ಬೆಂಗಳೂರು: ಡ್ರ್ಯಾಗರ್ ಹಿಡಿದು ಹಾಡಹಗಲಲ್ಲೇ ನಡುರಸ್ತೆಯಲ್ಲೇ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಗರದ ಪುಲಿಕೇಶಿನಗರದ ವಿವೇಕಾನಂದನಗರ ರೆಸಿಡೆನ್ಸಿ ಬಳಿ ನಡೆದಿದೆ.
ಆತಂಕದ ಕಾರ್ಮೋಡ
ಯುವತಿಗೆ ಕಿರುಕುಳ ನೀಡುತ್ತಿದ್ದ ವೇಳೆ ಮತ್ತೊಬ್ಬ ಮಹಿಳೆ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯಿಂದ ಇದೀಗ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಬೆಂಗಳೂರಿನಲ್ಲಿ ಹಗಲಿನಲ್ಲಿಯೇ ಮಹಿಳೆಯರು ಓಡಾಡಲು ಅಸಾಧ್ಯವಾಗುತ್ತಿದೆಯಾ? ನಗರದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಯ್ತಾ? ಎಂಬ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ: ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ
ನೆರವಿಗೆ ಧಾವಿಸಿದ ಮಹಿಳೆ
ಸಿಸಿಟಿವಿಯಲ್ಲಿ ಯುವತಿಗೆ ಕಿರುಕುಳ ನೀಡಿರುವ ದೃಶ್ಯ ದಾಖಲಾಗಿದೆ. ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ್ದಲ್ಲದೆ, ಆಕೆಯ ಮೊಬೈಲ್ ಅನ್ನು ಕಸಿಯುವ ಪ್ರಯತ್ನವನ್ನು ಕೂಡ ದುಷ್ಕರ್ಮಿ ಮಾಡಿದ್ದಾನೆ. ಡ್ರ್ಯಾಗರ್ ಹಿಡಿದು ಯುವತಿಯ ಬೆನ್ನಟ್ಟುತ್ತ ಬಂದಿದ್ದ ಅಪರಿಚಿತನನ್ನು ಕಂಡ ಕೂಡಲೇ ಮತ್ತೊಬ್ಬ ಮಹಿಳೆ ನೆರವಿಗೆ ಧಾವಿಸಿ ರಕ್ಷಣೆ ಮಾಡಿದ್ದಾರೆ.
ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿಲ್ಲ
ಆ ಏರಿಯಾದಲ್ಲಿ ಸರಿಯಾಗಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದೇ ರೀತಿ ಘಟನೆಗಳು ಮರುಕಳಿಸಿದರೆ ಯುವತಿಯರು ಓಡಾಡುವುದು ತುಂಬಾ ಕಷ್ಟವಾಗುತ್ತದೆ ಎಂದಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. (ಏಜೆನ್ಸೀಸ್)
ಶಿವಮೊಗ್ಗದಲ್ಲಿ ಹಣಕ್ಕಾಗಿ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು: 20 ಲಕ್ಷ ರೂ.ಗೆ ಬೇಡಿಕೆ