ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಕ್ಷೇತ್ರದ ಜನರಿಗಾಗಿ ಹಲವಾರು ಸ್ಟಾರ್ ನಟರು ಮುಂದೆ ಬಂದು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಥದ್ದೊಂದು ಉದ್ದೇಶಕ್ಕಾಗಿ ಕಳೆದ ಎರಡು ದಿನಗಳ ಹಿಂದಷ್ಟೇ ಮುಂದೆ ಬಂದಿದ್ದರು. ಮೃಗಾಲಯಗಳಲ್ಲಿನ ಪ್ರಾಣಿಗಳಿ ರಕ್ಷಣೆಗೆ ಮನವಿ ಮಾಡಿ, ದತ್ತು ಪಡೆಯುವಂತೆ ಕೋರಿದ್ದರು. ಅದರಂತೆ ಕೇವಲ ಅವರ ಮನವಿಯ ಹಿನ್ನೆಲೆಯಲ್ಲಿ ದೊಡ್ಡ ಬದಲಾವಣೆಯೇ ನಡೆದುಹೋಗಿದೆ.
ಇದನ್ನೂ ಓದಿ: ಎಲ್ಲಿ ನನ್ನ ಚಪ್ಪಲ್?; ಯಾಮಿಗೆ ಕಾಲೆಳೆದವರಿಗೆ ಕಂಗನಾ ತರಾಟೆ
ಹೌದು.. ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಪ್ರಾಣಿಪ್ರಿಯ ದರ್ಶನ್ ಮೃಗಾಲಯದ ಪ್ರಾಣಿಗಳ ಪರವಾಗಿ ದನಿ ಎತ್ತಿದ್ದರು. ಕರೊನಾದ ಕಾರಣದಿಂದಾಗಿ ಮೃಗಾಲಯಕ್ಕೂ ಸಂಕಷ್ಟ ಎದುರಾಗಿದ್ದು, ಪ್ರಾಣಿಗಳ ಬದುಕಿಗೂ ಕಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪ್ರಾಣಿಗಳ ಕುರಿತ ಪ್ರೀತಿಯನ್ನು ವ್ಯಕ್ತಪಡಿಸಿ ನೆರವಾಗಬೇಕೆಂದು ವಿಡಿಯೋ ಮೂಲಕ ಕೋರಿಕೊಂಡಿದ್ದರು. ಇದೀಗ ಹಾಗೇ ಕೋರಿದ ಬೆನ್ನಲ್ಲೇ ರಾಜ್ಯದ ಹಲವು ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ನೂರಾರು ಮಂದಿ ದತ್ತು ಪಡೆದಿದ್ದಾರೆ. ಕೇವಲ ಎರಡೇ ದಿನದಲ್ಲಿ 25 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ.
ಧನ್ಯವಾದಗಳು ಶ್ರೀ ದರ್ಶನ್ ತೂಗುದೀಪ ರವರಿಗೆ @dasadarshan ಮತ್ತು ಅವರ ಅಭಿಮಾನಿಗಳಿಗೆ. Two days, #25lacs of adoption & donations. ನಿಮ್ಮ ಪ್ರತಿಕ್ರಿಯೆಗೆ ನಮ್ಮ ನಮನಗಳು 🙏🙏🙏 @aranya_kfd @CMofKarnataka @ArvindLBJP @PTI_News @ani_digital @Mysore_Zoo @bannerghattazoo @Shimogazooands1 @CZA_Delhi @ pic.twitter.com/G6hBFoUkT4
— Zoos of Karnataka (@ZKarnataka) June 6, 2021
ಕರೊನಾದಿಂದಾಗಿ ಕರ್ನಾಟಕದ 9 ಮೃಗಾಲಯಗಳಿಗೂ ಸಮಸ್ಯೆ ಆಗಿರುವ ಬಗ್ಗೆ ನಟ ದರ್ಶನ ಕಳವಳ ವ್ಯಕ್ತಪಡಿಸಿದ್ದರು. ಪ್ರವಾಸಿಗರು ಬರದೇ ಇರುವುದರಿಂದ ಈ ಮೃಗಾಲಯಗಳಲ್ಲಿರುವ ಒಟ್ಟು 5 ಸಾವಿರ ಪ್ರಾಣಿಗಳಿಗೆ ಕಷ್ಟ ಎದುರಾಗಿದೆ. ಹಾಗಂತ ಎಲ್ಲರೂ ಮನೆಯಲ್ಲಿ ಪ್ರಾಣಿ ಸಾಕಲು ಆಗುವುದಿಲ್ಲ. ಆದರೆ ಈ ಪ್ರಾಣಿಗಳನ್ನು ದತ್ತು ಪಡೆಯಬಹುದು. ಅದಕ್ಕಾಗಿ ವರ್ಷಕ್ಕೊಮ್ಮೆ ಮಾತ್ರ ಹಣ ಕೊಟ್ಟರೆ ಸಾಕು. ಅಲ್ಲದೆ ಆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗಲಿದೆ. ಸಾಧ್ಯವಿರುವ ಎಲ್ಲರೂ ಪ್ರಾಣಿಗಳನ್ನು ದತ್ತು ಪಡೆಯಬೇಕು ಎಂದು ಅವರು ಮೃಗಾಲಯದಲ್ಲಿ ಪ್ರಾಣಿಗಳ ಮುಂದೆ ನಿಂತುಕೊಂಡು ವಿಡಿಯೋ ಮಾಡಿದ್ದರು.
ಇದನ್ನೂ ಓದಿ: ಇಂದು ಚಿರು ಸರ್ಜಾ ಪುಣ್ಯಸ್ಮರಣೆ; ಅಗಲಿ ಇಂದಿಗೆ ಭರ್ತಿ 1 ವರ್ಷ
ಅದರಂತೆ ಇದೀಗ ಬೆಳಗಾವಿ ಮೃಗಾಲಯ 32 ಸಾವಿರ, ಗದಗ ಮೃಗಾಲಯ 38 ಸಾವಿರ, ಕಲಬುರಗಿ ಮೃಗಾಲಯ 47 ಸಾವಿರ, ದಾವಣಗೆರೆ ಮೃಗಾಲಯ 62 ಸಾವಿರ, ಹಂಪಿ ಮೃಗಾಲಯ 64 ಸಾವಿರ, ಚಿತ್ರದುರ್ಗ 30 ಸಾವಿರ, ಬನ್ನೇರುಘಟ್ಟ ಮೃಗಾಲಯ 7ಲಕ್ಷ 30 ಸಾವಿರ, ಶಿವಮೊಗ್ಗ ಮೃಗಾಲಯ 1ಲಕ್ಷ 20 ಸಾವಿರ, ಮೈಸೂರು ಝೂ 14 ಲಕ್ಷ ಹೀಗೆ ಒಟ್ಟಾರೆಯಾಗಿ ಕೇವಲ ಎರಡೇ ದಿನದಲ್ಲಿ 25 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದ್ದು, ನೂರಾರು ಮಂದಿ ಅಲ್ಲಿನ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.