ಬೆಂಗಳೂರು: ನಗರದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ‘ನಮ್ಮ ಮೆಟ್ರೊ’ ಹಂತ-2 ರ ಭಾಗವಾಗಿ ನಿರ್ಮಿಸಲಾಗಿರುವ 7.5 ಕಿಮೀ ಉದ್ದದ ಪಶ್ಚಿಮ ವಿಸ್ತರಣಾ ಮಾರ್ಗವನ್ನು ಇಂದು ಉದ್ಘಾಟಿಸಲಾಯಿತು. ಬೆಳಿಗ್ಗೆ 10.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ವಸತಿ-ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನಾಯಂಡನಹಳ್ಳಿ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿ ಸಾರ್ವಜನಿಕರ ಪ್ರಯಾಣಕ್ಕೆ ಚಾಲನೆ ನೀಡಿದರು.
ಪಶ್ಚಿಮ ವಿಸ್ತರಣೆ ಕಾರ್ಯಾಚರಣೆ ಮಾರ್ಗದಲ್ಲಿ ಮೈಸೂರು ರಸ್ತೆ ನಿಲ್ದಾಣದ ನಂತರ 6 ಹೊಸ ನಿಲ್ದಾಣಗಳನ್ನು ಈಗ ನಿರ್ಮಿಸಲಾಗಿದೆ. ಅವುಗಳೆಂದರೆ – ನಾಯಂಡನಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳು. ಒಟ್ಟು 7.5 ಕಿಮೀ ಉದ್ದದ ಮೇಲ್ಮಾರ್ಗದ (ಎಲಿವೇಟೆಡ್) ಮೆಟ್ರೋ ಮಾರ್ಗಕ್ಕೆ ಚಾಲನೆ ಸಿಕ್ಕಿದ್ದು, ಇದು ಅದಾಗಲೇ ಕಾರ್ಯನಿರ್ವಹಿಸುತ್ತಿದ್ದ 18.1 ಕಿಮೀ ನೇರಳೆ ಮಾರ್ಗದ ವಿಸ್ತರಣೆಯಾಗಿದೆ.
ಇದನ್ನೂ ಓದಿ: ಸಚಿವರ ಮುಂದೆಯೇ ಪಿಕ್ಪ್ಯಾಕೆಟ್: ಖದೀಮನ ಕೈಚಳಕದ ಫೋಟೋ ಸಿಕ್ಕಾಪಟ್ಟೆ ವೈರಲ್!
ಈ ವಿಸ್ತರಣೆಯೊಂದಿಗೆ, ಪೂರ್ವ-ಪಶ್ಚಿಮ ಕಾರಿಡಾರ್(ನೇರಳೆ ಮಾರ್ಗ) ಇದೀಗ 23 ನಿಲ್ದಾಣಗಳನ್ನು ಪಡೆದಿದ್ದು, 25.6 ಕಿಮೀ ಉದ್ದವಾದಂತಾಗಿದೆ. ಇದರ ನಿರ್ಮಾಣ ಕಾಮಗಾರಿಯು ಫೆಬ್ರವರಿ 2016 ರಲ್ಲಿ ಆರಂಭವಾಗಿತ್ತು. ವೇಗದ ಪ್ರಯಾಣ ಮತ್ತು ಸ್ಮಾರ್ಟ್ ಚಲನಶೀಲತೆ ಸಾಧಿಸುವ ಮಿಷನ್ 2022 ರ ಯಶಸ್ಸಿನತ್ತ ಇದು ಗುರುತರ ಹೆಜ್ಜೆಯಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಘಾಟನೆಯ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಜನರು ಹೆಚ್ಚು ವಾಸವಿರುವ ಪ್ರದೇಶದಲ್ಲಿ ಮೆಟ್ರೋ ಮಾರ್ಗ ನಿರ್ಮಿಸುತ್ತಿರುವುದು ಉಪಯುಕ್ತವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ನಗರಕ್ಕೆ ಭವಿಷ್ಯದಲ್ಲಿ ಮೆಟ್ರೋ ತುಂಬಾ ಸಹಕಾರಿಯಾಗಲಿದೆ. ವಿದೇಶಿ ಹೂಡಿಕೆದಾರರು, ಐಟಿ ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಮೆಟ್ರೋ ಅಗತ್ಯವಾಗಿದೆ ಎಂದರು.
ನಗರದಲ್ಲಿ ಒಟ್ಟು 317 ಕಿಮೀ ಮೆಟ್ರೋ ಮಾರ್ಗ ನಿರ್ಮಾಣದ ಗುರಿಯಿದ್ದು, ಈಗ 56 ಕಿಮೀ ಪೂರ್ಣಗೊಂಡಿದೆ. ಮುಂದಿನ ವರ್ಷಾಂತ್ಯಕ್ಕೆ 36 ಕಿಮೀ ವಿಸ್ತರಣೆ ಮಾಡುವುದಾಗಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ 2ನೇ ಹಂತವನ್ನು 2025ಕ್ಕೆ ಪೂರ್ಣಗೊಳಿಸುವ ಗುರಿಯಿದೆ. ಆದರೆ, ಅದನ್ನು 2024ಕ್ಕೆ ಪೂರ್ಣಗೊಳಿಸಲು ಸೂಚಿಸಿದ್ದೇನೆ. ನಂತರ 3ನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.