ಅಮೃತಸರ : ಪಂಜಾಬ್ನ ಅಮೃತಸರದ ಖಾಸಗಿ ಆಸ್ಪತ್ರೆಯೊಂದರಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದ ಆರು ಜನ ರೋಗಿಗಳು ಆಕ್ಸಿಜನ್ ಕೊರತೆಯಿಂದಾಗಿ ಸಾವಪ್ಪಿರುವ ಘಟನೆ ವರದಿಯಾಗಿದೆ. ಮೃತರಲ್ಲಿ ಐದು ಜನರು ಕರೊನಾ ಪಾಸಿಟೀವ್ ಆಗಿದ್ದರು. ಒಬ್ಬರು ಅನ್ಯ ಸಮಸ್ಯೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಸಾವು ಸಂಭವಿಸಿರುವ ನೀಲ್ಕಂಠ್ ಆಸ್ಪತ್ರೆಯ ನಿರ್ವಾಹಕರಾದ ಸುನಿಲ್ ದೇವಗನ್ ಅವರು ಜಿಲ್ಲಾಡಳಿತವನ್ನು ದೂಷಿಸಿದ್ದಾರೆ. “ಜಿಲ್ಲಾಡಳಿತವನ್ನು ನಮಗೆ ಆಕ್ಸಿಜನ್ ಪೂರೈಸಲು ಮತ್ತೆ ಮತ್ತೆ ಕೇಳಿಕೊಂಡೆವು. ಆದರೆ ನಮಗೆ ಯಾರೂ ಸ್ಪಂದಿಸಲಿಲ್ಲ” ಎಂದಿದ್ದಾರೆ. “ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಕ್ಸಿಜನ್ ಪೂರೈಸುವ ಸಲುವಾಗಿ ಅಮೃತಸರದ ಎಲ್ಲಾ ಆಕ್ಸಿಜನ್ ಪ್ಲ್ಯಾಂಟ್ಗಳನ್ನು ಜಿಲ್ಲಾಡಳಿತ ಹತೋಟಿಗೆ ತೆಗೆದುಕೊಂಡುಬಿಟ್ಟಿದೆ. ಕಳೆದ 48 ಗಂಟೆಗಳಲ್ಲಿ ನಮ್ಮ ಎಲ್ಲಾ ಸಂಪನ್ಮೂಲಗಳನ್ನೂ ನಾವು ಬಳಸಿದ್ದೇವೆ. ಎಲ್ಲರನ್ನೂ ಸಹಾಯಕ್ಕಾಗಿ ಸಂಪರ್ಕಿಸಿದ್ದೇವೆ. ಆದರೆ ಸರ್ಕಾರ ಸಹಾಯ ಮಾಡಲು ತಯಾರಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳು ಎಲ್ಲಿಗೆ ಹೋಗಬೇಕು ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಲಂಚದ ಕೇಸು ದಾಖಲಿಸಿದ ಸಿಬಿಐ ; ತನಿಖೆ ಆರಂಭ
ರೋಗಿಗಳ ಸಾವಿನ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಹೇಳಿದ್ದಾರೆ. “ನಾವು ಈ ಸಾವುಗಳ ಬಗ್ಗೆ ತನಿಖೆ ನಡೆಸುತ್ತೇವೆ. ಜೊತೆಗೆ ಕಾನೂನುಬಾಹಿರವಾಗಿ ಮೆಡಿಕಲ್ ಆಕ್ಸಿಜನ್ಅನ್ನು ಪೂರೈಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
ಸಾವು ಆಕ್ಸಿಜನ್ ಕೊರತೆಯಿಂದಲೇ ಉಂಟಾಗಿದೆಯೇ ಎಂದು ತನಿಖೆ ನಡೆಸಲಾಗುವುದು. ಆಸ್ಪತ್ರೆಯವರು ಯಾವ ಅಧಿಕಾರಿಗಳನ್ನು ಸಂಪರ್ಕಿಸಿದರು ಎಂದೂ ತಿಳಿದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಹುಸ್ಸನ್ ಲಾಲ್ ಹೇಳಿದ್ದಾರೆ. (ಏಜೆನ್ಸೀಸ್)
‘ಮೇನಲ್ಲಿ ಪೀಕ್ ತಲುಪಲಿದೆ, ಅದಕ್ಕೆ ಸಿದ್ಧತೆ ಏನು ?’ – ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
25 ಹೊಸ ರೆಮ್ಡೆಸಿವಿರ್ ಉತ್ಪಾದನಾ ಘಟಕಗಳು ; ದಿನಕ್ಕೆ 3 ಲಕ್ಷ ವಯಲ್ ಗುರಿ !