ಬೆಂಗಳೂರು: ಅಡ್ಡಾದಿಟ್ಟಿ ಚಾಲನೆ ಮಾಡಿಕೊಂಡು ಬಂದ ಕಾರು ಚಾಲಕ ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಗುದ್ದಿದ ಪರಿಣಾಮ ಚಾಲಕ ಮತ್ತು ಪ್ರಯಾಣಿಕರ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಆನಂತಪುರ ಜಿಲ್ಲೆ ಬೊಮ್ಮನಹಳ್ಳ ನಿವಾಸಿ ಕಾರ್ತಿಕ್ (23) ಮತ್ತು ಪ್ರಕಾಶಂ ಜಿಲ್ಲೆಯ ಭಗಿರಧ ರೆಡ್ಡಿ (17) ಮೃತ ಯುವಕರು. ವ್ಯಾಸಂಗ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕಾರ್ತಿಕ್, ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಚಂದ್ರಾಪುರದಲ್ಲಿ ಬಾಡಿಗೆ ರೂಮ್ನಲ್ಲಿ ನೆಲೆಸಿದ್ದ. ಇನ್ನು ಭಗಿರಥ ರೆಡ್ಡಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಹೊಸೂರು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಇಬ್ಬರು ಸ್ನೇಹಿತರಾಗಿದ್ದು, ಎಷ್ಟು ವರ್ಷ ಮತ್ತು ಹೇಗೆ ಪರಿಚಯ ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ವಿಧಿವಶ
ಸೋಮವಾರ ರಾತ್ರಿ ಇಬ್ಬರು ಕಂಠಮಟ್ಟ ಮದ್ಯ ಸೇವನೆ ಮಾಡಿದ್ದು, ಕಾರ್ತಿಕ್ ತನ್ನ ಕಾರಿನಲ್ಲಿ ಸ್ನೇಹಿತನ್ನು ಕರೆದುಕೊಂಡು ಜಾಲಿ ರೈಡ್ಗೆ ಬಂದಿದ್ದಾರೆ. ಬೆಳಗಿನ ಜಾವ 4.40ರಲ್ಲಿ ಹೊಸೂರು ಮುಖ್ಯ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಸಿಲ್ಕ್ಬೋರ್ಡ್ ಆ್ರ್ಯಾಂಪ್ ಹತ್ತಿರ ಅತೀ ವೇಗ ಮತ್ತು ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಬಂದಿದ್ದಾರೆ.
ಹೊಸೂರು ಕಡೆ ಮಾರ್ಗದಿಂದ ಸೆಂಟರ್ ಮೀಡಿಯನ್ ದಾಟಿ ಬೆಂಗಳೂರು ಕಡೆಯ ಮಾರ್ಗದಲ್ಲಿ ರೂಪೇನಾ ಅಗ್ರಹಾರ ಕಡೆಯಿಂದ ಮಡಿವಾಳ ಕಡೆಗೆ ಚಾಲನೆಯಲ್ಲಿದ್ದ ವಾಹನಕ್ಕೆ ಕಾರು ಗುದ್ದಿದೆ. ಅದೇ ವೇಗದಲ್ಲಿ ಮುಂದಕ್ಕೆ ಚಲಿಸಿ ಕಾರಿನ ಹಿಂಭಾಗದಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ತಮಿಳುನಾಡಿನ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿತ್ತು.
ಇದನ್ನೂ ಓದಿ: H3N2 ವೈರಸ್ಗೆ ರಾಜ್ಯದಲ್ಲಿ ಮೊದಲ ಬಾರಿಗೆ ಓರ್ವ ವಿಧಿವಶ…
ಕಾರಿನ ಒಳಗಿದ್ದ ಕಾರ್ತಿಕ್ ಮತ್ತು ಭಗಿರಧ ರೆಡ್ಡಿ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದರು. ಕಾರು ಚಾಲಕ ಕಾರ್ತಿಕ್, ಅತೀವೇಗ ಮತ್ತು ಅಜಾಗರೂಕ ಚಾಲನೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಎರಡು ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿಸಿದ್ದು, ಪಾಲಕರು ಬಂದ ಮೇಲೆ ಮರಣೋತ್ತರ ಪರೀಕ್ಷೆ ಮುಗಿಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗುತ್ತದೆ. ಅಲ್ಲದೆ, ಮೃತ ಯುವಕರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.vijayavani.net/arun-somanna-speaks-against-vijayendra-publically/