ನವದೆಹಲಿ: ಸ್ವಯಂಘೋಷಿತ ತನಿಖಾಧಿಕಾರಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಹೌದು, ಸ್ವಯಂ ಘೋಷಿತ ತನಿಖಾಧಿಕಾರಿ ದೀಪ್ತಿ ಪಿನ್ನಿತಿ ಅವರು ಯೂಟ್ಯೂಬ್ನಲ್ಲಿನ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ನಟಿ ಶ್ರೀದೇವಿ ಸಾವಿನ ಕುರಿತು ತಮ್ಮ ಹಕ್ಕುಗಳನ್ನು ಬೆಂಬಲಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಗಣ್ಯರ ನಕಲಿ ಪತ್ರಗಳನ್ನು ತಯಾರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ನಕಲಿ ದಾಖಲೆಗಳು ಸೃಷ್ಟಿ
ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಸಿಬಿಐ ವರದಿಯ ಪ್ರಕಾರ, ಯೂಟ್ಯೂಬ್ನಲ್ಲಿ ನಡೆದ ಚರ್ಚೆಯಲ್ಲಿ ಪ್ರಧಾನಿ ಮತ್ತು ರಕ್ಷಣಾ ಸಚಿವರಿಗೆ ಸಂಬಂಧಿಸಿದ ದಾಖಲೆಗಳು ನಕಲಿ ಎಂದು ತನಿಖೆಯಿಂದ ತಿಳಿದುಬಂದಿದೆ. 120-ಬಿ (ಕ್ರಿಮಿನಲ್ ಪಿತೂರಿ), 465, 469 ಮತ್ತು 471 ಸೇರಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಇದೀಗ ಪಿನ್ನಿತಿ ಮತ್ತು ಕಾಮತ್ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ.
View this post on Instagram
ಅಧಿಕಾರಿಗಳು ಹೇಳಿದ್ದೇನು?
ಮುಂಬೈ ವಕೀಲರಾದ ಚಾಂದಿನಿ ಶಾ ಅವರ ದೂರಿನ ಮೇರೆಗೆ ಕಳೆದ ವರ್ಷ ಸಿಬಿಐ ಭುವನೇಶ್ವರದ ದೀಪ್ತಿ ಆರ್. ಪಿನ್ನಿತಿ ಮತ್ತು ಅವರ ವಕೀಲ ಭರತ್ ಸುರೇಶ್ ಕಾಮತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಧಾನಿ ಮತ್ತು ರಕ್ಷಣಾ ಸಚಿವರ ಪತ್ರಗಳು, ಸುಪ್ರೀಂ ಕೋರ್ಟ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರದ ದಾಖಲೆಗಳು ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಪಿನ್ನಿತಿ ಅವರು ಸಲ್ಲಿಸಿದ್ದಾರೆ ಎಂದು ಚಾಂದಿನಿ ಆರೋಪಿಸಿದ್ದಾರೆ.
ಶ್ರೀದೇವಿ ಫೆಬ್ರವರಿ 2018 ರಲ್ಲಿ ಯುಎಇಯ ದುಬೈನಲ್ಲಿ ನಿಧನರಾದರು. ಶ್ರೀದೇವಿ ಸಾವಿನ ಕುರಿತು ಸಂದರ್ಶನವೊಂದರಲ್ಲಿ ಪಿನ್ನಿತಿ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದರು. ದೀಪ್ತಿ ಪಿನ್ನಿತಿ ಅವರು ಶ್ರೀದೇವಿಗೆ ಮಾಮುಷಿ ವಿಷವನ್ನು ನೀಡಲಾಯಿತು. ಅದು ಹಾವಿನ ವಿಷವಾಗಿದೆ ಎಂದು ಹೇಳಿದ್ದರು. ವಿಡಿಯೋ ಹೊರಬಿದ್ದ ನಂತರ ದೀಪ್ತಿ ಪಿನ್ನಿತಿ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಪಿನ್ನಿತಿ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ, ಸಿಬಿಐ ಡಿಸೆಂಬರ್ 2 ರಂದು ಭುವನೇಶ್ವರದಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಿತು, ಇದರಲ್ಲಿ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳು ಸೇರಿದಂತೆ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಯಿತು.
ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆಗೆ ಸಂಬಂಧಿಸಿದಂತೆ ಪಿನ್ನಿತಿ ಅವರು, ನನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಸಿಬಿಐ ನನ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ನಂಬುವುದು ಕಷ್ಟ ಎಂದು ತಿಳಿಸಿದ್ದಾರೆ.