. ಚಿತ್ರದಲ್ಲಿ ತನುಜಾ ಎಂಬ ಪಾತ್ರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು’ ಖ್ಯಾತಿಯ ಸಪ್ತಾ ಪಾವೂರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಜತೆಗೆ ರಾಜೇಶ್ ನಟರಂಗ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಅವರು ಕೂಡಾ ಬೇರೆ ಬೇರೆ ಪಾತ್ರಗಳಲ್ಲಿ ಬೆಳ್ಳಿ ತೆರೆಯ ಮೇಲೆ ಮಿಂಚಲಿದ್ದಾರೆ. ಹಾಗೆಯೇ, ದ್ಯೋತನ್ ಅವರು ಸಂಗೀತ ನಿರ್ದೇಶನ ಮಾಡಲಿದ್ದು, ರವೀಂದ್ರನಾಥ್ ಅವರು ಛಾಯಾಗ್ರಹಕರಾಗಿದ್ದು, ಉಮೇಶ್ ಆರ್.ಬಿ ಅವರ ಸಂಕಲನ ಈ ಸಿನಿಮಾಗಿದೆ. ‘ಬಿಯಾಂಡ್ ವಿಷನ್ಸ್ ಸಿನಿಮಾಸ್ ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.
‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?
ಚಿಲ್ಡ್ ಬಿಯರ್ ದಾನ ಮಾಡಿ ಎಂದ ಅಭಿಮಾನಿ; ಬಿಯರ್ ಜತೆ ಮಿಕ್ಸ್ಚರ್ ಸಾಕಾ ಎಂದ ರಿಯಲ್ ಹೀರೋ!